ರಾಜ್ಯ ಸರಕಾರದ ಸರ್ವರ್ ಗಳನ್ನು ಕೇಂದ್ರ ಸರಕಾರ ಹ್ಯಾಕ್ ಮಾಡಿದೆ: ಸಚಿವ ಸತೀಶ್ ಜಾರಕಿಹೊಳಿ ಆರೋಪ
''ಆನ್ಲೈನ್ನಲ್ಲಿ ಸಮಸ್ಯೆಯಾದರೆ ಆಫ್ಲೈನ್ನಲ್ಲಿ ಅರ್ಜಿ ಪಡೆಯುತ್ತೇವೆ''
ಬೆಳಗಾವಿ, ಜೂ.20: ಗ್ಯಾರಂಟಿ ಯೋಜನೆಗಳ ಜಾರಿಗೆ ಪ್ಲಾನ್ ಮಾಡಿದ್ದೇವೆ. ಆದರೆ, ಕೇಂದ್ರ ಸರಕಾರವು ನಮ್ಮ ಸರ್ವರ್ನ್ನು ಹ್ಯಾಕ್ ಮಾಡಿದ್ದರಿಂದ ಸೇವಾ ಸಿಂಧು ವೆಬ್ಸೈಟ್ ನಿರ್ವಹಿಸದಂತಾಗಿತ್ತು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ.
ಅನ್ನ ಭಾಗ್ಯ ಯೋಜನೆಗೆ ಪೂರೈಸಲು ನಿರಾಕರಿಸಿರುವ ಕೇಂದ್ರ ಸರಕಾರದ ನಿರ್ಧಾರ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ಲ್ಯಾನ್ ಮಾಡದೇ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ ವಿಚಾರಕ್ಕೆ ಈ ರೀತಿ ಉತ್ತರಿಸಿದರು.
ಇವಿಎಂ ರೀತಿಯಲ್ಲಿ ಕೇಂದ್ರ ಸರಕಾರವು ಸರ್ವರ್ನ್ನು ಹ್ಯಾಕ್ ಮಾಡಿದೆ. ಅದನ್ನು ಸರಿಪಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ಎಷ್ಟೇ ಹ್ಯಾಕ್ ಮಾಡಿದರೂ ನಮ್ಮ ಯೋಜನೆ ಜಾರಿಗೆ ತರುತ್ತೇವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಇನ್ನು ಆನ್ಲೈನ್ನಲ್ಲಿ ಸಮಸ್ಯೆ ಆದರೆ ಕೈಯಿಂದ ಅರ್ಜಿ ಸ್ವೀಕಾರ ಮಾಡುತ್ತೇವೆ. ಒಂದು ತಿಂಗಳು ತಡ ಆಗಬಹುದು. ಅದಕ್ಕಿಂತ ಹೆಚ್ಚು ವಿಳಂಬ ಆಗುವುದಿಲ್ಲ ಎಂದರು. ಇದೇ ವೇಳೆ ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಇರುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಈ ವಿಚಾರವನ್ನು ಸಿದ್ದರಾಮಯ್ಯನವರನ್ನೇ ನೀವು ಕೇಳಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಲೋಕಸಭೆ ಚುನಾವಣೆವರೆಗೂ ಅಷ್ಟೇ ಅಲ್ಲ ಐದು ವರ್ಷದವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದು ತಿಳಿಸಿದರು.