ಬೆಂಗಳೂರು | ಇಪಿಎಫ್ಒ ನೌಕರರ ಕೋ-ಆಪರೇಟಿವ್ ಸೊಸೈಟಿಯ ಹಣ ದುರ್ಬಳಕೆ ಆರೋಪ: ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು : ಇಪಿಎಫ್ಒ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಹಣ ದುರ್ಬಳಕೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಇಲ್ಲಿನ ಕಬ್ಬನ್ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೊಸೈಟಿಯ ಸಿಇಒ ಗೋಪಿನಾಥ್ ಹಾಗೂ ಸಿಬ್ಬಂದಿ ಲಕ್ಷ್ಮೀ ಜಗದೀಶ್ ಎಂಬುವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ, ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ.
ಪ್ರಕರಣದ ವಿವರ: ಇಪಿಎಫ್ಒ ಕಚೇರಿಯಲ್ಲಿ ಉದ್ಯೋಗಿಗಳೇ ಸೇರಿ 61 ವರ್ಷಗಳ ಹಿಂದೆ ಇಪಿಎಫ್ಒ ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ರಚಿಸಿಕೊಂಡಿದ್ದರು. ಇಪಿಎಫ್ಒ ನೌಕರರಿಗೆ ಮಾತ್ರವೇ ಸೊಸೈಟಿಯಲ್ಲಿ ಹೂಡಿಕೆಗೆ ಅವಕಾಶ ನೀಡಲಾಗಿತ್ತು. ನೂರಾರು ಜನ ನೌಕರರು ತಮ್ಮ ಉಳಿತಾಯದ ಹಣವನ್ನು ಸೊಸೈಟಿಯಲ್ಲಿ ಹೂಡಿಕೆ ಮಾಡಿದ್ದರು.
ಆ ಹಣವನ್ನು ಅವಶ್ಯಕತೆ ಇರುವ ನೌಕರರಿಗೆ ಸಾಲದ ರೂಪದಲ್ಲಿ ನೀಡುತ್ತಿದ್ದ ಸೊಸೈಟಿ, ಹೂಡಿಕೆ ಮಾಡಿದ್ದವರ ಖಾತೆಗಳಿಗೆ ಪ್ರತಿ ತಿಂಗಳು ಬಡ್ಡಿಯ ಹಣವನ್ನೂ ಸಂದಾಯ ಮಾಡುತ್ತಿತ್ತು. ಆದರೆ, 3 ತಿಂಗಳಿನಿಂದ ಬಡ್ಡಿಯ ಹಣ ಖಾತೆಗೆ ಸಂದಾಯವಾಗದಿದ್ದಾಗ ಹೂಡಿಕೆದಾರರು ತೆರಳಿ ಸೊಸೈಟಿಯ ಖಾತೆಯನ್ನು ಪರಿಶೀಲಿಸಿದ್ದರು. ಆಗ ಕೇವಲ 3 ಕೋಟಿ ರೂ. ಮಾತ್ರವೇ ಸಾಲ ನೀಡಲಾಗಿದ್ದು, ಉಳಿದ ಹಣ ಸೊಸೈಟಿಯ ಖಾತೆ ಖಾಲಿಯಾಗಿರುವುದು ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹೂಡಿಕೆಯ ಹಣವನ್ನು ಸೊಸೈಟಿಯ ಖಾತೆಯಿಂದ ಅನಧಿಕೃತವಾಗಿ ಇತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಹೂಡಿಕೆದಾರರು ಕಬ್ಬನ್ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೈಟಿಯ ಸಿಇಒ ಗೋಪಿನಾಥ್, ಸಿಬ್ಬಂದಿಗಳಾದ ಲಕ್ಷ್ಮೀ ಜಗದೀಶ್, ಲಿಂಗೇಗೌಡ ಹಾಗೂ ರಮಾನುಜ ಅವರ ಮನೆಗಳ ಮೇಲೆ ಕಬ್ಬನ್ಪಾರ್ಕ್ ಠಾಣೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಸೊಸೈಟಿಯಲ್ಲಿ 300ಕ್ಕೂ ಅಧಿಕ ಠೇವಣಿದಾರರು ಹೂಡಿಕೆ ಮಾಡಿದ್ದ ಸುಮಾರು 70 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದ್ದು, ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದುಕೊಂಡು ಆರ್.ಆರ್.ನಗರ, ಜೆ.ಪಿ.ನಗರ, ಅಂಜನಾಪುರದಲ್ಲಿರುವ ಆರೋಪಿತರ ನಿವಾಸಗಳು, ರಿಚ್ಮಂಡ್ ಸರ್ಕಲ್ನಲ್ಲಿರುವ ಸೊಸೈಟಿಯಲ್ಲಿ ತಪಾಸಣೆ ನಡೆಸಲಾಗಿದೆ. ದಾಳಿ ವೇಳೆ ಚಿನ್ನಾಭರಣ, ನಗದು ಮತ್ತು ಹೂಡಿಕೆಗೆ ಸಂಬಂಧಿಸಿದ ಕೆಲ ದಾಖಲೆಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೈಟಿಯ ಸಿಇಒ ಹಾಗೂ ಲೆಕ್ಕಾಧಿಕಾರಿಯನ್ನು ಬಂಧಿಸಲಾಗಿದೆ ಹಾಗೂ ಆರೋಪಿಗಳಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಪರಿಶೀಲನೆ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪರಿಶೀಲನೆ ಸಂದರ್ಭದಲ್ಲಿ ಪತ್ತೆಯಾದ ಆರೋಪಿಗಳ ಆರ್ಥಿಕ ಸ್ಥಿತಿಗತಿ, ಆಸ್ತಿ ವಿವರಗಳು ಹಾಗೂ ಅವರ ಆದಾಯವನ್ನು ಪರಿಶೀಲಿಸಿದಾಗ ಒಂದಕ್ಕೊಂದು ಹೊಂದಾಣಿಕೆಯಾಗುತ್ತಿಲ್ಲ. ಆರೋಪಿತರು ಹೊಂದಿರುವ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ವಶಪಡಿಸಿಕೊಂಡು ಪರಿಶೀಲನೆ ಮಾಡಲಾಗುತ್ತಿದೆ’
-ಅಕ್ಷಯ್ ಎಂ. ಹಕೇ, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ