×
Ad

ಬಿಹಾರದ ಬದಲಾವಣೆಗಾಗಿ ತೇಜಸ್ವಿ ಯಾದವ್ ಸಿಎಂ ಆಗಬೇಕು : ಡಿ.ಕೆ.ಶಿವಕುಮಾರ್

Update: 2025-11-05 00:18 IST

ಬೆಂಗಳೂರು : ಬಿಹಾರ ರಾಜ್ಯದಲ್ಲಿ ಬದಲಾವಣೆ ತರಲು ಮಹಾಘಟಬಂಧನ್‍ಗೆ ಮತ ಹಾಕಿ, ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗಬೇಕು ಎಂದು ಮತದಾರರಿಗೆ ಮನವಿ ಮಾಡಿದ್ದೇನೆ ಎಂದು ಉಪಮಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಂಗಳವಾರ ಇಲ್ಲಿನ ಖಾಸಗಿ ಹೊಟೇಲ್‍ನಲ್ಲಿ ಬೆಂಗಳೂರು ಕೌಶಲ್ಯ ಶೃಂಗಸಭೆ ಉದ್ಘಾಟನಾ ಸಮಾರಂಭದ ಬಳಿಕ ಮಾತನಾಡಿದ ಶಿವಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮೊದಲ ಹಕ್ಕು. ನಮ್ಮ ಮತ ನಮ್ಮ ಹಕ್ಕು. ಹೀಗಾಗಿ ನಮ್ಮ ದೇಶದಲ್ಲಿ ನಮ್ಮ ಜನ ಮತದಾನ ಮಾಡಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. ಕೆಪಿಸಿಸಿ ಅಧ್ಯಕ್ಷನಾಗಿ ಎಲ್ಲ ಸಂಸ್ಥೆಗಳು ಬಿಹಾರದ ಮತದಾರರಿಗೆ ವೇತನ ಸಹಿತ ರಜೆ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದರು.

ಜನ ಬದಲಾವಣೆ ಬಯಸಿದ್ದಾರೆ: ಬಿಹಾರದ ಜನತೆ ಬದಲಾವಣೆ ಬಯಸಿದ್ದಾರೆ. ಹೀಗಾಗಿ ನಾವು ಆತ್ಮವಿಶ್ವಾಸದಲ್ಲಿದ್ದೇವೆ. ಇದೇ ದೇಶದ ಒತ್ತಾಸೆಯಾಗಿದೆ. ಬಿಹಾರ ಮತದಾರರಿಗಾಗಿ ವಿಶೇಷ ರೈಲು ವ್ಯವಸ್ಥೆ ವಿಚಾರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಇಲ್ಲಿನ ಬಿಹಾರ ರಾಜ್ಯದ ಕಾರ್ಮಿಕರಿಗೆ ವೇತನ ಸಹಿತ ರಜೆ ಸಿಕ್ಕರೆ ಸಾಕು. ಅವರು ಹೋಗಿ ಮತದಾನ ಮಾಡಿ ಬರುತ್ತಾರೆ ಎಂದರು.

ನಾನು ಕೇಂದ್ರ ಸರಕಾರದ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಎಲ್ಲರಿಗೂ ಸಹಾಯ ಮಾಡುವುದು ಕೇಂದ್ರ ಸರಕಾರದ ಜವಾಬ್ದಾರಿ. ಬಿಹಾರದ ಜನ ಇಲ್ಲಿಗೆ ಬಂದು ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಅವರು ಶ್ರಮಪಟ್ಟು ಕೆಲಸ ಮಾಡುತ್ತಿದ್ದು, ಅವರ ಬಗ್ಗೆ ಹೆಮ್ಮೆ ಇದೆ ಎಂದರು.

ಬಿಹಾರ ರಾಜ್ಯದವರು ತಮ್ಮದೇ ಸಂಘ ಸ್ಥಾಪಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದೇನೆ. ಕೆಲವು ಅಸ್ಸಾಂ ಸೇರಿದಂತೆ ಕೆಲವು ರಾಜ್ಯಗಳ ಜನರು ಸಂಘ ಸ್ಥಾಪಿಸಲು ಅರ್ಜಿ ನೀಡಲಾಗುವುದು. ಅವರು ಆಗಾಗ್ಗೆ ಭೇಟಿಯಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಶಿವಕುಮಾರ್ ತಿಳಿಸಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News