×
Ad

ಮಹಿಳೆಗೆ ಕಿರುಕುಳ ನೀಡಿದ ಆರೋಪ; ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕನ ಬಂಧನ

Update: 2025-10-31 20:57 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಡಿ ಬೆಂಗಳೂರು ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಸಿ.ಮೈಲಾರಪ್ಪ ಅವರನ್ನು ಇಲ್ಲಿನ ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

37 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಮೈಲಾರಪ್ಪ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರುದಾರ ಮಹಿಳೆ 2022ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಅಂದಿನ ಪ್ರಾಧ್ಯಾಪಕರಾಗಿದ್ದ ಪ್ರೊ.ಬಿ.ಸಿ.ಮೈಲಾರಪ್ಪ ನಡೆಸುತ್ತಿದ್ದ ಕರ್ನಾಟಕ ರಾಜ್ಯ ಹರಿಜನ ಸೇವಕ ಸಂಘದಲ್ಲಿ ಕೆಲಸಕ್ಕೆ ಸೇರಿದ್ದರು. 2 ವರ್ಷ ಕೆಲಸ ಮಾಡಿ 2024ರ ಮೇ ತಿಂಗಳಿನಲ್ಲಿ ಕೆಲಸ ಬಿಟ್ಟಿದ್ದರು. ಆದರೆ, 2024ರ ಅಂತ್ಯದಲ್ಲಿ ಮಹಿಳೆಯ ಪತಿ ಅಸಹಜವಾಗಿ ಸಾವನ್ನಪ್ಪಿದ್ದರು. ಈ ವೇಳೆ, ಪತಿಯ ಸಾವಿಗೆ ಆಕೆಯೇ ಕಾರಣವೆಂದು ಆರೋಪಿಸಿ ಆಕೆಯ ಅತ್ತೆ, ಮಾವ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅಷ್ಟೇ ಅಲ್ಲದೆ, ಸಂತ್ರಸ್ತೆಯ ಹೆಸರಿನಲ್ಲಿದ್ದ ಆಸ್ತಿಯನ್ನು ತಮಗೆ ಬರೆದುಕೊಡುವಂತೆ ಅತ್ತೆ, ಮಾವ ಪೀಡಿಸಿದ್ದರು. ಈ ಸಮಯದಲ್ಲಿ ಬಿ.ಸಿ.ಮೈಲಾರಪ್ಪ ಆಕೆಯ ಗಂಡನ ಸಾವಿನ ಬಗ್ಗೆ ಮಹಾಲಕ್ಷ್ಮೀ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಮತ್ತು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಆಕೆಯ ಪರ ವಾದಿಸಿ, ಸಾಕಷ್ಟು ಓಡಾಟ ನಡೆಸಿದ್ದರು ಎನ್ನಲಾಗಿದೆ.

ಈ ನಡುವೆ ಸಂತ್ರಸ್ತೆಯ ತಂದೆಯ ಆಸ್ತಿ ಹಂಚಿಕೆ ವಿಚಾರವಾಗಿಯೂ ಆಕೆಯ ಚಿಕ್ಕಪ್ಪನೊಂದಿಗೆ ಹಲವು ಮನಸ್ತಾಪಗಳುಂಟಾಗಿತ್ತು. ತಂದೆ ಆಸ್ತಿಯ ಭಾಗಾಂಶಕ್ಕಾಗಿ ಸಂತ್ರಸ್ತೆಯ ಅಣ್ಣ, ವಕೀಲರಾದ ರಘು ಎನ್ನುವವರ ಸಹಾಯದಿಂದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ವಿಷಯವಾಗಿ ವಕೀಲರು ಆಗಾಗ ಸಂತ್ರಸ್ತೆಯನ್ನು ಭೇಟಿ ಮಾಡುವ ಸುದ್ದಿ ತಿಳಿದ ಬಿ.ಸಿ.ಮೈಲಾರಪ್ಪ ಒಂದು ದಿನ ರಾಜಾಜಿನಗರದ ಸಮೀಪದ ಹೋಟೆಲ್‍ವೊಂದರ ಬಳಿ ಸಂತ್ರಸ್ತೆಯನ್ನು ಕರೆಸಿಕೊಂಡಿದ್ದರು ಎನ್ನಲಾಗಿದೆ.

ಭೇಟಿ ಮಾಡಲು ಬಂದಾಗ ಆಕೆಗೆ ಒಂದಿಷ್ಟು ದಾಖಲಾತಿಗಳನ್ನು ನೀಡಿ, ಸಹಿ ಹಾಕುವಂತೆ ಹೇಳಿದ್ದರು. ದಾಖಲಾತಿ ಪರಿಶೀಲಿಸಿದಾಗ, ‘ನನ್ನ ಜೀವನದಲ್ಲಿ ಏನೇ ತೊಂದರೆಯಾದರೂ ಅದಕ್ಕೆ ವಕೀಲ ರಘು ಕಾರಣ’ ಎಂದು ಬರೆದಿದ್ದನ್ನು ನೋಡಿ, ಸಹಿ ಹಾಕಲು ಸಂತ್ರಸ್ತೆ ನಿರಾಕರಿಸಿದ್ದರು. ಹೀಗೆ ಬರೆದು ಸಹಿ ಹಾಕಿಸಿಕೊಳ್ಳಲು ನೀವು ಯಾರೆಂದು ಆಕೆ ಪ್ರಶ್ನಿಸಿದಾಗ ಕೋಪಗೊಂಡ ಮೈಲಾರಪ್ಪ, ನಡುರಸ್ತೆಯಲ್ಲಿಯೇ ನಿಂದಿಸಿ, ಆಕೆಯ ಜುಟ್ಟನ್ನು ಹಿಡಿದು ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದಿಷ್ಟೇ ಅಲ್ಲದೆ, ಮಹಿಳೆಯ ಮನೆಯ ಬಳಿ ಬಂದು ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದರು. ಆಗಾಗ ಕರೆ ಮಾಡಿ ಅಸಭ್ಯವಾಗಿ ಮಾತನಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂತ್ರಸ್ತ ಮಹಿಳೆಯ ದೂರಿನ ಆಧಾರ ಮೇಲೆ ಬಸವೇಶ್ವರನಗರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು ಹಾಗೂ ಮಹಿಳೆಯ ಪರ ವಕೀಲರ ಸಂಬಂಧಿಕರ ಮನೆ ಬಳಿ ತೆರಳಿ ಗಲಾಟೆ ಮಾಡಿರುವ ಆರೋಪದಡಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿಯೂ ಒಂದು ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿ ಪ್ರೊ.ಬಿ.ಸಿ.ಮೈಲಾರಪ್ಪನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News