×
Ad

Bengaluru | ಹಣಕಾಸಿನ ವಿಚಾರಕ್ಕೆ ಆಟೋ ಚಾಲಕನ ಕೊಲೆ; ಹತ್ಯೆಗೈದು ನಿರ್ಜನ ಪ್ರದೇಶದಲ್ಲಿ ಹೂತುಹಾಕಿದ ಸ್ನೇಹಿತರು!

Update: 2026-05-26 18:08 IST

ಸಾಂದರ್ಭಿಕ ಚಿತ್ರ | PC : Gemini AI

ಬೆಂಗಳೂರು : ಹಣಕಾಸಿನ ವಿಚಾರಕ್ಕೆ ಆಟೋ ಚಾಲಕನನ್ನು ಸ್ನೇಹಿತರೇ ಹತ್ಯೆಗೈದು ನಿರ್ಜನ ಪ್ರದೇಶದಲ್ಲಿ ಹೂತುಹಾಕಿದ ಘಟನೆ ಬೆಂಗಳೂರಿನ ಕುಂಬಳಗೋಡಿನ ರಾಮಸಂದ್ರ ಕೆರೆ ಬಳಿ ನಡೆದಿದೆ.

ತಾವರೆಕೆರೆಯ ಉದಯ ಲೇಔಟ್ ನಿವಾಸಿಯಾಗಿದ್ದ ರಕ್ಷಿತ್ ಎನ್.(25) ಹತ್ಯೆಯಾದ ಆಟೋ ಚಾಲಕ ಎಂದು ಗುರುತಿಸಲಾಗಿದೆ. ಈ ಘಟನೆ ಸಂಬಂಧ ರಕ್ಷಿತ್ ತಾಯಿ ನೀಡಿದ ದೂರಿನನ್ವಯ ಕುಂಬಳಗೋಡು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪೈಕಿ ಮೋಹಿನ್ ಪಾಶಾ ಎಂಬಾತನನ್ನು ಬಂಧಿಸಲಾಗಿದ್ದು, ಹಸನ್ ಎಂಬಾತನಿಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ಯಾಸೆಂಜರ್ ಆಟೋ ಚಾಲಕನಾಗಿದ್ದ ರಕ್ಷಿತ್ ಎನ್. ತನ್ನ ಸ್ನೇಹಿತ ಕಂಬೀಪುರದ ವಾಸಿ ಮೋಹಿನ್ ಪಾಶಾಗೆ ಹಣ ನೀಡಿದ್ದ. ಹಣ ವಾಪಸ್ ಪಡೆದುಕೊಂಡು ಬರುವುದಾಗಿ ಮೇ 24ರಂದು ಸಂಜೆ 6 ಗಂಟೆಗೆ ಮನೆಯಿಂದ ತೆರಳಿದ್ದವನು ಮರಳಿರಲಿಲ್ಲ. ನಂತರ ಮೇ 25ರಂದು ರಕ್ಷಿತ್ ತಾಯಿ ಕಂಬೀಪುರಕ್ಕೆ ತೆರಳಿ ಮೋಹಿನ್ ಪಾಶಾನ ಬಳಿ ಮಗನ ಬಗ್ಗೆ ವಿಚಾರಿಸಿದ್ದರು.

ಆರೋಪಿಗಳು ಹಣಕಾಸಿನ ವಿಚಾರಕ್ಕೆ ರಕ್ಷಿತ್ ಜೊತೆ ಗಲಾಟೆ ಮಾಡಿಕೊಂಡು ಆತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು, ರಾಮಸಂದ್ರದ ಕೆರೆಯ ಬಳಿ ಹೂತಿರುವುದಾಗಿ ಹಾಗೂ ಆತನ ಆಟೋವನ್ನು ಜ್ಞಾನಭಾರತಿ ಬಳಿ ಬಿಟ್ಟಿರುವುದಾಗಿ ಮೋಹಿನ್ ಪಾಶಾ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸದ್ಯ, ಮೃತದೇಹವನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಕುಂಬಳಗೋಡು ಠಾಣೆ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News