×
Ad

‘ನಮ್ಮ ಕರ್ನಾಟಕ-ನಮ್ಮ ಹೆಮ್ಮೆ’ ರಾಜ್ಯವನ್ನು ಜಾಗತಿಕ ಪ್ರವಾಸೋದ್ಯಮ ತಾಣವನ್ನಾಗಿ ಬೆಳೆಸೋಣ : ಸಿಎಂ ಸಿದ್ದರಾಮಯ್ಯ

Update: 2025-02-26 22:08 IST

ಬೆಂಗಳೂರು : ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಭವಿಷ್ಯದ ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ‘ಕರ್ನಾಟಕ ಪ್ರವಾಸೋದ್ಯಮ ನೀತಿ-2024-2029’ ಜಾರಿಗೆ ತರಲಾಗುತ್ತಿದೆ. 1.5 ಲಕ್ಷ ಉದ್ಯೋಗ ಸೃಷ್ಟಿಸಲು ನೀತಿ ಜಾರಿಗೆ ತರಲಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನ ಒದಗಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬುಧವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಎರಡನೇ ಆವೃತ್ತಿಯ ‘ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ-2025’ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸೋದ್ಯಮದಲ್ಲಿ ಜಾಗತಿಕವಾಗಿ ಕರ್ನಾಟಕ ಗುರುತಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ ಎಂದು ಹೇಳಿದರು.

ಕರ್ನಾಟಕವನ್ನು ಪ್ರವಾಸೋದ್ಯಮದಲ್ಲಿ ಜಾಗತಿಕವಾಗಿ ಗುರುತಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿವಿಧತೆಯಲ್ಲಿ ಏಕತೆ ಎಂಬಂತೆ ರಾಜ್ಯ ಎಲ್ಲ ರೀತಿಯ ಪ್ರವಾಸಿ ತಾಣಗಳನ್ನು ಹೊಂದಿದೆ, ಹಲವು ಜಗತ್ತು ಒಂದು ರಾಜ್ಯ ನಮ್ಮದು ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಸಿದ್ದರಾಮಯ್ಯ ಬಣ್ಣಿಸಿದರು.

ಕರ್ನಾಟಕದ ಕಾಡುಗಳು, ಐತಿಹಾಸಿಕ ತಾಣಗಳು, ಸಂಸ್ಕೃತಿ, ಕಲೆ, ಜನಪದ ಹೀಗೆ ರಾಜ್ಯದ ಪ್ರತಿಮೂಲೆ ಪ್ರವಾಸಿ ತಾಣವಾಗಿದೆ. ವಿಮಾನಯಾನ, ರಸ್ತೆ, ರೈಲು ಸೇರಿದಂತೆ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಪ್ರವಾಸಿತಾಣಗಳ ಅಭಿವೃದ್ಧಿಗಾಗಿ ಕ್ರಮಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯಕ್ಕೆ ಜಾಗತಿಕವಾಗಿ ಪ್ರವಾಸಿಗಳನ್ನು ಸೆಳೆಯಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ರಾಜ್ಯವು 4 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು, 35ಕ್ಕೂ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳು, ಪ್ರಾಚೀನ ಗಿರಿಧಾಮಗಳು, ಆಧ್ಯಾತ್ಮಿಕ ಕೇಂದ್ರಗಳು, ಸಾಹಸ ತಾಣಗಳು ಮತ್ತು ದೇಶದ ಕೆಲವು ಅತ್ಯುತ್ತಮ ನೆಲೆಯಾಗಿದೆ. ಕರ್ನಾಟಕವು ಪ್ರಾಚೀನ ದೇವಾಲಯಗಳು, ಜೈನ ಬಸದಿಗಳು ಮತ್ತು ನಮ್ಮ ವೈವಿಧ್ಯಮಯ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಸೂಫಿ ದೇವಾಲಯಗಳಿಂದ ಆಶೀರ್ವದಿಸಲ್ಪಟ್ಟಿದೆ.

ಪಶ್ಚಿಮಘಟ್ಟಗಳು ರೋಮಾಂಚನಕಾರಿ ಮತ್ತು ನಮ್ಮ ಕರಾವಳಿ ಪ್ರದೇಶಗಳು ಪ್ರಶಾಂತತೆ ಮತ್ತು ಜಲ ಕ್ರೀಡೆಗಳನ್ನು ಬಯಸುವವರನ್ನು ಸ್ವಾಗತಿಸುತ್ತವೆ. ಕರ್ನಾಟಕವು ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸತತವಾಗಿ ಸ್ಥಾನ ಪಡೆದಿರುವುದು ಆಶ್ಚರ್ಯವೇನಿಲ್ಲ. ಕರ್ನಾಟಕ ಕೇವಲ ಒಂದು ತಾಣವಲ್ಲ-ಅದು ಒಂದು ಭಾವನೆ. ಇಲ್ಲಿ ಭೂತಕಾಲವು ಭವಿಷ್ಯವನ್ನು ಸಂಧಿಸುತ್ತದೆ, ಅಲ್ಲಿ ಸಂಪ್ರದಾಯವು ಆಧುನಿಕತೆಯೊಂದಿಗೆ ಬೆರೆಯುತ್ತದೆ ಮತ್ತು ಪ್ರತಿಯೊಬ್ಬ ಪ್ರವಾಸಿಗರು ಸ್ವಂತ ಮನೆಯ ಅನುಭವ ಪಡೆಯುತ್ತಾರೆ ಎಂದು ಅವರು ವಿಶ್ಲೇಷಿಸದರು.

ಪ್ರವಾಸೋದ್ಯಮ ಬೆಳವಣಿಗೆಗೆ ಖಾಸಗಿಯವರಿಗೆ ಬಂಡವಾಳ ಹೂಡಿಕೆಗೆ ಅಗತ್ಯವಾದ ಸಹಾಯವನ್ನು ನೀಡಲು ಸರಕಾರ ಹರ್ಷಿಸುತ್ತದೆ. ಬಂಡವಾಳ ಹಾಗೂ ಮಾರುಕಟ್ಟೆ ವಿಸ್ತರಣೆ ಮೂಲಕ ರಾಜ್ಯವನ್ನು ದೇಶದ ಹಾಗೂ ಜಗತ್ತಿನ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಮಾಡಿ, ನಮ್ಮ ಕರ್ನಾಟಕ ನಮ್ಮ ಹೆಮ್ಮೆ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಜಾಗತಿಕವಾಗಿ ಕರ್ನಾಟಕದ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಇದೊಂದು ಅತ್ಯುತ್ತಮ ವೇದಿಕೆ. ಇಂತಹ ದೊಡ್ಡಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಅವಕಾಶಕ್ಕಾಗಿ ಹೆಮ್ಮೆ ಎನಿಸುತ್ತದೆ. ಕರ್ನಾಟಕ ಸಾಂಸ್ಕೃತಿಕವಾಗಿ, ಐತಿಹಾಸಿಕ, ಪರಿಸರ ಸೇರಿದಂತೆ ಧಾರ್ಮಿಕವಾಗಿ ಅತಿಮುಖ್ಯವಾದ ಪ್ರವಾಸಿತಾಣಗಳನಗಳನ್ನು ಹೊಂದಿದೆ ಎಂದರು.

ಇಲ್ಲಿನ ಜನಪದ ಕಲೆಗಳು ದೇಶದ್ಯಾಂತ ಹೆಸರುವಾಸಿಯಾಗಿದೆ. ಕರ್ನಾಟಕವು ಅತ್ಯಂತ ಸಾಂಸ್ಕೃತಿಕ ಶ್ರೀಮಂತ ಹಾಗೂ ಪ್ರಸ್ತುತ ಜಾಗತಿಕ ಬೆಳವಣಿಗೆಯಲ್ಲಿ ಗುರುತಿಸಿಕೊಂಡಿರುವ ರಾಜ್ಯವಾಗಿದೆ. ಶಕ್ತಿ ಯೋಜನೆಯಿಂದ ರಾಜ್ಯದ ಪ್ರವಾಸೋದ್ಯಮ ಬೆಳವಣಿಗೆಯಾಗಿದೆ. ಭವಿಷ್ಯದಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕಾರ್ಯನಿರಂತರವಾಗಿದೆ. ರಾಜ್ಯದ ಐತಿಹಾಸಿಕ ಸ್ಥಳಗಳನ್ನು ಖಾಸಗಿಯವರು ದತ್ತು ಪಡೆಯುವ ಯೋಜನೆ ಯಶಸ್ವಿಯಾಗಿದೆ, ಇಲ್ಲಿಯವರೆಗೆ 20 ಸ್ಥಳಗಳನ್ನು ಖಾಸಗಿಯವರಿಗೆ ದತ್ತು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರವಾಸೋದ್ಯಮ ರಾಜ್ಯದ ಮುಖ್ಯ ಆರ್ಥಿಕ ಶಕ್ತಿಯಲ್ಲಿ ಒಂದಾಗಿದೆ. ವಿವಿಧ ಪ್ರವಾಸೋದ್ಯಮಗಳನ್ನು ಪ್ರೋತ್ಸಾಹಿಸಲು ಪ್ರವಾಸೋದ್ಯಮ ನೀತಿ ಜಾರಿಗೆ ತರಲಾಗಿದೆ. ಇದರಲ್ಲಿ ಅನೇಕ ಹೊಸ ನೀತಿಗಳನ್ನು ಜಾರಿಗೆ ತರಲಾಗಿದೆ. ಪ್ರವಾಸೋದ್ಯಮ ಬೆಳವಣಿಗೆಗೆ ಸರಕಾರ ಬದ್ದವಾಗಿದ್ದು, ಪ್ರವಾಸೋದ್ಯಮವನ್ನು ಜಾಗತಿಕವಾಗಿ ಬೆಳೆಸಲು ಉದ್ದೇಶಿಸಲಾಗಿದೆ. ಇದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅದರ ಪ್ರತಿಯಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ರಿಝ್ವಾನ್ ಅರ್ಶದ್, ಕರ್ನಾಟಕವನ್ನು ನಂಬಿ ಕೆಟ್ಟವರಿಲ್ಲ, ಹೊರದೇಶ ಹಾಗೂ ರಾಜ್ಯಗಳಿಂದ ಆಗಮಿಸಿರುವ ಪ್ರವಾಸೋದ್ಯಮ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಭಯಬೇಡ, ನಮ್ಮದು ಅತ್ಯುತ್ತಮ ರಾಜ್ಯವಾಗಿದ್ದು ಇಲ್ಲಿನ ಜನ, ಸಂಸ್ಕೃತಿ, ಕಲೆ, ಗುಣ ಎಲ್ಲವೂ ಶ್ರೀಮಂತಿಕೆಯಿಂದ ಕೂಡಿದೆ. ಇದೊಂದು ಶಿಕ್ಷಣ ಹಬ್ ಆಗಿ ಗುರುತಿಸಿಕೊಂಡಿದೆ ಎಂದು ಬಣ್ಣಿಸಿದರು.

ಇದೇ ವೇಳೆ ‘ಕರ್ನಾಟಕ ಪ್ರವಾಸೋದ್ಯಮ ನೀತಿ’ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಚ್ ಮುನಿಯಪ್ಪ, ಎನ್.ಎಸ್.ಭೋಸರಾಜು, ಡಾ.ಸುಧಾಕರ್, ಸಿಎಂ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು, ಸಿಎಂ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್, ಇಲಾಖೆ ನಿರ್ದೇಶಕ ಡಾ.ಕೆ.ವಿ.ರಾಜೇಂದ್ರ, ಕಾರ್ಯದರ್ಶಿ ಸಲ್ಮಾ ಕೆ. ಫಹೀಮ್, ಟೂರಿಸಂ ಸೋಸೈಟಿಯ ಅಧ್ಯಕ್ಷ ಶಾಮರಾಜು ಹಾಜರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News