‘ಬಿಯಾಂಡ್ ಬೆಂಗಳೂರು’ ಉಪಕ್ರಮಕ್ಕೆ ಉತ್ತೇಜನ : ಡಿ.ಕೆ.ಶಿವಕುಮಾರ್
ಬೆಂಗಳೂರು : ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, 1.10 ಲಕ್ಷ ನೋಂದಾಯಿತ ವಾಹನಗಳು ಸಂಚರಿಸುತ್ತಿವೆ. ಇದು ನಗರದ ಜನಜೀವನದ ಮೇಲೆ ವಿಪರೀತ ಒತ್ತಡ ಸೃಷ್ಟಿಸಿದೆ. ಆದುದರಿಂದ, ‘ಬಿಯಾಂಡ್ ಬೆಂಗಳೂರು’ ಉಪಕ್ರಮದ ಮೂಲಕ ಕೈಗಾರಿಕೆಗಳು ಬೆಂಗಳೂರಿನಿಂದ ಹೊರಗಿರುವ ಪ್ರದೇಶಗಳಿಗೆ ಹೋಗುವುದನ್ನು ಉತ್ತೇಜಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ ಬೆಂಗಳೂರು ಅರಮನೆಯಲ್ಲಿ ‘ಇನ್ವೆಸ್ಟ್ ಕರ್ನಾಟಕ-2025’ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪದ ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಜೊತೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೂ ಹೊಸ ನೀತಿ ತರಲಾಗಿದೆ. ವಿಶೇಷವಾಗಿ ರಾಜ್ಯದ 300 ಕಿ.ಮೀ. ಉದ್ದದ ಕರಾವಳಿ ತೀರದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಗಮನ ಹರಿಸಲಿದ್ದೇವೆ. ಜತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನೆರವಿಗೆ ಪೋರ್ಟಲ್ ಆರಂಭಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ ಭೂಮಿಯ ಬೆಲೆ ಜಾಸ್ತಿ ಇದೆ. ಹೀಗಾಗಿ ಉದ್ಯಮಿಗಳಿಗೆ ನೆರವು ನೀಡುವ ಬೇರೆಬೇರೆ ಕ್ರಮಗಳತ್ತ ಚಿಂತಿಸಲಾಗುತ್ತಿದೆ. ನಾವು ಹೂಡಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದೇವೆಯೇ ವಿನಾ ನೆರೆಹೊರೆಯ ರಾಜ್ಯಗಳ ಜತೆಯಲ್ಲ. ಭೂಮಿಯ ಬೆಲೆ ಹೆಚ್ಚಾಗಲು ಇದೂ ಒಂದು ಕಾರಣವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಕರ್ನಾಟಕ ಇತಿಹಾಸ ದೇಶಕ್ಕೆ ಮಾದರಿ. 2000ನೇ ಇಸವಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ದೇಶದ ಮೊದಲ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಿದೆವು. ನಂತರ ನಿರಂತರವಾಗಿ 2-3 ವರ್ಷ ಈ ಸಮಾವೇಶ ಮಾಡಿದ್ದೆವು. ಇದುವರೆಗೂ ಮಾಡಿರುವ ಸಮಾವೇಶಗಳ ಪೈಕಿ ಕೆಲವು ಯಶಸ್ವಿವಾದರೆ, ಮತ್ತೆ ಕೆಲವು ವಿಫಲವಾಗಿವೆ ಎಂದು ಅವರು ಹೇಳಿದರು.
ಅನೇಕ ರಾಷ್ಟ್ರಗಳ ರಾಜಕೀಯ ಹಾಗೂ ಕೈಗಾರಿಕಾ ನಾಯಕರು ಈ ಸಮಾವೇಶಕ್ಕೆ ಬಂದಿದ್ದಾರೆ. ಎಲ್ಲರೂ ಕರ್ನಾಟಕ ರಾಜ್ಯದಲ್ಲಿರುವ ವಾತಾವರಣ, ಏಕಗವಾಕ್ಷಿ ವ್ಯವಸ್ಥೆ, ಪರಿಸರ, ಮಾನವ ಸಂಪನ್ಮೂಲ, ಪ್ರತಿಭೆ, ಜ್ಞಾನ, ಆರೋಗ್ಯ ಸೌಲಭ್ಯ, ಶಿಕ್ಷಣ ಎಲ್ಲವೂ ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲ ಎಂಬುದನ್ನು ಅರಿತಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ನಂಜುಡಪ್ಪ ವರದಿ ಆಧಾರದ ಮೇಲೆ ಬಂಡವಾಳ ಹೂಡಿಕೆಯಲ್ಲಿ ಪ್ರೋ ತ್ಸಾಹ ಧನ, ಕಾರ್ಯಕ್ಷಮತೆ ಆಧಾರದ ಮೇಲೂ ಆರ್ಥಿಕ ನೆರವು ನೀಡಲು ಮುಂದಾಗಿದ್ದೇವೆ. ಜತೆಗೆ ಅವರಿಗೆ ಭೂಮಿ ಒದಗಿಸಲು ಮುಂದಾಗಿದ್ದೇವೆ. ಇನ್ನು ಮಹಿಳೆಯರಿಗೆ ಆದ್ಯತೆ ನೀಡಲು ಶೇ.5ರಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಇನ್ನು ಹಸಿರು ಇಂಧನ ಮೂಲಕ ಸಂಸ್ಥೆ ರೂಪಿಸುವವರಿಗೆ ಶೇ.5ರಷ್ಟು ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ವಿದ್ಯುತ್ ಚಾಲಿತ ವಾಹನಕ್ಕಾಗಿ ಸ್ವಚ್ಛ ಸಂಚಾರ ನೀತಿ ಬಿಡುಗಡೆ ಮಾಡಿದ್ದೇವೆ. ಪ್ರವಾಸೋದ್ಯಮ ನೀತಿ ಮೂಲಕ ಒತ್ತು ನೀಡಿದ್ದೇವೆ. ಐಟಿ ಬಿಟಿ ಕ್ಷೇತ್ರದಲ್ಲಿ ಸೆಮಿಕಂಡಕ್ಟರ್ ಉದ್ಯಮ ಸ್ಥಾಪಿಸಲು ಮುಂದೆ ಬಂದಿದ್ದಾರೆ. ಫಾಕ್ಸ್ ಕಾನ್ ಸಂಸ್ಥೆಯವರು ದೊಡ್ಡಬಳ್ಳಾಪುರದ ಬಳಿ ತಮ್ಮ ಕಂಪನಿ ಆರಂಭಿಸಲಿದ್ದು, 40 ಸಾವಿರ ಜನರಿಗೆ ಉದ್ಯೋಗ ನೀಡಲಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಏರ್ ಶೋಗೆ ಆಗಮಿಸಿದ್ದ ಅನೇಕ ಉದ್ಯಮಿಗಳು ಈ ಸಮಾವೇಶಕ್ಕೂ ಆಗಮಿಸಿದ್ದರು. ನಮ್ಮಲ್ಲಿ ದೊಡ್ಡ ವಿಮಾನಗಳನ್ನು ತಯಾರು ಮಾಡದಿದ್ದರೂ ಶೇ.50ರಷ್ಟು ಬಿಡಿಭಾಗಗಳ ಉತ್ಪಾದನೆ ಮಾಡುವ ಸಾಮರ್ಥ್ಯ ಇದೆ. ದೇಶದ ಏರೋಸ್ಪೇಸ್ ಹಾಗೂ ರಕ್ಷಣಾ ವಿಭಾಗಕ್ಕೆ ನೀಡುವ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯದ ಕೊಡುಗೆ ಶೇ.65ರಷ್ಟಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಸಮಾವೇಶದಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಪಿಯೂಶ್ ಗೋಯೆಲ್ ಕರ್ನಾಟಕ ರಾಜ್ಯದ ಸಂಸ್ಕೃತಿ, ಮಾನವ ಸಂಪನ್ಮೂಲ, ಜ್ಞಾನಕ್ಕೆ ಸರಿಸಮನಾದ ಮತ್ತೊಂದು ರಾಜ್ಯ ಮತ್ತೊಂದಿಲ್ಲ ಎಂಬುದನ್ನು ಒಪ್ಪಿದ್ದಾರೆ. ನಮ್ಮ ಪರಂಪರೆಯಿಂದ ನಾವು ಈ ಸಾಧನೆ ಮಾಡಿದ್ದೇವೆ. ನೆಹರೂ ಅವರ ಕಾಲದಲ್ಲಿ ಹಾಕಿದ ಅಡಿಪಾಯವನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಅವರು ಹೇಳಿದರು.
ಎಸ್ಎಂಇಗಳಿಗಾಗಿ ನಾವು ಪೋರ್ಟಲ್ ಆರಂಭಿಸಿದ್ದು, ಉತ್ಪಾದಕರು ಹಾಗೂ ಗ್ರಾಹಕರಿಗೆ ವೇದಿಕೆ ಸಿದ್ಧಪಡಿಸಿದ್ದೇವೆ. ಇಂತಹ ಕಾರ್ಯಕ್ರಮ ಬೇರೆ ಯಾವುದೇ ರಾಜ್ಯಗಳಲ್ಲಿ ಇಲ್ಲ. ನಮ್ಮ ಏಕಗವಾಕ್ಷಿ ವ್ಯವಸ್ಥೆ ಮತ್ತಷ್ಟು ಸುಧಾರಿಸುವತ್ತ ಗಮನಹರಿಸಿದ್ದೇವೆ. ಬಂಡವಾಳ ಹೂಡಿಕೆ ಹೆಚ್ಚಾದಷ್ಟು ಉದ್ಯೋಗ ಸೃಷ್ಟಿ ಹೆಚ್ಚುತ್ತದೆ, ತೆರಿಗೆ ಹೆಚ್ಚು ಸಂಗ್ರಹವಾಗುತ್ತದೆ. ರಾಜ್ಯ ಹಾಗೂ ದೇಶ ಅಭಿವೃದ್ಧಿಯಾಗುತ್ತದೆ ಎಂದು ಶಿವಕುಮಾರ್ ತಿಳಿಸಿದರು.
ಉತ್ತಮ ಬಂಡವಾಳ ಹೂಡಿಕೆದಾರರಿಗೆ ಪ್ರಶಸ್ತಿ ನೀಡಲು ಎಂ.ಬಿ.ಪಾಟೀಲ್ ನಿರ್ಧರಿಸಿದ್ದು, ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಸ್ಥಳೀಯ ಮಟ್ಟದಲ್ಲಿ ಪ್ರಗತಿ ಸಾಧಿಸಿರುವ ಕೈಗಾರಿಕೋದ್ಯಮಿಗಳಿಗೆ ಉತ್ತೇಜಿಸುವ ಕೆಲಸ ಮಾಡಿದ್ದೇವೆ. ಸಂಶೋಧನೆ ಹಾಗೂ ಅಭಿವೃದ್ಧಿ ಮಾಡುವವರಿಗೆ ಶೇ.10ರಷ್ಟು ಪ್ರೋತ್ಸಾಹ ಧನ ನೀಡಲು ಮುಂದಾಗಿದ್ದೇವೆ. ನಾವು ಇನ್ನೋವೇಷನ್ ಎಕ್ಸಿಬಿಷನ್ ಆಯೋಜಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಇಂಧನ ಕ್ಷೇತ್ರಕ್ಕೆ ಹೆಚ್ಚು ಬಂಡವಾಳ ಹೂಡಿಕೆಯಾಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲಿ ಈಗ ‘ಒಂದು ದೇಶ ಒಂದು ಗ್ರಿಡ್’ ವ್ಯವಸ್ಥೆ ಜಾರಿಗೆ ಬಂದಿದ್ದು, ಇಲ್ಲಿ ಉತ್ಪಾದಿಸುವ ಇಂಧನವನ್ನು ಯಾವುದೇ ರಾಜ್ಯಕ್ಕೆ ರವಾನಿಸಬಹುದು. ನಮ್ಮ ಇವಿ ಹಾಗೂ ಸೌರಶಕ್ತಿ ನೀತಿ ದೇಶಕ್ಕೆ ಮೊದಲನೆಯದಾಗಿದ್ದು, ವಿದ್ಯುತ್ ಟ್ರಾನ್ಸ್ ಮಿಷನ್ ನಲ್ಲಿ ಆಗುತ್ತಿದ್ದ ಸೋರಿಕೆ ತಡೆಯಲು ನಾವು ಕೈಗೊಂಡಿರುವ ಕ್ರಮ ದೇಶಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.