×
Ad

Belagavi | ನಗರಸಭೆ ನಿರ್ಲಕ್ಷ್ಯಕ್ಕೆ ಯುವಕನ ಆಕ್ರೋಶ: ರಸ್ತೆ ಮೇಲೆ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲೇ ಕುಳಿತು 3 ಗಂಟೆ ಧರಣಿ

Update: 2026-06-09 16:05 IST

ಬೆಳಗಾವಿ : ಬೈಲಹೊಂಗಲ ನಗರದಲ್ಲಿ ಮಳೆ ನೀರು ಮನೆಗಳಿಗೆ‌ ನುಗ್ಗುವುದನ್ನು ತಡೆಗಟ್ಟುವಂತೆ ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜ‌ನ ಆಗಿಲ್ಲ ಎಂದು ಆರೋಪಿಸಿ, ಮಳೆಯಿಂದ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ರಸ್ತೆ ಮೇಲೆ ಕುಳಿತು 3 ಗಂಟೆ ಯುವಕನೊಬ್ಬ ಧರಣಿ ನಡೆಸಿದ ಘಟನೆ ನಡೆದಿದೆ.

ಇಲ್ಲಿನ ಬಸ್ ನಿಲ್ದಾಣ ಹಿಂಭಾಗದ ಕುಲಕರ್ಣಿ ಗಲ್ಲಿ, ಪಾಟೀಲ ಗಲ್ಲಿ, ಕೋಲಕಾರ ಗಲ್ಲಿ ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಇದರಿಂದ ಆಕ್ರೋಶಗೊಂಡ ಯೂಟ್ಯೂಬರ್ ಆಗಿರುವ ಈಶ್ವರ್‌ ಶಿಲ್ಲೇದಾರ, ಹರಿಯುತ್ತಿದ್ದ ನೀರಿನಲ್ಲೇ ಕುಳಿತು ಧರಣಿ ನಡೆಸಿದ್ದಾರೆ.

ಮಳೆಗಾಲ ಬರುವ ಮುನ್ನವೇ ರಸ್ತೆ, ಚರಂಡಿ ದುರಸ್ತಿ ಪಡಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸೋಮವಾರದ ಭಾರೀ ಮಳೆಯಿಂದಾಗಿ ಇಲ್ಲಿನ ನೂರಾರು ಮನೆಗಳ ಜನರ ಬದುಕೇ ದುಸ್ತರವಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ಸಿಟ್ಟಿಗೆದ್ದ ಯುವಕ ಈಶ್ವರ್‌ ಶಿಲ್ಲೇದಾರ ನಡುರಸ್ತೆಯಲ್ಲೆ ವಿದ್ಯುತ್ ಕಂಬಕ್ಕೆ ಆಧಾರವಾಗಿ ಕುಳಿತು ಆಕ್ರೋಶ ಹೊರಹಾಕಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ, ಪುರಸಭೆ ಮಾಜಿ ಅಧ್ಯಕ್ಷ ವಿಜಯ ಬೋಳನ್ನವರ, ಮಳೆ ನೀರು ಹರಿದು ಹೋಗಲು ಕೂಡಲೇ ಕ್ರಮ ವಹಿಸುತ್ತೇವೆ ಎಂದು ಭರವಸೆ ನೀಡಿದ ನಂತರವೇ ಯುವಕ ಧರಣಿ ಕೈಬಿಟ್ಟಿದ್ದಾನೆ. 

"ಪೌರಾಯುಕ್ತೆ ಮತ್ತು ಪುರಸಭೆ ಮಾಜಿ ಅಧ್ಯಕ್ಷರು ಭರವಸೆ ನೀಡಿ ಹೋಗಿದ್ದಾರೆ. ಹೀಗಾಗಿ, ಧರಣಿ ವಾಪಸ್ ಪಡೆದಿದ್ದೇನೆ. ಅನೇಕ ಬಾರಿ ಮನವಿ ಮಾಡಿಕೊಂಡರೂ ನಮ್ಮ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ‌. ಅನಿವಾರ್ಯವಾಗಿ ಈ ರೀತಿ ನಾನು ಮಾಡಬೇಕಾಯಿತು. ಮುಂದೆ ಈ ರೀತಿ ಸಮಸ್ಯೆ ಆಗದಂತೆ ದುರಸ್ತಿ ಪಡಿಸಬೇಕು" ಎಂದು ಯುವಕ ಈಶ್ವರ್‌ ಶಿಲ್ಲೇದಾರ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News