Basavakalyan | ಬಸವೇಶ್ವರ ರಥೋತ್ಸವದಲ್ಲಿ ಅವಘಡ ಪ್ರಕರಣ : ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತ್ಯು
Update: 2026-04-23 23:11 IST
ಬಸವಕಲ್ಯಾಣ : ನಗರದ ಶ್ರೀ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ರಥೋತ್ಸವದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರನ್ನು ಹುಲಸೂರ್ ತಾಲೂಕಿನ ಮುಚಳಂಬ ಗ್ರಾಮದ ನಿವಾಸಿ ಧನರಾಜ್ (65) ಎಂದು ಗುರುತಿಸಲಾಗಿದೆ.
ಗುರುವಾರ ಬೆಳಿಗ್ಗೆ ನಗರದಲ್ಲಿನ ರಥ ಮೈದಾನದಲ್ಲಿ ನಡೆದ ರಥೋತ್ಸವದ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗಿ ನೂಕಾಟ-ತಳ್ಳಾಟ ಉಂಟಾಯಿತು. ಈ ವೇಳೆ ಧನರಾಜ್ ರಥದ ಚಕ್ರಕ್ಕೆ ಸಿಲುಕಿ ಅವರ ಕಾಲುಗಳು ತುಂಡಾಗಿದ್ದವು. ಘಟನೆಯಲ್ಲಿ ರಿಷಬ್ ಹಾಗೂ ಭೀಮಾಶಂಕರ್ ಎಂಬ ಇಬ್ಬರು ವ್ಯಕ್ತಿಗಳಿಗೂ ಗಂಭೀರ ಗಾಯಗಳಾಗಿದ್ದವು.
ಗಾಯಾಳುಗಳನ್ನು ತಕ್ಷಣ ಕಲಬುರಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಧನರಾಜ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.