ಬೀದರ್ | ಧರ್ಮ, ದೇವರ ಹೆಸರಿನಲ್ಲಿ ಯಾರು ಕೂಡ ಶೋಷಣೆಗೆ ಒಳಗಾಗಬಾರದು : ಡಾ.ತೋಂಟದ ಸಿದ್ದರಾಮ ಮಾಹಾಸ್ವಾಮಿ
ಬೀದರ್ : ಸಂಪತ್ತು ಒಂದೇ ಕಡೆ ಕೇಂದ್ರೀಕೃತಗೊಳ್ಳಬಾರದು. ಸಂಪತ್ತಿನ ವಿತರಣೆ ಆಗಬೇಕು. ಸಂಪತ್ತು ಎಲ್ಲರಲ್ಲೂ ಸಮಾನವಾಗಿ ಇರಬೇಕು ಎನ್ನುವ ದೃಷ್ಟಿಯಿಂದ ಕಾಯಕ, ದಾಸೋಹದಂತಹ ಅಮೂಲ್ಯವಾದ ತತ್ವಗಳು ಬಸವಣ್ಣನವರು ಬಳಕೆಗೆ ತಂದಿದ್ದಾರೆ ಎಂದು ಗದಗನ ಯಡೆಯೂರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಮಾಹಾಸ್ವಾಮಿ ಅವರು ಹೇಳಿದರು.
ಇಂದು ನಗರದ ಚನ್ನಬಸವ ಪಟ್ಟದೇವರು ರಂಗ ಮಂದಿರದಲ್ಲಿ ಬಸವ ಸಂಸ್ಕೃತಿ ಅಭಿಯಾನ ಸಮಿತಿಯಿಂದ ನಡೆದ ಕಾಲೇಜು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಜೊತೆ ವಚನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಯಕ ದಾಸೋಹದಂತಹ ಅಮೂಲ್ಯವಾಗಿರುವಂತಹ ತತ್ವಗಳು ಬಸವಣ್ಣನವರು ಹೇಳಿದ್ದಾರೆ. ವಿಶೇಷವಾಗಿ ಸಮಾಜದಲ್ಲಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ಶೋಷಣೆ ನಡೆಯುತ್ತಿತ್ತು. ಅಂತಹ ಶೋಷಣೆಯನ್ನು ತಡೆಯುವುದಕ್ಕೆ ವಚನ ತತ್ವಗಳನ್ನು ಬಸವಾದಿ ಶರಣರು ನಮಗೆ ತಿಳಿಸಿ ಕೊಟ್ಟಿದ್ದಾರೆ ಎಂದರು.
ಧರ್ಮ ಮತ್ತು ದೇವರ ಹೆಸರಿನಲ್ಲಿ ಯಾರು ಕೂಡ ಶೋಷಣೆಗೆ ಒಳಗಾಗಬಾರದು. ಆದರೆ ಅನೇಕ ಜನ ಅಂಧಶ್ರದ್ಧೆ ಮತ್ತು ಮೂಢನಂಬಿಕೆಗಳಲ್ಲಿ ತಮ್ಮ ಅಮೂಲ್ಯವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂಧಶ್ರದ್ದೆ ಮತ್ತು ಮೂಢನಂಬಿಕೆಯು ಸಮಾಜದಿಂದ ದೂರವಾಗಬೇಕು ಎನ್ನುವ ಉದ್ದೇಶದಿಂದ ಬಸವಾದಿ ಶರಣರು ವಚನಗಳಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನೇಕ ವಿದ್ಯಾರ್ಥಿಗಳು ವಚನ ಸಾಹಿತ್ಯದ ಬಗ್ಗೆ ಹಲವಾರು ಪ್ರಶ್ನೆಗಳು ಕೇಳಿದರು. ವಿದ್ಯಾರ್ಥಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಮಠಾಧಿಶರು ಉತ್ತರಿಸಿದರು.
ಈ ಸಂದರ್ಭದಲ್ಲಿ ಡಾ.ಬಸವಲಿಂಗ ಪಟ್ಟದೇವರು, ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ, ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿ, ಬಸವರಾಜ್ ಧನ್ನೂರು, ರಜನಿಶ್ ವಾಲಿ ಹಾಗೂ ಡಾ.ಅಬ್ದುಲ್ ಖದಿರ್ ಸೇರಿದಂತೆ ಅನೇಕ ಮಠದ ಸ್ವಾಮಿಜಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.