ಬೀದರ್ | ಕಾನೂನು ಪದವೀಧರರ ತರಬೇತಿಗಾಗಿ ಅರ್ಜಿ ಆಹ್ವಾನ
ಬೀದರ್ : ಜಿಲ್ಲೆಯಲ್ಲಿ ಕಾನೂನು ಪದವಿ ಪಡೆದಿರುವ ಹಿಂದುಳಿದ ವರ್ಗಗಳ 10 ಅಭ್ಯರ್ಥಿಗಳಿಗೆ ಸರಕಾರಿ ವಕೀಲರು ಅಥವಾ 20 ವರ್ಷಗಳಿಗಿಂತ ಹೆಚ್ಚಿನ ಅನುಭವವುಳ್ಳ ವಕೀಲರಿಂದ ತರಬೇತಿ ಕೊಡಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಮಟ್ಟದ ಹಿಂದುಳಿದ ವರ್ಗಗಳ ಕಾನೂನು ಪದವೀಧರರ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿಯ ಅವಧಿಯು 4 ವರ್ಷಗಳಾಗಿದ್ದು, ತರಬೇತಿ ಅವಧಿಯಲ್ಲಿ ಮಾಸಿಕ 4,000 ರೂ. ತರಬೇತಿ ಭತ್ಯೆ ನೀಡಲಾಗುತ್ತದೆ. ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ, 3ಬಿ ಗೆ ಸೇರಿದವರಾಗಿರಬೇಕು. ಬೀದರ್ ಜಿಲ್ಲೆಯ ನಿವಾಸಿಯಾಗಿರಬೇಕು. ಪ್ರವರ್ಗ-1ರ ಅಡಿಯಲ್ಲಿ ಬರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕುಟುಂಬ ವಾರ್ಷಿಕ ಆದಾಯ 3.50 ಲಕ್ಷ ರೂ. ಮತ್ತು ಪ್ರವರ್ಗ-2ಎ, 3ಎ ಮತ್ತು 3ಬಿ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂ. ಮಿತಿ ಮೀರಿರಬಾರದು. ಅಭ್ಯರ್ಥಿಯು ಬಾರ್ ಕೌನ್ಸಿಲ್ ನಲ್ಲಿ ಹೆಸರು ನೋಂದಾಯಿಸಿರಬೇಕು ಎನ್ನಲಾಗಿದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕದ 2 ವರ್ಷದ ಹಿಂದೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕಡೆಯ ದಿನಾಂಕಕ್ಕೆ ಪ್ರವರ್ಗ 2ಎ, 3ಎ, ಮತ್ತು 3ಬಿ ಪ್ರವರ್ಗಗಳ ಅಭ್ಯರ್ಥಿಯ ವಯಸ್ಸು 38ಕ್ಕೆ ಹಾಗೂ ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳ ವಯಸ್ಸು 40ಕ್ಕೆ ಮೀರಿರಬಾರದು. ಅರ್ಜಿ ಸ್ವೀಕರಿಸಲು ನಿಗಡಿಪಡಿಸಿರುವ ಕಡೆಯ ದಿನಾಂಕದ 3 ವರ್ಷಗಳ ಅವಧಿಯೊಳಗೆ ಅಭ್ಯರ್ಥಿಯು ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ದಾಖಲಾತಿಗಳು :
ಎಸೆಸೆಲ್ಸಿ ದೃಢೀಕೃತ ಅಂಕಪಟ್ಟಿ, ಕಾನೂನು ಪದವಿ ಪರೀಕ್ಷೆಯ ಎಲ್ಲಾ ವರ್ಷಗಳ ದೃಢೀಕೃತ ಅಂಕಪಟ್ಟಿ, ತಹಶೀಲ್ದಾರ್ ರಿಂದ ನೀಡಲ್ಪಟ್ಟ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಬಾರ್ ಕೌನ್ಸಿಲ್ನಲ್ಲಿ ನೋಂದಾಯಿಸಿದ ಪ್ರಮಾಣ ಪತ್ರ.
ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ನಾವದಗೇರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲಿ ಪಡೆದು, ಅಗತ್ಯ ದಾಖಲೆಗಳೊಂದಿಗೆ ಸೆ.8ರ ಸಾಯಂಕಾಲ 5 ಗಂಟೆಯೊಳಗೆ ನಾವದಗೇರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.