ಬೀದರ್ | ತೆರಿಗೆ ವಂಚನೆ : ಆರೋಪಿಯ ಬಂಧನ
ಬೀದರ್, ಆ.23: ತೆರಿಗೆ ವಂಚನೆಯ ಕೃತ್ಯದಲ್ಲಿ ತೊಡಗಿರುವ ಬೀದರ್ ಜಿಲ್ಲೆಯ ನಿವಾಸಿ ರಾಹುಲ್ ಕುಲಕರ್ಣಿ ಎಂಬವರನ್ನು ಹೈದರಾಬಾದ್ನಲ್ಲಿ ಬಂಧಿಸಲಾಗಿದೆ ಎಂದು ಕಲಬುರಗಿ ಪೂರ್ವ ವಲಯ ವಾಣಿಜ್ಯ ತೆರಿಗೆ (ಜಾರಿ) ಇಲಾಖೆಯ ಜಂಟಿ ಆಯುಕ್ತೆ ಯಾಸ್ಮಿನ್ ವಾಲಿಕಾರ ತಿಳಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 4 ವರ್ಷಗಳಿಂದ ತೆರಿಗೆ ಇಲಾಖೆಗೆ ವಂಚಿಸುತ್ತಾ ಬಂದಿರುವ ರಾಹುಲ್, ಸುಮಾರು 9 ಕೋಟಿ 20 ಲಕ್ಷ ರೂ. ತೆರಿಗೆ ವಂಚನೆ ಮಾಡಿದ್ದಾರೆ. ಸರಕು ಹಾಗೂ ಸೇವೆಗಳನ್ನು ಪೂರೈಸದೆ ನಕಲಿ ಬಿಲ್ಲುಗಳು ನೀಡಿ ನಕಲಿ ಹೂಡುವಳಿ ತೆರಿಗೆಯ ಕ್ಲೇಮು ಮಾಡಲು ಸಹಕರಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಸರಕಾರಕ್ಕೆ ವಂಚಿಸಿದ ಆರೋಪ ದಡಿ ರಾಹುಲ್ಗೆ ಕನಿಷ್ಟ 5 ವರ್ಷ ಜೈಲು ಹಾಗೂ ದಂಡ ವಿಧಿ ಸುತ್ತದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬೀದರ್ ತೆರಿಗೆ ಸಹಾಯಕ ಆಯುಕ್ತ (ಜಾರಿ) ಪರ್ವತಗೌಡ ಎಸ್., ವಾಣಿಜ್ಯ ತೆರಿಗೆ ಅಧಿಕಾರಿ ಅಶೋಕ ಶೆಂಬಳ್ಳಿ, ಕಲಬುರಗಿ ವಾಣಿಜ್ಯ ತೆರಿಗೆ ಅಧಿಕಾರಿ (ಜಾರಿ) ಖಾಜಾ ಖಲಲೀಲುಲ್ಲಾ, ವಾಣಿಜ್ಯ ತೆರಿಗೆ ಉಪಯುಕ್ತರು (ಜಾರಿ) ಪುಷ್ಷಲತಾ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು(ಜಾರಿ) ಪ್ರಭಾತ ರಂಜನ , ಮಹೇಶ ಟಿ.ಎ., ಸೇರಿದಂತೆ ಇತರರು ಇದ್ದರು.