ಜು.11ರಂದು ಬೀದರ್ನಲ್ಲಿ ‘ಮಹಮೂದ್ ಗವಾನ್’ ಐತಿಹಾಸಿಕ ನಾಟಕ ಪ್ರದರ್ಶನ : ಡಾ.ಅಬ್ದುಲ್ ಖದೀರ್
ಬೀದರ್: ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಹಾಗೂ ಬೆಂಗಳೂರಿನ ಕಥ್ಪುತ್ಲಿಯಾನ್ ಥಿಯೇಟರ್ ಗ್ರೂಪ್ (ಕೆಟಿಜಿ) ಸಂಯುಕ್ತಾಶ್ರಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಕೃತಿ ಆಧಾರಿತ ‘ಮಹಮೂದ್ ಗವಾನ್’ ಐತಿಹಾಸಿಕ ನಾಟಕವನ್ನು ಜುಲೈ 11ರಂದು ಸಂಜೆ 7.30ಕ್ಕೆ ನಗರದ ಹೊರವಲಯದ ಶಾಹೀನ್ ನಗರದ ಅಬ್ದುಲ್ ರಹೆಮಾನ್ ಸಭಾಂಗಣದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಫರ್ ಮೊಹಿಯುದ್ದೀನ್ ನಾಟಕವನ್ನು ನಿರ್ದೇಶಿಸುತ್ತಿದ್ದು, ಬೀದರ್ನಲ್ಲಿ ಈ ನಾಟಕ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ ಐತಿಹಾಸಿಕ ಮಹತ್ವ ಹೊಂದಿದೆ ಎಂದರು.
15ನೇ ಶತಮಾನದ ಮಹಾನ್ ರಾಜಕಾರಣಿ, ವಿದ್ವಾಂಸ ಹಾಗೂ ಶಿಕ್ಷಣಪ್ರೇಮಿ ಖ್ವಾಜಾ ಮಹಮೂದ್ ಗವಾನ್ ಅವರ ಐತಿಹಾಸಿಕ ಬದುಕಿನ ಸನ್ನಿವೇಶಗಳನ್ನು ನಾಟಕದಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಬಹಮನಿ ಸುಲ್ತಾನರ ಆಡಳಿತದ ಕಾಲಘಟ್ಟದಲ್ಲಿ ಅಧಿಕಾರ, ಜ್ಞಾನ, ಸುಧಾರಣೆ, ಮಹತ್ವಾಕಾಂಕ್ಷೆ ಮತ್ತು ದ್ರೋಹಗಳ ನಡುವಿನ ಸಂಘರ್ಷವನ್ನು ನಾಟಕ ಬಿಂಬಿಸುತ್ತದೆ ಎಂದು ಹೇಳಿದರು.
ಕಥ್ಪುತ್ಲಿಯಾನ್ ಥಿಯೇಟರ್ ಗ್ರೂಪ್ನ ಸಂಸ್ಥಾಪಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಫರ್ ಮೊಹಿಯುದ್ದೀನ್ ಮಾತನಾಡಿ, 1979ರಿಂದ ಉರ್ದು ಹಾಗೂ ಹಿಂದಿ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದು, ಡಾ. ಗಿರೀಶ್ ಕಾರ್ನಾಡ್ ಹಾಗೂ ಶಂಕರ್ ನಾಗ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು.
ನಾಟಕದಲ್ಲಿ ಸಾಗ್ನಿಕ್ ಸಿನ್ಹಾ ಅವರು ಮಹಮೂದ್ ಗವಾನ್ ಪಾತ್ರದಲ್ಲಿ ಅಭಿನಯಿಸಲಿದ್ದು, ಪ್ರತೀಕ್ ಸುಲ್ತಾನಿಯಾ, ಅಶೋಕ ಧಾರಿವಾಲ್, ರಕ್ಷಿತ ರಾವ್ ಹಾಗೂ ಡಾ. ಕವಿತಾ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಂಗಸಜ್ಜಿಕೆಯನ್ನು ಶಶಿಧರ್ ಅಡಪ, ಬೆಳಕು ವಿನ್ಯಾಸವನ್ನು ಪ್ರದೀಪ್ ಬೆಳವಾಡಿ ಹಾಗೂ ಸಂಗೀತ ನಿರ್ದೇಶನವನ್ನು ಉಸ್ತಾದ್ ಫಯಾಜ್ ಖಾನ್ ನಿರ್ವಹಿಸಿದ್ದು, ಪ್ರೇಕ್ಷಕರಿಗೆ ವಿಶಿಷ್ಟ ರಂಗಾನುಭವ ನೀಡಲಿದೆ ಎಂದು ತಿಳಿಸಿದರು.
ಶಾಹಿನ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯೆ ಅಫ್ರಾನಾಝ್ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಡಾ.ಸಿರಾಜುಲ್ ಹಸನ್ ಇದ್ದರು.