ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಚುನಾವಣೆ | ಕಾನೂನು ತಜ್ಞರ ಸಲಹೆ ಪಡೆದು ಮರು ಮತ ಎಣಿಕೆಗೆ ಮನವಿ : ಬಿಜೆಪಿ ಪರಾಜಿತ ಅಭ್ಯರ್ಥಿ ದೀಪಕ್ ದೊಡ್ಡಯ್ಯ
ಚಿಕ್ಕಮಗಳೂರು, ಮೇ 7: ಕಾನೂನು ತಜ್ಞರ ಸಲಹೆ ಪಡೆದು 2023ರ ಮೂಡಿಗೆರೆ ಕ್ಷೇತ್ರದ ವಿಧಾನಸಭೆ ಚುನಾವಣೆಯ ಮರು ಮತ ಎಣಿಕೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡುವುದಾಗಿ ಬಿಜೆಪಿ ಪರಾಜಿತ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು 722 ಮತಗಳಿಂದ ಪರಾಜಿತಗೊಂಡಿದ್ದು, ಈ ವೇಳೆ ಮತ ಎಣಿಕೆಯಲ್ಲಿ ಲೋಪ ಆಗಿದೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬಂದಿತ್ತು. ಅಂದು ಮರು ಮತ ಎಣಿಕೆಗೆ ಮನವಿ ಮಾಡಬೇಕೆಂದು ಕಾರ್ಯಕರ್ತರು, ಮುಖಂಡರು ಒತ್ತಾಯಿಸಿದ್ದರು. ಸದ್ಯ ಶೃಂಗೇರಿ ಕ್ಷೇತ್ರ ಚುನಾವಣೆಯಲ್ಲಿ ಅಂಚೆ ಮತಗಳ ಎಣಿಕೆಯಿಂದ ಬಿಜೆಪಿಗೆ ಅನ್ಯಾಯವಾಗಿರುವ ಸದ್ಯ ರುಜುವಾತಾಗಿದೆ. ಈ ಹಿನ್ನೆಲೆಯಲ್ಲಿ ಮರು ಮತ ಎಣಿಕೆಗೆ ಮನವಿ ಮಾಡುವುದಾಗಿ ತಿಳಿಸಿದರು.
2023ರ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಬಹುಮತಕ್ಕಾಗಿ ವೋಟ್ ಟ್ಯಾಂಪರಿಂಗ್ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೀವರಾಜ್ ಕಳೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ವೇಳೆ ಅಂಚೆ ಮತ ಎಣಿಕೆಯಲ್ಲಿ ಲೋಪ ಆಗಿರುವುದನ್ನು ಮನಗಂಡು ಮರು ಮತ ಎಣಿಕೆಗೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ಆದೇಶದಂತೆ ಮರು ಮತ ಎಣಿಕೆ ನಡೆದಿದ್ದು, ಸದ್ಯ ಜೀವರಾಜ್ ಶಾಸಕರಾಗಿ ಆಯ್ಕೆಯಾಗಿರುವುದನ್ನು ಚುನಾವಣಾ ಆಯೋಗ ದೃಢಪಡಿಸಿದೆ ಎಂದರು.
ಕಳೆದ ಚುನಾವಣೆಯಲ್ಲಿ ತಾನು ಬಿಜೆಪಿ ಅಭ್ಯರ್ಥಿಯಾಗಿ ಮೂಡಿಗೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಮತ ಎಣಿಕೆ ವೇಳೆ ನಾನು 722 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಯಿಂದ ಪರಾಜಿತಗೊಂಡಿದ್ದೆ. ಅತ್ಯಲ್ಪ ಮತಗಳ ಅಂತರದಿಂದ ಸೋತ ಹಿನ್ನೆಲೆಯಲ್ಲಿ ಮತ ಎಣಿಕೆಯಲ್ಲಿ ಲೋಪ ಆಗಿರುವ ಬಗ್ಗೆ ಮುಖಂಡರು, ಕಾರ್ಯಕರ್ತರು ಶಂಕೆ ವ್ಯಕ್ತಪಡಿಸಿ ಮರು ಮತ ಎಣಿಕೆಗೆ ಮನವಿ ಸಲ್ಲಿಸುವಂತೆ ಒತ್ತಾಯಿಸಿದ್ದರು. ಆದರೆ, ಅಂದು ನಾನು ಮರು ಮತ ಎಣಿಕೆಗೆ ಆಗ್ರಹಿಸಿರಲಿಲ್ಲ. ಸದ್ಯ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಎಣಿಕೆಯಲ್ಲಿ ಜೀವರಾಜ್ಗೆ ಅನ್ಯಾಯವಾಗಿರುವುದು ದೃಢಪಟ್ಟಿದ್ದು, ಮೂಡಿಗೆರೆ ಕ್ಷೇತ್ರದಲ್ಲಿ ನನಗೂ ಅನ್ಯಾಯವಾಗಿರುವ ಶಂಕೆ ಈಗ ದಟ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ನಡೆ ಬಗ್ಗೆ ಚಿಂತಿಸಲಾಗುವುದು ಎಂದರು.