ಕಲ್ಲಾಪು| ಬೀದಿ ಬದಿ ವ್ಯಾಪಾರಿಗಳ ವಿರುದ್ಧ ಹೆದ್ದಾರಿ ಪ್ರಾಧಿಕಾರ ಕಾರ್ಯಾಚರಣೆ; ಮೀನು ಮಾರುಕಟ್ಟೆ ತೆರವು
ಉಳ್ಳಾಲ: ಕಲ್ಲಾಪುವಿನಲ್ಲಿ ಸುಮಾರು ಹತ್ತು ವರುಷಗಳಿಂದ ವ್ಯಾಪಾರ ನಡೆಸುತ್ತಿದ್ದ ಮೀನು ಮಾರುಕಟ್ಟೆಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗುರುವಾರ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ.
ಕಲ್ಲಾಪು ರಸ್ತೆ ಬದಿಯಲ್ಲಿ ಮೀನು ಮಾರುಕಟ್ಟೆ ಕಾರ್ಯಾಚರಿಸುತ್ತಿತ್ತು. ಇದೀಗ ಹೆದ್ದಾರಿ ಸರ್ವಿಸ್ ರಸ್ತೆ ನಿರ್ಮಾಣದ ಕಾರಣವೊಡ್ಡಿ ಕಾರ್ಯಾಚರಣೆ ಗಿಳಿದ ಹೆದ್ದಾರಿ ಪ್ರಾಧಿಕಾರವು ಮಾರುಕಟ್ಟೆಯನ್ನು ತೆರವುಗೊಳಿಸಿದೆ.
ಗುರುವಾರ ಬೆಳಿಗ್ಗೆ ಕಲ್ಲಾಪುವಿಗೆ ಜೆಸಿಬಿ ಯಂತ್ರಗಳೊಂದಿಗೆ ಹೆದ್ದಾರಿ ಗುತ್ತಿಗೆ ಕಾಮಗಾರಿಯ ತಂಡವು ಮಾರುಕಟ್ಟೆಯನ್ನ ತೆರವಿಗೆ ಮುಂದಾಗಿದ್ದು, ಈ ವೇಳೆ ಮೀನು ಮಾರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಅಬ್ದುಲ್ಲ ಜಾವೆದ್ ಅಜ್ಮಿ ಅವರು ಖುದ್ದು ಭೇಟಿ ನೀಡಿ ತಕ್ಷಣವೇ ಮಾರುಕಟ್ಟೆಯನ್ನ ತೆರವಿಗೆ ಸೂಚಿಸಿದ್ದಾರೆ.ಈ ವೇಳೆ ವ್ಯಾಪಾರಿಗಳು ಕಾರ್ಯಾಚರಣೆಯನ್ನ ತಡೆಯಲು ಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಜಾವೆದ್ ಅಜ್ಮಿಯವರು ಅನಧಿಕೃತ ಮೀನು ಮಾರುಕಟ್ಟೆಯನ್ನ ತೆರವುಗೊಳಿಸಲು ಈಗಾಗಲೇ ನಿಮಗೆ ನಾಲ್ಕು ತಿಂಗಳುಗಳಿಂದ ನೋಟೀಸು ನೀಡಲಾಗಿದೆ.ಹಾಗಾಗಿ ನಿಮ್ಮ ವಿರುದ್ಧ ಫೆನಾಲ್ಟಿ ಹಾಕುವ ಪ್ರಕರಣ ಇದಾಗಿದೆಯೆಂದು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದು,ಈ ಹಿನ್ನೆಲೆಯಲ್ಲಿ ಅವರು ಖುದ್ದಾಗಿ ಮಾರುಕಟ್ಟೆಯನ್ನು ತೆರವುಗೊಳಿಸಿದ್ದಾರೆ.