×
Ad

ಅಡ್ಡ ಮತದಾನ ವಿವಾದ : ಬೇಲೂರು ಶಾಸಕ ಹೆಚ್. ಕೆ. ಸುರೇಶ್ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ

Update: 2026-06-30 14:49 IST

ಬೆಳ್ತಂಗಡಿ: ರಾಜ್ಯ ವಿಧಾನ ಪರಿಷತ್ ಚುನವಾಣೆಯಲ್ಲಿ ಬಿಜೆಪಿ ಪಾಳಯದಲ್ಲಿ ನಡೆದ ಅಡ್ಡ ಮತದಾನ ತೀವ್ರ ಚರ್ಚೆಯಾಗುತ್ತಿದ್ದು, ಈ ಮಧ್ಯೆ ಹಾಸನ ಜಿಲ್ಲೆಯ ಬೇಲೂರು ಶಾಸಕ ಹುಲ್ಲಹಳ್ಳಿ ಕೆ.ಸುರೇಶ್ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದರು.

ಧರ್ಮಸ್ಥಳಕ್ಕೆ  ಭೇಟಿ ನೀಡಿದ ಅವರು ಮಂಜುನಾಥ ಸ್ವಾಮಿಯ ದರ್ಶನ ಪಡೆದು, ನನ್ನ ಮೇಲೆ ಅಪಪ್ರಚಾರ ಮಾಡಿದವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿ ಕಾಣಿಕೆ ಹಾಕಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪಕ್ಷ ದ್ರೋಹ ಮಾಡಿಲ್ಲ, ಬಿಜೆಪಿಯ ನಿಷ್ಠಾವಂತ ಪ್ರಾಮಾಣಿಕ ಕಾರ್ಯಕರ್ತನಾಗಿದ್ದು, ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಲ್ಲ. ಪಕ್ಷದ ವರಿಷ್ಠರು ಸೂಚಿಸಿದ ವ್ಯಕ್ತಿಗೆ ಮತದಾನ ಮಾಡಿದ್ದೇನೆ ಎಂದು ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡುತ್ತೇನೆ. ನನ್ನ ಮೇಲೆ ಬಂದಿರುವ ಆರೋಪಕ್ಕೆ ಮಂಜುನಾಥ ಸ್ವಾಮಿ ಹಾಗೂ ನನ್ನ ಕ್ಷೇತ್ರದ ಜನರೇ ಸಾಕ್ಷಿ. ಬಿಜೆಪಿ ಪಕ್ಷ ನನ್ನ ತಾಯಿ. ಹಾಗಾಗಿ ನನ್ನ ಬೆಳವಣಿಗೆಯನ್ನು ಸಹಿಸಲಾರದೆ ಕೆಲವರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

"ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ ಅಣ್ಣಪ್ಪ ಬೆಟ್ಟದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ,  "ನಾನು ಮೋಸ ಮಾಡಿಲ್ಲ.  ಅಪಪ್ರಚಾರ ಮಾಡಿದವರಿಗೆ ಒಳ್ಳೆಯ ಬುದ್ಧಿ ನೀಡಲಿ" ಎಂದು ಹೇಳಿ ತೆಂಗಿನಕಾಯಿ ಒಡೆದರು. 

ದೇವರ ದರ್ಶನದ ಬಳಿಕ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News