×
Ad

ದ.ಕ. ಜಿಲ್ಲಾ ನೂತನ ಖಾಝಿಯಾಗಿ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂಙಳ್

► ಮಂಗಳೂರಿನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಆಡಳಿತ ಸಮಿತಿ ಅಧಿಕೃತ ಘೋಷಣೆ

Update: 2026-07-11 18:54 IST

ಮಂಗಳೂರು, ಜು.11: ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರ ನಿಧನದಿಂದಾಗಿ ತೆರವಾದ ದ.ಕ.ಜಿಲ್ಲಾ ಖಾಝಿ ಸ್ಥಾನಕ್ಕೆ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂಙಳ್ ಬಾ-ಅಲವಿ ಅವರನ್ನು ಆಯ್ಕೆ ಮಾಡಿರುವುದಾಗಿ ಮಂಗಳೂರಿನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷ ಯೆನೆಪೋಯ ಅಬ್ದುಲ್ಲಾ ಕುಂಞಿ ಶನಿವಾರ ಅಧಿಕೃತವಾಗಿ ಘೋಷಿಸಿದರು.

ಕೇರಳದ ಹಿರಿಯ ಧಾರ್ಮಿಕ ವಿದ್ವಾಂಸರಾಗಿರುವ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂಙಳ್ ಕೆಲವು ದಿನಗಳ ಹಿಂದೆಯೇ ದ.ಕ.ಜಿಲ್ಲಾ ಖಾಝಿಯಾಗಿ ಹೊಣೆಗಾರಿಕೆ ವಹಿಸಿಕೊಳ್ಳಲು ಒಪ್ಪಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಶನಿವಾರ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಆಡಳಿತ ಸಮಿತಿಯ ನೇತೃತ್ವದಲ್ಲಿ ಶನಿವಾರ ನಡೆದ ಹಲವಾರು ಮಸೀದಿಗಳ ಪ್ರಮುಖರ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು.

ಈ ಸಂದರ್ಭ ಈದ್ಗಾ ಮತ್ತು ಕೇಂದ್ರ ಜುಮ್ಮಾ ಮಸೀದಿಯ ಉಪಾಧ್ಯಕ್ಷ ಕೆ. ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಕೋಶಾಧಿಕಾರಿ ಎಸ್.ಎಂ. ರಶೀದ್ ಹಾಜಿ, ಸದಸ್ಯರಾದ ಸಮದ್ ಹಾಜಿ, ಅದ್ದು ಹಾಜಿ, ಅಶ್ರಫ್ ಹಳೆಮನೆ, ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಮೊಯ್ದಿನಬ್ಬ ಹಾಜಿ, ಪ್ರಮುಖರಾದ ಯೆನೆಪೊಯ ಜಾವಿದ್ ಮತ್ತಿತರರು ಪಾಲ್ಗೊಂಡಿದ್ದರು.

ನೂತನ ಖಾಝಿಯ ಪರಿಚಯ:-

ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂಙಳ್ ಬಾ-ಅಲವಿ 1966ರ ಮೇ 2ರಂದು ಕೇರಳದ ಮಲಪ್ಪುರಂ ಜಿಲ್ಲೆಯ ಪಾಣಕ್ಕಾಡ್ ಸಮೀಪದ ಪೂವಾಡ್ ಎಂಬಲ್ಲಿ ಜನಿಸಿದರು. ಓತುಪಲ್ಲಿಯಲ್ಲಿ ಶಿಕ್ಷಣ ವನ್ನು ಆರಂಭಿಸಿದ ಅವರು ಪಲ್ಲಿದರ್ಸ್ ಮೂಲಕ 13 ವರ್ಷಗಳ ಕಾಲ ಇಸ್ಲಾಮಿಕ್ ಅಧ್ಯಯನವನ್ನು ಮುಂದುವರಿ ಸಿದರು. ಅಪಾರ ಪಾಂಡಿತ್ಯವನ್ನು ಹೊಂದಿರುವ ಪಾಣಕ್ಕಾಡ್ ಸೈಯ್ಯದ್ ನಾಸರ್ ಅಬ್ದುಲ್ ಹಯ್ಯ ಶಿಹಾಬುದ್ದೀನ್ ತಂಙಳ್ ಪ್ರವಾದಿ ಮುಹಮ್ಮದ್ (ಸ) ಅವರ ಕುಟುಂಬ ಪರಂಪರೆಯ ಯಮನಿ ಸಯ್ಯಿದ್ ವಂಶಕ್ಕೆ ಸೇರಿದವರು. ಸನದು ಪಡೆದ ಬಳಿಕ ಹಲವು ಮಸೀದಿಗಳು ಮತ್ತು ಇಸ್ಲಾಮಿಕ್ ಸಂಸ್ಥೆಗಳಲ್ಲಿ ಖತೀಬ್ ಮತ್ತು ಮುದರ್ರಿಸ್ ಆಗಿ ಕಾರ್ಯನಿರ್ವಹಿಸಿದರು. ತನ್ನ ತಂದೆಯ ನಿಧನದ ಬಳಿಕ ಅಂಡಮಾನ್ ದ್ವೀಪಗಳಲ್ಲಿ ಖಾಝಿಯಾಗಿ ಹೊಣೆಗಾರಿಕೆ ವಹಿಸಿಕೊಂಡರು. 2009ರಲ್ಲಿ ಕಲ್ಲಿಕೋಟೆಯ ಗ್ರಾಂಡ್ ಖಾಝಿಯಾಗಿ ಅವರನ್ನು ನಿಯುಕ್ತಿಗೊಳಿಸಲಾಯಿತು. ಪ್ರಸಕ್ತ ಕಲ್ಲಿಕೊಟೆ, ಮಲಪ್ಪುರಂ, ಪಾಲಕ್ಕಾಡ್, ತ್ರಿಶೂರ್ ಜಿಲ್ಲೆಗಳಲ್ಲಿರುವ ಸುಮಾರು 300ಕ್ಕೂ ಅಧಿಕ ಮೊಹಲ್ಲಾಗಳ ಖಾಝಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಯನಾಡಿನ ಇಮಾಮ್ ಗಝಾಲಿ ಅಕಾಡಮಿ ಮತ್ತು ರಶೀದಿಯಾ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಹಾಗೂ ವಯನಾಡಿನ ಸೈನ್ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಲೀಡರ್‌ ಶಿಪ್‌ನ ಪೋಷಕರಾಗಿದ್ದಾರೆ. ಸುನ್ನಿ ಮಹಲ್‌ಲ್ ಫೆರಡೇಶನ್ ಮಲಪ್ಪುರಂ ಜಿಲ್ಲಾ ಮಸ್ಲಹತ್ ಸಮಿತಿಯ ಅಧ್ಯಕ್ಷ ರಾಗಿ, ಸುನ್ನಿ ಯುವಜನ ಸಂಘ ಕೇರಳ ರಾಜ್ಯ ಸಮಿತಿಯ ಸದಸ್ಯರಾಗಿ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ತಿರೂರಙ್ಙಾಡಿ ತಾಲೂಕು ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News