Kadaba | ಹೃದಯಾಘಾತದಿಂದ ರಿಕ್ಷಾ ಚಾಲಕ ಗುರುಪ್ರಸಾದ್ ಮೃತ್ಯು: ಮೃತರ ಗೌರವಾರ್ಥ ಮೀಲಾದ್ ಕಾರ್ಯಕ್ರಮ ರದ್ದು

Update: 2026-08-23 10:51 IST

ಕಡಬ, ಆ.23. ಆಟೋ ಚಾಲಕನೋರ್ವ ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ಸ್ಥಳೀಯ ಮಸೀದಿಯೊಂದರಲ್ಲಿ ನಡೆಯಬೇಕಾಗಿದ್ದ ಈದ್ ಮೀಲಾದ್ ಕಾರ್ಯಕ್ರಮವನ್ನು ಮುಂದೂಡಿರುವ ಘಟನೆ ಕಡಬ ತಾಲೂಕಿನ ಕೊಯಿಲದಿಂದ ವರದಿಯಾಗಿದೆ.

ಕಡಬ ತಾಲೂಕು ಕೊಯಿಲ ಗ್ರಾಮದ ಕುದುಲೂರು ಅಣ್ಣು ಎಂಬುವವರ ಪುತ್ರ ಗುರುಪ್ರಸಾದ್ (35) ಶನಿವಾರದಂದು ಹೃದಯಘಾತದಿಂದ ಶನಿವಾರ ನಿಧನರಾಗಿದ್ದಾರೆ‌. ರಿಕ್ಷಾ ಚಾಲಕರಾಗಿ ಗೋಳಿತ್ತಡಿ ಪೇಟೆಯಲ್ಲಿ ಬಾಡಿಗೆ ನಡೆಸುತ್ತಿದ್ದ ಅವರು ಶನಿವಾರ ಮಧ್ಯಾಹ್ನ ಶಾಲೆಯ ಮಕ್ಕಳನ್ನು ಕರೆತರಲು ಮನೆಯಿಂದ ಹೊರಡುವ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಉಪ್ಪಿನಂಗಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಗುರುಪ್ರಸಾದ್ ರವರ ನಿಧನದ ಸುದ್ದಿ ತಿಳಿದು ಕುದುಲೂರಿನ ಮುಬಾರಕ್ ಜುಮಾ ಮಸೀದಿಯಲ್ಲಿ ಶನಿವಾರ ಸಂಜೆ ಈದ್ ಮಿಲಾದ್ ಪ್ರಯುಕ್ತ ನಡೆಯಬೇಕಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮೃತರ ಗೌರವಾರ್ಥವಾಗಿ ಮುಂದೂಡಲಾಗಿದೆ.

ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಸಹೋದರಿ, ಸಹೋದರನನ್ನು ಅಗಲಿದ್ದಾರೆ.

ಮೃತ ಯುವಕ ಗುರುಪ್ರಸಾದ್ ರವರ ಮನೆ ಮಸೀದಿಯ ಕೂಗಳತೆ ದೂರದಲ್ಲಿದ್ದು, ಎಲ್ಲರೊಂದಿಗೆ ಬೆರೆತು ಸಮಾಜದಲ್ಲಿ ಸೌಹಾರ್ದತೆಗೆ ಒತ್ತುಕೊಡುತ್ತಿದ್ದ ಮೃತರ ನಿಧನದ ಗೌರವಾರ್ಥವಾಗಿ ನಾವು ಶನಿವಾರ ನಡೆಯಬೇಕಾಗಿದ್ದ ಕಾರ್ಯಕ್ರಮವನ್ನು ಮುಂದೂಡಿದ್ದೇವೆ.

ಕೆ.ವೈ.ಇಸ್ಮಾಯಿಲ್, ಅಧ್ಯಕ್ಷರು, ಮುಬಾರಕ್ ಜುಮಾ ಮಸೀದಿ, ಕುದುಲೂರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News