ʼಮತಗಳ್ಳತನʼ ಆರೋಪ | ಎಸ್ಐಟಿ ತನಿಖೆ ಆರಂಭದಲ್ಲೇ ಆಳಂದದ ಹಳ್ಳವೊಂದರಲ್ಲಿ ರಾಶಿ ಸಂಖ್ಯೆಯಲ್ಲಿ ಮತದಾರರ ಚೀಟಿಯ ಪಟ್ಟಿ ಪತ್ತೆ !
ಕಲಬುರಗಿ : ʼಮತಗಳ್ಳತನʼ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ರಾಜ್ಯ ಸರಕಾರ ಎಸ್ಐಟಿ ರಚನೆ ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ವಿಶೇಷ ತನಿಖಾ ತಂಡ ಕಲಬುರಗಿಗೆ ಬಂದು ತೀವ್ರ ತನಿಖೆ ಮಾಡುತ್ತಿರುವ ವೇಳೆ ಆಳಂದ ತಾಲೂಕಿನಲ್ಲಿ ರಾಶಿ ಸಂಖ್ಯೆಯಲ್ಲಿ ಮತದಾರರ ಚೀಟಿಯ ಪಟ್ಟಿ ಹಾಗೂ ಇತರೆ ದಾಖಲೆಗಳು ಪತ್ತೆಯಾಗಿರುವ ಘಟನೆ ಶುಕ್ರವಾರ ನಡೆದಿದೆ.
ಆಳಂದ ಪಟ್ಟಣದಿಂದ ಶಕಾಪುರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿನ ಹಳ್ಳವೊಂದರಲ್ಲಿ ಮತದಾರರ ಚೀಟಿಯ ಪಟ್ಟಿ, ಮತದಾರರನ್ನು ತೆಗೆದು ಹಾಕುವ ಫಾರ್ಮ್ ನಂ.6 ಮತ್ತು 7 ಸೇರಿದಂತೆ ಇತರೆ ಫಾರ್ಮ್ಗಳನ್ನು ಒಳಗೊಂಡಿರುವ ಕಂತೆ ಕಂತೆ ಕಡತಗಳು, ಬಿಜೆಪಿ ಪಕ್ಷದ ಕರಪತ್ರಗಳು ಪ್ರತ್ಯಕ್ಷವಾಗಿವೆ ಎಂದು ಸ್ಥಳೀಯ ಮೂಲಗಳಿಂದ ತಿಳಿದುಬಂದಿದೆ.
ಯಾರೋ ವ್ಯಕ್ತಿಗಳು ಪೇಪರ್ ಗಳನ್ನು ಟಂಟಂನಲ್ಲಿ ತುಂಬಿಕೊಂಡು ಬಂದು ಹಳ್ಳದ ಸಮೀಪ ಅವುಗಳನ್ನು ಸುಡುವ ಪ್ರಯತ್ನ ಮಾಡುತ್ತಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಪೇಪರ್ ಗಳು ಇರುವುದರಿಂದ ಅವುಗಳನ್ನು ಹಳ್ಳಕ್ಕೆ ಎಸೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಳಂದ ಪೊಲೀಸ್ ಠಾಣೆಯ ಪಿಐ ಶರಣಬಸಪ್ಪ ಕೊಡ್ಲಾ, ಶಕಾಪುರ ಹಳ್ಳದಲ್ಲಿ ಸಂಜೆಯ ವೇಳೆ ಮತದಾರರ ಪಟ್ಟಿ ಸೇರಿದಂತೆ ಇತರೆ ದಾಖಲೆಗಳು ಕಂಡು ಬಂದಿವೆ. ಈ ಕುರಿತು ಪರಿಶೀಲನೆಗೆ ಎಸ್ಐಟಿ ಅಧಿಕಾರಿಗಳ ತಂಡ ಬಂದಿದ್ದು, ಅವರೇ ಪರಿಶೀಲಿಸಿ, ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.