Kalaburagi | ರಂಗಗೀತೆಗಳ ಮೂಲಕ ಚಿದಂಬರ ರಾವ್ ಜಂಬೆಗೆ ಭಾವಪೂರ್ಣ ನಮನ
ಕಲಬುರಗಿ: ಖ್ಯಾತ ರಂಗಭೂಮಿ ನಿರ್ದೇಶಕ ಹಾಗೂ ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಚಿದಂಬರ ರಾವ್ ಜಂಬೆ ಅವರ ನಿಧನದ ಹಿನ್ನೆಲೆಯಲ್ಲಿ ಕಲಬುರಗಿ ರಂಗಾಯಣದ ಸಭಾಂಗಣದಲ್ಲಿ ರವಿವಾರ ರಂಗಗೀತೆಗಳ ಮೂಲಕ ಭಾವಪೂರ್ಣ ರಂಗನಮನ ಸಲ್ಲಿಸಲಾಯಿತು.
ಕಲಬುರಗಿ ರಂಗಾಯಣ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗಳು, ಕಲಾವಿದರು ಹಾಗೂ ಸಿಬ್ಬಂದಿ ಜಂಬೆಯವರ ರಂಗಸೇವೆ, ವ್ಯಕ್ತಿತ್ವ ಮತ್ತು ಅವರೊಂದಿಗಿನ ಆತ್ಮೀಯ ಒಡನಾಟವನ್ನು ಸ್ಮರಿಸಿ ಭಾವುಕರಾದರು.
ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಮಾತನಾಡಿ, ಜಂಬೆಯವರ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಹೋಟೆಲ್ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ಅವರು ಬದುಕಿನ ಏಳು-ಬೀಳುಗಳನ್ನು ಎದುರಿಸುತ್ತಲೇ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಇತ್ತೀಚೆಗೆ ನಟಿ ಉಮಾಶ್ರೀ ಅಭಿನಯದ ಶರ್ಮಿಷ್ಠೆ ನಾಟಕವನ್ನು ನಿರ್ದೇಶಿಸಿದ ಕೀರ್ತಿಯೂ ಅವರದ್ದಾಗಿದೆ ಎಂದು ಹೇಳಿದರು.
ಜಂಬೆಯವರು ಒಂದು ಇಡೀ ರಂಗಪೀಳಿಗೆಯನ್ನು ಬೆಳೆಸಿದ ಮಹಾನ್ ಗುರು. ಅವರ ಚಿಂತನೆ, ಶಿಷ್ಯರು ಮತ್ತು ಅವರು ನಿರ್ದೇಶಿಸಿದ ನಾಟಕಗಳ ಮೂಲಕ ಅವರು ಸದಾ ಜೀವಂತವಾಗಿರುತ್ತಾರೆ. ಕಲಬುರಗಿ ರಂಗಾಯಣಕ್ಕೆ ಬಂದು ನಾಟಕ ನಿರ್ದೇಶಿಸಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದ ಜಂಬೆಯವರನ್ನು ಮುಂದಿನ ನಾಟಕಕ್ಕೆ ಆಹ್ವಾನಿಸುವ ಉದ್ದೇಶವೂ ಇತ್ತು ಎಂದು ಸ್ಮರಿಸಿದರು.
ಹಿರಿಯ ರಂಗಕರ್ಮಿ ಪ್ರೊ. ಈಶ್ವರ ಇಂಗನ ಮಾತನಾಡಿ, ಜಂಬೆಯವರ ನಿಧನ ಕನ್ನಡ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ. ಇಂದಿನ ಯುವ ಕಲಾವಿದರು ಅವರ ರಂಗಬದ್ಧತೆ ಮತ್ತು ಶಿಸ್ತನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ರಂಗನಮನ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ರಂಗಕರ್ಮಿ ಶಾಂತಾ ಭೀಮಸೇನ ರಾವ್ ಜಂಬೆಯವರೊಂದಿಗಿನ ಆತ್ಮೀಯ ನೆನಪುಗಳನ್ನು ಹಂಚಿಕೊಂಡರು. ಮನೆಗೆ ಹೋದಾಗ ಅವರು ನೀಡುತ್ತಿದ್ದ ಕಷಾಯ, ಸಾಕುತ್ತಿದ್ದ ನಾಯಿಗಳಿಗೆ ಕನ್ನಡದ ಹೆಸರುಗಳನ್ನು ಇಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ರೀತಿ ಸೇರಿದಂತೆ ಹಲವು ನೆನಪುಗಳನ್ನು ಮೆಲುಕು ಹಾಕಿದರು. ಅವರು ನಿರ್ದೇಶಿಸಿದ ನಾಟಕಗಳು ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿವೆ ಎಂದು ಹೇಳಿದರು.
ರಾಯಚೂರಿನ ಕಲಾವಿದ ಹಾಗೂ ಕಲಬುರಗಿ ರಂಗಾಯಣದ ಕಲಾವಿದ ಮಹಾಂತೇಶ ಮಾತನಾಡಿ, ಜಂಬೆಯವರು ಸಮಯಪಾಲನೆಗೆ ಅಪಾರ ಮಹತ್ವ ನೀಡುತ್ತಿದ್ದರು. ರಂಗದ ಮೇಲೆ ಮಾತ್ರವಲ್ಲ, ಜೀವನದಲ್ಲಿಯೂ ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ಕಲಾವಿದರಿಗೆ ತಿಳಿಸುತ್ತಿದ್ದರು ಎಂದು ಹೇಳಿದರು.
ತಾವು ದೆಹಲಿಯ ಎನ್ಎಸ್ಡಿ ಕಾರ್ಯಾಗಾರಕ್ಕೆ ತೆರಳಲು ಹಣದ ಕೊರತೆ ಎದುರಾದಾಗ ಜಂಬೆಯವರು ಸ್ವಂತ ಹಣ ನೀಡಿ ಟಿಕೆಟ್ ಮಾಡಿಸಿ ಕಳುಹಿಸಿದ್ದರು ಎಂದು ಸ್ಮರಿಸಿದ ಮಹಾಂತೇಶ, ಅವರ ಮಾನವೀಯ ಗುಣಗಳನ್ನು ನೆನಪಿಸಿಕೊಂಡು ಭಾವುಕರಾದರು.
ಕಲಾವಿದರಾದ ಶ್ರೀನಿವಾಸ ದೊರನಹಳ್ಳಿ ಮತ್ತು ಸಾಗರ ಘಾಳೆ ಕೂಡ ಜಂಬೆಯವರೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿ ಭಾವಪೂರ್ಣ ನುಡಿನಮನ ಸಲ್ಲಿಸಿದರು.