ಕಲಬುರಗಿ | ಅಪ್ಪ, ದಾಸೋಹ ಜ್ಞಾನ ರತ್ನ ಪ್ರಶಸ್ತಿ ಪ್ರದಾನ
ಕಲಬುರಗಿ : ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪಾ ಅವರ ಸಾನಿಧ್ಯದಲ್ಲಿ ದೇವಸ್ಥಾನದ ಆವರಣದಲ್ಲಿನ ಅನುಭವ ಮಂಟಪ್ಪದಲ್ಲಿ ಶರಣಬಸವೇಶ್ವರ ಸಂಸ್ಥಾನದ 7ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರ 41ನೇ ಪುಣ್ಯಸ್ಮರಣೆಯ ಪ್ರತಿಷ್ಠಿತ ಅಪ್ಪ ಪ್ರಶಸ್ತಿಯನ್ನು ನಾಲವಾರದ ಶ್ರೀ ಸಿದ್ದ ತೋಟೆಂದ್ರ ಶಿವಾಚಾರ್ಯ ಸ್ವಾಮಿಜೀಗೆ ಹಾಗೂ 203ನೇ ಶರಣಬಸವೇಶ್ವರ ಯಾತ್ರೆ ಮಹೋತ್ಸವದ ಅಂಗವಾಗಿ ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರಿಗೆ ದಾಸೋಹ ಜ್ಞಾನ ರತ್ನ ಪ್ರಶಸ್ತಿ ಪ್ರದಾನ ಹಾಗೂ 51 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಡಾ.ಅವ್ವಾಜಿಯವರು ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್ ಪಡೆದುದ್ದಕ್ಕಾಗಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೈಸೂರು ಮುಕ್ತ ವಿಶ್ವವಿದ್ಯಾಲಯ ಅವ್ವಾಜಿಯವರಿಗೆ ಗೌರವ ಡಾಕ್ಟರೇಟ್ ನೀಡಿದ ಮೂರನೇ ವಿಶ್ವವಿದ್ಯಾಲಯವಾಗಿದೆ. 2020ರಲ್ಲಿ ದಾವಣೆಗೆರೆ ವಿಶ್ವವಿದ್ಯಾಲಯ ಹಾಗೂ 2024ರಲ್ಲಿ ಅಕ್ಕಮಹಾದೇವಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು.
ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮಿ ಪಾಟೀಲ ಮಾಕಾ ಅವರು ಸಂಪಾದಿಸಿದ ಡಾ.ಅವ್ವಾಜಿಯವರ ಜೀವನ ಚರಿತ್ರೆಯ ಪುಸ್ತಕವನ್ನು ಶ್ರೀ ಸಿದ್ಧ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಗಣ್ಯರೆಲ್ಲರು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಅಪ್ಪ ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ್ದ ಶ್ರೀ ಸಿದ್ದ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ತಮಗೆ ನೀಡಿದ ಈ ಪ್ರಶಸ್ತಿ ಶರಣರ ಪ್ರಸಾದ ಎಂದು ಬಣ್ಣಿಸಿದರು.
ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಈ ಸಂಸ್ಥಾನ ಮಹಿಳೆಯರ ಶೈಕ್ಷಣಿಕ ಸಬಲಿಕರಣಕ್ಕೆ ಪ್ರಮುಖವಾದ ಪಾತ್ರವಹಿಸಿದೆ ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸ್ವಾಗತಿಸಿದರು. ಕೆಎಸ್ಯು ಕುಲಪತಿ ಪ್ರೊ.ಶರಣಪ್ಪ ಹಲ್ಸೆ ಮತ್ತು ಬಿ.ಆರ್.ಪಾಟೀಲ್ ಮತ್ತಿತರರು ಮಾತನಾಡಿದರು. ಬಿ.ಜಿ.ಪಾಟೀಲ, ಎಂಎಲ್ಸಿ ಬಿ.ಜಿ.ಪಾಟೀಲ, ಎಂಎಲಸಿ ಶಶೀಲ್ ಜಿ.ನಮೋಶಿ, ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗದೇವ್ ಗುತ್ತೆದಾರ, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ, ಎಚ್ಕೆಇಎಸ್ ಉಪಾದ್ಯಕ್ಷ ರಾಜು ಭಿಮ್ಮಳ್ಳಿ, ವಿವಿ ಕುಲಪತಿ ಡಾ.ಅನೀಲಕುಮಾರ ಬಿಡವೆ, ನಿರ್ದೆಶಕ ಡಾ.ವಿ.ಡಿ.ಮೈತ್ರಿ, ಡೀನ್ ಲಕ್ಷ್ಮಿ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಕಿರಣ ಮಾಕಾ ಇತರರು ಇದ್ದರು.