ಕಲಬುರಗಿ | ಜಾತಿನಿಂದನೆ, ಜೀವ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಕಲಬುರಗಿ: ಜೇವರ್ಗಿ ತಾಲೂಕಿನ ಕೂಟನೂರ ಗ್ರಾಮದಲ್ಲಿ ಸವರ್ಣಿಯರು ದಲಿತರ ಮೇಲೆ ಹಲ್ಲೆ ಹಾಗೂ ಜಾತಿನಿಂದನೆ ಮತ್ತು ಜೀವ ಬೆದರಿಕೆ ಹಾಕಿರುವ ಮೂವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರಾದ ಭೀಮರಾಯ ನಗನೂರ ಹಾಗೂ ಮಲ್ಲಣ್ಣ ಕೊಡಚಿ ಆಗ್ರಹಿಸಿದ್ದಾರೆ.
ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯ ವ್ಯಾಪ್ತಿಯ ಕೂಟನೂರ ಗ್ರಾಮದ ಶರಣಪ್ಪ ಬಡಿಗೇರ ಎಂಬುವವರ ಮೇಲೆ ಅದೇ ಗ್ರಾಮದ ಸವರ್ಣಿಯರಾದ ಶ್ರೀಶೈಲ ಸಿದ್ರಾಮಪ್ಪ, ಬೈಲಪ್ಪ ಸಿದ್ರಾಮಪ್ಪ, ಸಿದ್ರಾಮಪ್ಪ ಭಾಗಪ್ಪ ಎಂಬುವವರು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಅದಲ್ಲದೆ ಜಾತಿ ನಿಂದನೆ ಮಾಡಿ ಶರಣಪ್ಪ ಬಡಿಗೇರ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಅಲ್ಲಿನ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಹಲ್ಲೆ ಮಾಡಿದವರನ್ನ ಕೂಡಲೆ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಈ ಘಟನೆಯಲ್ಲಿ ವಿಳಂಬ ನೀತಿ ಅನುಸರಿಸಿದರೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗುರಣ್ಣ ಐನಾಪೂರ, ಭಾಗಣ್ಣ ಸಿದ್ದಾಳ, ಸಿದ್ದಪ್ಪ ಆಲೂರ, ಶ್ರೀಹರಿ ಕರಕಳ್ಳಿ, ರವಿ ಕುರಳಗೇರಾ, ಸಿದ್ದು ಕೆರೂರ, ಮಾಪಣ್ಣ ಕಟ್ಟಿ, ವಿಶ್ವರಾಧ್ಯ ಗಂವ್ಹಾರ, ಸಿದ್ದುಶರ್ಮಾ, ಶಿವಶರಣಪ್ಪ ಹೊಸ್ಮನಿ ಸೇರಿದಂತೆ ಇತರರು ಇದ್ದರು.