ಕಲಬುರಗಿ | ಎಫ್ಆರ್ಪಿ ಬೆಲೆ ನಿಗದಿ ಮಾಡದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ದಾಖಲಿಸುವಂತೆ ಆಗ್ರಹ
ಕಲಬುರಗಿ : ಕಬ್ಬು ಬೆಳೆಗಾರರಿಗೆ ಎಫ್ಆರ್ಪಿ ಬೆಲೆ ನಿಗದಿ ಮಾಡದ ಮತ್ತು ಸರಕಾರದ ಮಾರ್ಗಸೂಚಿ ಪಾಲಿಸದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಒತ್ತಾಯಿಸಿ ರೈತ ಸಂಘಟನೆಗಳ ಜಂಟಿ ಕ್ರೀಯಾ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಬಿ.ಆರ್.ಪಾಟೀಲ್ ಅವರು ಯೋಜನಾ ಆಯೋಗದ ಉಪಧ್ಯಾಕ್ಷರು ಹಾಗೂ ರೈತ ಮುಖಂಡರ ಸಭೆಯಲ್ಲಿಯು ಕೂಡ ಸಕ್ಕರೆ ಕಾರ್ಖಾನೆ ಮಾಲಕರಿಗೆ ರೈತರ ಹಿತದೃಷ್ಟಿಯಿಂದ ಕಾನೂನು ಪಾಲನೆ ಮಾಡುವುದರ ಜತೆಗೆ ಬೆಲೆ ನಿಗದಿ ಮಾಡುವುದಕ್ಕಾಗಿ ಎಷ್ಟೇ ಮನವರಿಕೆ ಮಾಡಿದರೂ, ಉದ್ಧಟತನ ತೋರಿಸಿ ಯಾವುದೇ ರೀತಿಯ ಸಹಕಾರ ನೀಡದೆ ಕಾರ್ಖಾನೆಗಳ ಮಾಲಕರು ದರ್ಪವನ್ನು ಎತ್ತಿ ತೋರಿದ್ದಾರೆ. ಇಂತಹ ಸಕ್ಕರೆ ಖಾರ್ಕಾನೆ ಮಾಲಕರ ವಿರುದ್ಧ ಮತ್ತು ಆಡಳಿತ ವರ್ಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಎಫ್ಆರ್ಪಿ ಬೆಲೆ ನಿಗದಿ ಮಾಡಿಲ್ಲ. ಹಲವಾರು ಬಾರಿ ಜಿಲ್ಲಾಧಿಕಾರಿಗಳು ಸರಕಾರದ ಮಾರ್ಗಸೂಚಿಗಳನ್ನು ಮತ್ತು ಕಬ್ಬು ಬೆಳೆಗಾರರಿಗೆ ಆಗುತ್ತಿರುವ ತೂಕದಲ್ಲಿ ನಷ್ಟವನ್ನು ತಪ್ಪಿಸುವಂತೆ ಎರಡು ಮೂರು ಸಭೆಗಳು ನಡೆಸಿದ್ದರೂ, ಸಕ್ಕರೆ ಕಾರ್ಖಾನೆಗಳ ಆಡಳಿತ ವರ್ಗ ಯಾವುದೇ ಕ್ರಮ ಕೈಗೊಂಡಿಲ್ಲ. ಕೆಲವು ಸಕ್ಕರೆ ಕೈಗಾರಿಕಾ ಮಾಲಕರು ರಾಜಕೀಯವಾಗಿ ಪ್ರಬಲವಾಗಿರುವುದರಿಂದ ರೈತರಿಗೆ ಮತ್ತು ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿರುವುದು ಕೆಲವು ಕಡೆ ಕಂಡುಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಸಂಚಾಲಕ ಸುನೀಲ ಮಾರುತಿ ಮಾನಪಡೆ, ರೈತ ಮುಖಂಡರಾದ ಚಂದು ಜಾಧವ ಶಹಾಬಾದ್, ಶಾಂತಪ್ಪ ಪಾಟೀಲ್, ಉಮಾಪತಿ ಪಾಟೀಲ್, ಶೌಖತ ಅಲಿ ಆಲೂರ, ರೈತ ಸಂಸ್ಥೆಯ ಸೋಮಣ್ಣಗೌಡ ಪಾಟೀಲ್, ಮೈಲಾರಿ ದೊಡ್ಡಮನಿ ಅಫಜಲಪುರ, ಶಹಾಬುದ್ದೀನ್ ಪಟೇಲ್ ಜೇವರ್ಗಿ ಇತರರು ಇದ್ದರು.