ಕಲಬುರಗಿ | ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಿಂದ ʼಜೋಳ ಬೆಳೆಯ ಕ್ಷೇತ್ರೋತ್ಸವʼ
ಕಲಬುರಗಿ : ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಿಂದ ಆಳಂದ ತಾಲ್ಲೂಕಿನ ಸುಂಟನೂರ ಗ್ರಾಮದ ಪ್ರಗತಿಪರ ರೈತರಾದ ಬಾಬುರಾವ್ ಪಟ್ಟಣರವರ ಜಾಮೀನಿನಲ್ಲಿ ಜೋಳ ಬೆಳೆಯ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಬಿಕಾ ಹುಲಿಮನಿ ಮತ್ತು ಉಪಾಧ್ಯಕ್ಷೆ ಆಶಾದೇವಿರವರು ಉದ್ಘಾಟಿಸಿ, ಕೆವಿಕೆಯಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳು ಮತ್ತು ತಂತ್ರಜ್ಞಾನಗಳ ಸದುಪಯೋಗ ಪಡಿಸಿಕೊಳ್ಳಲು ರೈತರಿಗೆ ಕರೆ ನೀಡಿದರು.
ಮಣ್ಣು ವಿಜ್ಞಾನಿಯವರಾದ ಡಾ.ಶ್ರೀನಿವಾಸ ಬಿ.ವಿ. ಮಾತನಾಡಿ, ಜೋಳದಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ, ಮಣ್ಣು ಪರೀಕ್ಷೆ ಮಹತ್ವ ಕುರಿತು ಹಾಗೂ ಮುಂಗಾರು ಹಂಗಾಮಿನ ಕೃಷಿಗಾಗಿ ರೈತರು ಕೈಗೊಳ್ಳಬಹುದಾದ ವಿವಿಧ ಕೃಷಿ ಚಟುವಟಿಕೆಗಳ ಪೂರ್ವ ಸಿದ್ದತೆಗಳ ಕುರಿತು ವಿವರಿಸಿದರು.
ಸಮಾರಂಭದಲ್ಲಿ ಜೋಳದ ಬೆಳೆಯ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು. ಕಾರ್ಯಕ್ರಮವನ್ನು ಮೈರಾಡದ ಶರಣು ಪಾಟೀಲ್ ನಿರೂಪಿಸಿ, ವಂದಿಸಿದರು. ಸುಮಾರು 80 ಕ್ಕೂ ಹೆಚ್ಚು ರೈತ, ರೈತ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ವಿಜ್ಞಾನಿ ಡಾ.ಝಾಹೀರ್ ಅಹ್ಮದ್, ಬೇಸಾಯಶಾಸ್ತ್ರ ವಿಜ್ಞಾನಿ ಡಾ.ಯುಸುಫಲಿ ನಿಂಬರಗಿ ಸೇರಿದಂತೆ ಇತರರು ಇದ್ದರು.