ಕಲಬುರಗಿ | ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ ಪ್ರಕರಣ : ಆರೋಪಿಯ ಬಂಧನ
ಕೊಲೆ ಆರೋಪಿ ಸಮೀರ್, ಮೃತ ಎಂ.ಡಿ ಬಿಲಾಲ್ ಅಲಿಯಾಸ್ ಸುರೇಶ್ ರೆಡ್ಡಿ
ಕಲಬುರಗಿ: ಸಬ್ ಅರ್ಬನ್ ಪೊಲೀಸ್ ಠಾಣೆಯ ವ್ಯಾಪ್ತಿಯ ಮಿಲ್ಲತ್ ನಗರದಲ್ಲಿ ಶನಿವಾರ ರಾತ್ರಿ ವ್ಯಕ್ತಿಯೊರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು 24 ಗಂಟೆಗಳಲ್ಲೇ ಆರೋಪಿಯನ್ನು ಬಂಧಿಸಿದ್ದಾರೆ.
ಇಲ್ಲಿನ ಇಸ್ಲಾಮಾಬಾದ್ ಕಾಲೋನಿ ನಿವಾಸಿ ಸಮೀರ್ ಅಲಿಯಾಸ್ ಟಮಾಟ ಸಮೀರ್ ನಬಿಸಾಬ ಮುಲ್ಲಾ (25) ಬಂಧಿತ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಸಮೀರ್, ಶನಿವಾರ ರಾತ್ರಿ ಮಾಲಗತ್ತಿ ಕ್ರಾಸ್ ಅರಾಫತ್ ಕಾಲೋನಿಯ ನಿವಾಸಿ ಎಂ.ಡಿ ಬಿಲಾಲ್ ಅಲಿಯಾಸ್ ಸುರೇಶ್ ರೆಡ್ಡಿ ಎಂಬವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.
ಆರೋಪಿಯ ಬಂಧನಕ್ಕೆ ನಗರ ಪೊಲೀಸರು ಬಲೆ ಬೀಸಿದ್ದರು. ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿಯನ್ನು ಕೇವಲ 24 ಗಂಟೆಯಲ್ಲೇ ವಶಕ್ಕೆ ಪಡೆದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ ಅವರು ಶ್ಲಾಘಿಸಿದ್ದಾರೆ.