×
Ad

ಕಲಬುರಗಿ | ನೆರೆ ಹಾವಳಿ ಎದುರಿಸಲು ಸನ್ನದ್ಧರಾಗುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚನೆ

ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ

Update: 2025-08-25 19:31 IST

ಕಲಬುರಗಿ: ಇತ್ತೀಚೆಗೆ ಜಿಲ್ಲೆಯಾದ್ಯಂತ ಸುರಿದ ಸತತ ಮಳೆ ಮತ್ತು ಮುಂದಿನ ದಿನದಲ್ಲಿ ಸಂಭಾವ್ಯ ನೆರೆ ಹಾವಳಿ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಕಲಬುರಗಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನೆರೆ ಹಾವಳಿಯಿಂದ ಯಾವುದೇ ರೀತಿಯ ಜನ-ಜಾನುವಾರು ಪ್ರಾಣ ಹಾನಿಯಾಗದಂತೆ ಎಚ್ಚರ ವಹಿಸಬೇಕು. ಮಳೆಯಿಂದ ಮನೆ ಕುಸಿದು ಬಿದ್ದಲ್ಲಿ, ಭಾಗಶ: ಹಾನಿಯಾದಲ್ಲಿ ಎನ್.ಡಿ.ಆರ್.ಎಫ್./ ಎಸ್.ಡಿ.ಆರ್.ಎಫ್. ನಿಯಮಾವಳಿ ಪ್ರಕಾರ ತಕ್ಷಣವೇ ಪರಿಹಾರ ಒದಗಿಸಬೇಕು. ಯಾವುದೇ ವಿಳಂಬ ಸಲ್ಲದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಹಾಯಕ ಆಯುಕ್ತರು, ತಹಶೀಲ್ದಾರರು ಹಾಗೂ ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ನದಿ ದಂಡೆ ಪ್ರದೇಶದಲ್ಲಿ ನೆರೆ ಹಾವಳಿಗೆ ತುತ್ತಾಗುವ ಸಂಭಾವ್ಯ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಸಂಕಷ್ಟದ ಸಮಯದಲ್ಲಿ ಸರ್ಕಾರ ನಿಮ್ಮೊಂದಿಗೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಎಲ್ಲಾ ರೀತಿಯ ಸುರಕ್ಷತೆಯ ನೆರವು ಖಾತ್ರಿಪಡಿಸಬೇಕು. ಪ್ರವಾಹದಿಂದ ಆತಂಕದಲ್ಲಿರುವ ಸ್ಥಳಿಯ ನಿವಾಸಿಗಳಿಗೆ ಧೈರ್ಯ ತುಂಬಿ ಅವರ ಆತ್ಮ ವಿಶ್ವಾಸ ಹೆಚ್ಚಿಸಬೇಕು. ಪ್ರವಾಹ ಬಂದಲ್ಲೆ ಏನೆಲ್ಲ ಸುರಕ್ಷಾ ಕ್ರಮ ತೆಗೆದುಕೊಳ್ಳಬೇಕೆಂದು ಅವರಿಗೆ ಅರಿವು ಮೂಡಿಬೇಕೆಂದರು.

ತಾಲೂಕು ಮತ್ತು ಗ್ರಾಮ ಮಟ್ಟದ ಎಲ್ಲಾ ಹಂತದ ಅಧಿಕಾರಿ-ಸಿಬ್ಬಂದಿಗಳು ಕೇಂದ್ರಸ್ಥಾನದಲ್ಲಿದ್ದ ಪರಿಸ್ಥಿತಿ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರು ನದಿ, ಜಲಾಶಯ, ಕೆರೆ, ಕಟ್ಟೆಯತ್ತ ಬಟ್ಟೆ ಒಗೆಯಲು, ದನ-ಕರು ಮೇಯಿಸಲು ಹೋಗದಂತೆ ಗ್ರಾಮವಾರು ಡಂಗೂರ ಸಾರಬೇಕು. ವಿಶೇಷವಾಗಿ ಯುವ ಸಮುದಾಯ ಇಂತಹ ಸಂದರ್ಭದಲ್ಲಿ ಸೆಲ್ಫಿ, ನೀರಿನೊಂದಿಗೆ ಈಜುವಂತಹ ದುಸ್ಸಾಹಸಗಳಿಗೆ ಮುಂದಾಗುವುದನ್ನು ಪೊಲೀಸ್ ಇಲಾಖೆ ತಡೆಯಬೇಕು ಎಂದರು.

ಪ್ರವಾಹ ಸಂದರ್ಭದಲ್ಲಿ ಅಫಜಲಪೂರ ತಾಲೂಕಿನ ಧಾರ್ಮಿಕ ಸ್ಥಾನಗಳಾದ ದೇವಲ ಗಾಣಗಾಪೂರ ಮತ್ತು ಘತ್ತರಗಾಗೆ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಿಶೇಷ ಗಮನ ಹರಿಸಬೇಕು. ಸತತ ಮಳೆಯಾಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಕಾಟ ಹೆಚ್ಚಲಿದ್ದು, ಆರೋಗ್ಯ ಇಲಾಖೆ ಇದರ ನಿಯಂತ್ರಣಕ್ಕೆ ಮುಂದಾಗಬೇಕು. ಮಳೆಗಾಲ ಇರುವುದರಿಂದ ಕಲುಷಿತ ನೀರು ಸೇವನೆಯಿಂದಲೆ ಬಹಳಷ್ಟು ಸಮಸ್ಯೆ ಕಂಡುಬರುತ್ತವೆ. ಇದರ ನಿಯಂತ್ರಣಕ್ಕೆ ನೀರು ಪೂರೈಕೆಯ ಲ್ಯಾಬ್ ಟೆಸ್ಟ್ ಹೆಚ್ಚಿಸಬೇಕು. ಕಲಬುರಗಿ ಮಹಾನಗರ, ನಗರ-ಪಟ್ಟಣ ಪಂಚಾಯತಿ ಸೇರಿದಂತೆ ಹಳ್ಳಿಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದರು.

ಬೆಳೆ ಹಾನಿ ಸಮೀಕ್ಷಾ ವರದಿ ನಿಖರವಾಗಿರಲಿ :

ಪ್ರವಾಹ ಪೀಡಿತ ಪ್ರದೇಶದಲ್ಲಿ ಬೆಳೆ ಹಾನಿ ಕುರಿತು ಕಂದಾಯ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸಮೀಕ್ಷೆ ಕೈಗೊಳ್ಳುವ ಮುನ್ನ ಗ್ರಾಮದಲ್ಲಿ ಡಂಗೂರ ಸಾರಬೇಕು. ಹೆಚ್ಚಿನ ಪ್ರಚಾರ ನೀಡಿದಲ್ಲಿ ಮಾತ್ರ ರೈತರು ಪರಿಹಾರ ಪಡೆಯಲು ಸಾಧ್ಯವಾಗಲಿದೆ. ಬೆಳೆ ಹಾನಿ ವರದಿ ಕಾಟಾಚಾರವಾಗಿರದೆ ನಿಖರವಾಗಿರಬೇಕು ಎಂದ ಸಚಿವ ಪ್ರಿಯಾಂಕ್ ಖರ್ಗೆ ಅವರು ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತ್ ಇ.ಓ. ಗಳು ಇದರ ಸಂಪೂರ್ಣ ಹೊಣೆಗಾರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಇದುವರೆಗಿನ ಮಳೆಯಿಂದಾದ ಬೆಳೆ, ರಸ್ತೆ, ಮನೆ ಹಾನಿ ಕುರಿತು ವಿವರಿಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಇರುವ ಜಲಾಶಯಗಳಲ್ಲಿ ಶೇ.60 ರಿಂದ 85ರಷ್ಟು ಭರ್ತಿಯಾಗಿದ್ದು, ಪ್ರತಿ ದಿನ ಇದರ ಒಳ ಹರಿವು ಮತ್ತು ಹೊರ ಹರಿವಿನ ಮೇಲೆ ನಿಗಾ ಇರಿಸಲಾಗಿದೆ. 67 ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು, 51 ಕೆರೆಗಳು ಶೇ.90ರಷ್ಟು ಭರ್ತಿಯಾಗಿವೆ. ಜಿಲ್ಲೆಯಾದ್ಯಂತ ಪ್ರವಾಹಕ್ಕೆ ತುತ್ತಾಗುವ 153 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿದ್ದು, ಪ್ರವಾಹ ಬಂದಲ್ಲಿ ಸ್ಥಳೀಯರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು 90 ಕಾಳಜಿ ಕೇಂದ್ರ ಸಹ ಗುರುತಿಸಿದೆ. ಅದೇ ರಿತಿ ಜಾನುವಾರುಗಳಿಗೆ ತಾತ್ಕಲಿಕ 40 ಗೋಶಾಲೆ ತೆರೆಯಲು ಸಹ ಯೋಜನೆ ರೂಪಿಸಲಾಗಿದೆ. ಇನ್ನು ಗ್ರಾಮವಾರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿಸಿ ನೇಮಿಸಿ ನೆರೆ ಹಾವಳಿ ಕಾರ್ಯಕ್ಕೆ ತಾಲೂಕಾಡಳಿತದೊಂದಿಗೆ ಸಮನ್ವಯ ಸಾಧಿಸಲು ಸೂಚಿಸಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕಲಬುರಗಿ ನಗರ ಪೊಳಸ್ ಆಯುಕ್ತ ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ನೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಲೋಕೋಪಯೋಗಿ ಇಲಾಖೆಯ ಇ.ಇ. ಸುಭಾಷ ಬಿರಾದಾರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ ದೌಲಾ, ಸಹಾಯಕ ಆಯುಕ್ತರಾದ ಸಾಹಿತ್ಯ, ಪ್ರಭುರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತ್ ಇ.ಓ.ಗಳು ಭಾಗವಹಿಸಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News