ಕಲಬುರಗಿ | 10 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಬಸವರಾಜ್ ಮತ್ತಿಮಡು ಚಾಲನೆ
ಕಲಬುರಗಿ: ಸತತವಾಗಿ ಎರಡನೇ ಬಾರಿಗೆ ನನಗೆ ಕ್ಷೇತ್ರದಲ್ಲಿ ಸೇವೆ ಮಾಡಲು ಅವಕಾಶ ನೀಡಿದ ಕ್ಷೇತ್ರದ ಜನರ ಆಶೀರ್ವಾದ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿನ ಯಾವುದೇ ಸಮಸ್ಯೆಯಿರಲಿ ನಿಮ್ಮ ಸೇವೆಗಾಗಿ ನಾನು ಸದಾ ಸಿದ್ಧ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ತಿಳಿಸಿದರು.
ಅವರು ಸೋಮವಾರ ಕಲಬುರಗಿ ಗ್ರಾಮೀಣ ಕ್ಷೇತ್ರದ ನಂದೂರ ಬಿ ಗ್ರಾಮದಿಂದ ಬಾಪುನಾಯಕ್ ತಾಂಡಾವರೆಗಿನ 10 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ, ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರ ಅವಧಿಯಲ್ಲಿ ಈ ರಸ್ತೆ ಮಾಡಬೇಕಾಗಿತ್ತು. ಆದರೆ, ಇದೀಗ ರಸ್ತೆ ಅಪ್ಗ್ರೇಡ್ ಮಾಡಿ ರಾಜ್ಯ ಹೆದ್ದಾರಿಗೆ ಸೇರಿಸಿ 10 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಮೀಪವಾದ ರಸ್ತೆ ಇದಾಗಿದ್ದು, ನಂದೂರದಿಂದ ಬಾಪುನಾಯಕ್ ತಾಂಡಾ, ಜಾಪುರ, ಪಾಳಾ, ಸರಡಗಿವರೆಗಿನ ರಸ್ತೆಗಾಗಿ 15 ರಿಂದ 20 ಕೋಟಿ ರೂ. ಅನುದಾನದ ಅವಶ್ಯಕತೆಯಿದ್ದು, ಮುಂದಿನ ದಿನಗಳಲ್ಲಿ ಅದನ್ನು ಸಹ ಪೂರ್ಣಗೊಳಿಸಲಾಗುವುದು. ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ನಡೆದಿದೆ. ಆದರೆ, ದೊಡ್ಡ ಮೊತ್ತದ ರಸ್ತೆ ಕಾಮಗಾರಿ ಅಂದ್ರೆ, ಅದು ಬಾಬಾನಾಯಕ್ ತಾಂಡಾದ 10 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಂದೂರ ಬಿ. ಗ್ರಾಮದ ಗಂಗಾಧರ ಹಿರೇಮಠ ಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷ ಗಂಗಪ್ಪಗೌಡ ಪಾಟೀಲ್ ಬೋಧನ್, ವಿನೋದ್ ಪಾಟೀಲ್ ಸರಡಗಿ, ರಾಜಕುಮಾರ್ ಚೌಹಾಣ್ (ಆರ್ಎಂಸಿ), ರೇಣುಕಾ ರಾಠೋಡ್,ಮಹಾಂತಗೌಡ ಪಾಟೀಲ್, ಶಾಂತಕುಮಾರ್ ಪಾಟೀಲ್, ನಾಗರಾಜ್ ಕಲ್ಲಾ, ರೇವಣಸಿದ್ದ ಸ್ವಾಮಿ, ಶಿವಕುಮಾರ್ ಗುತ್ತೇದಾರ್, ಮಲ್ಲಿಕಾರ್ಜುನ ಸಾವಕಾರ್,ಶಾಂತಪ್ಪ ಪೂಜಾರಿ, ಶಿವಮೂರ್ತಿ ಸಣ್ಣೂರ, ಅರುಣಕುಮಾರ ಪಾಟೀಲ್, ಅಶೋಕ್ ಬಬಲಾದ, ಶಂಕರ್ ಜಾಧವ್,ಮುನ್ನಾಗೌಡ ಪಾಟೀಲ್,ಅರುಣ ರಾಠೋಡ ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಹಲವರು ಇದ್ದರು.
ಕೂಸನೂರದಿಂದ ಜಾಪುರವರೆಗೆ ರಸ್ತೆಯ ಬೇಡಿಕೆ ಬಂದಿದೆ. ಆದಷ್ಟೂ ಬೇಗ ಅದಕ್ಕೂ ಗುದ್ದುಲಿ ಪೂಜೆ ನೆರವೇರಿಸಲಾಗುವುದು. ನಂದೂರ ಗ್ರಾಮದಿಂದ ಕುಸನೂರ ರಸ್ತೆಗಾಗಿ 5 ಕೋಟಿ ರೂ. ನೀಡಿದ್ದೇನೆ. ನಂದೂರದಿಂದ ಕೂಸನೂರ ತಾಂಡಾದ ರಸ್ತೆಗೂ 5 ಕೋಟಿ ರೂ. ನೀಡಲಾಗುವುದು. ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದೆ.
-ಬಸವರಾಜ ಮತ್ತಿಮಡು, ಶಾಸಕ