ಕಲಬುರಗಿ | 11 ವರ್ಷದಲ್ಲಿ ಮೋದಿ 11 ಮಹಾ ದೊಡ್ಡ ಸುಳ್ಳುಗಳು ಹೇಳಿದ್ದಾರೆ : ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ
ಕಲಬುರಗಿ : ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ 11 ಮಹಾ ದೊಡ್ಡ ಸುಳ್ಳುಗಳನ್ನು ಹೇಳಿಕೊಂಡೆ ಸುತ್ತಾಡುತ್ತಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಡಿಯಲ್ಲಿ 1 ಸಾವಿರ ಕೋಟಿ ವೆಚ್ಚದಲ್ಲಿ 1,166 ಕಿಮೀ ಉದ್ದದ ರಸ್ತೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಅವರು ಮಾತನಾಡಿದರು.
ಮೋದಿ ಜೀವನದಲ್ಲಿ ಎಷ್ಟು ಸುಳ್ಳುಗಳಾಡಬೇಕು?, ಪ್ರಧಾನಿ ಆಗುವ ಮುಂಚೆಯೂ ಮತ್ತು ಆಗಿದಾಗಿನಿಂದಲೂ ಸುಳ್ಳುಗಳನ್ನೇ ಹೇಳುತ್ತಾ ಬಂದಿದ್ದಾರೆ ಎಂದು ವಿವರಿಸುತ್ತಾ ಮೋದಿ ಹೇಳಿದ 11 ಸುಳ್ಳುಗಳನ್ನು ಪಟ್ಟಿ ಮಾಡಿ ಪ್ರಶ್ನಿಸಿದ್ದಾರೆ.
1. ಹೊರಗಿನಿಂದ ಕಪ್ಪು ಹಣ ತಂದು ಎಲ್ಲರ ಜೇಬಿನಲ್ಲಿ 15 ಲಕ್ಷ ರೂ. ಹಾಕುತ್ತೇನೆಂದು ಹೇಳಿರುವುದು ಈಗ ಏನಾಯ್ತು?
2. ಪ್ರತಿವರ್ಷ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದಿದ್ದ ಮೋದಿ ಈಗ ಯಾಕೆ ಉದ್ಯೋಗದ ಹೆಸರೇ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು. ಇಷ್ಟಾದರೂ ದೇಶದಲ್ಲಿ ಯುವಕರು ಯಾಕೆ ಅವರಿಗೇನೆ ಬೆಂಬಲ ಕೊಡುತ್ತಾರೆ ಗೊತ್ತಿಲ್ಲ. ಇಲ್ಲಿ ಅವರು ಧರ್ಮ ನೋಡ್ತಾರೋ, ಜಾತಿ ನೋಡ್ತಾರೋ ನನಗದು ಅರ್ಥ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
3. ಮೋದಿ ಪೆಟ್ರೋಲ್ ಡೀಸೆಲ್ ದರ ಕಡಿಮೆ ಮಾಡುತ್ತೇನೆ ಎಂದಿದ್ದರು. ಇದೀಗ ಯುಪಿಎ ಅಧಿಕಾರದಲ್ಲಿದ್ದಾಗಿನಿಂದಲೂ 50 ಪರ್ಸಂಟೇಜ್ ಹೆಚ್ಚಿಗೆ ಮಾಡಿದ್ದಾರೆ. ಹಿಂದೆ ಭರವಸೆ ನೀಡಿದ್ದು ಈಗೇನಾಯ್ತು? ಎಂದು ಪ್ರಶ್ನಿಸಿದ್ದಾರೆ.
4. 2022ರಲ್ಲಿ ಗಂಗಾ ನದಿ ಬಹಳ ಕ್ಲೀನ್ ಮಾಡುತ್ತೇನೆ, ಕುಡಿಯಲು ಯೋಗ್ಯವಾಗುತ್ತೆ ಎಂದಿದ್ದರು. ನದಿಯ ಸ್ವಚ್ಛತೆ ಈಗೇನಾಗಿದೆ? ಎಂದು ಖರ್ಗೆ ಪ್ರಶ್ನೆ ಎತ್ತಿದ್ದಾರೆ.
5. ಮೆಕ್ ಇನ್ ಇಂಡಿಯಾ 2022 ರಲ್ಲಿ 10 ಕೋಟಿ ಹೊಸ ಮ್ಯಾನುಫ್ಯಾಕ್ಚರಿಂಗ್ ನೌಕರಿ ಕೊಡಲಿಲ್ಲ. ಇದನ್ನ ಪ್ರಶ್ನಿಸದೆ ಇರುವ ಯುವಕರು ಏನು ಮಾಡುತ್ತಿದ್ದಾರೆ ಅರ್ಥವಾಗುತ್ತಿಲ್ಲ ಎಂದರು.
6. 2022 ರಲ್ಲಿ ಭಾರತೀಯರಿಗೆ ಪಕ್ಕಾ ಮನೆ ಮಾಡುತ್ತೇನೆ ಎಂದರು. ಆ ಪಕ್ಕಾ ಮನೆ ಈಗ ಅರ್ಧನೂ ಆಗಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
7. ರೈತರ ಆದಾಯ ಡಬಲ್ ಮಾಡುತ್ತಾ ಅಂದಿದ್ರು. ಯಾರಿಗದ್ರು ಆಗಿದೆಯಾ? ಎಂದು ಜನರತ್ತ ಪ್ರಶ್ನೆ ಕೇಳಿದರು.
8. ನೋಟ್ ಬಂದಿ ಮಾಡಿ ಮಿತ್ರೋ 50 ದಿನ ಸಮಯ ಕೊಡಿ ಮಾಡದಿದ್ದರೆ ಎಲ್ಲಿ ನಿಂತರೂ ಶಿಕ್ಷೆ ಕೊಡಿ ಎಂದರು. ಈಗೆನಾಯ್ತು?
9. ಅಹಮದಬಾದ್ ನಿಂದ ಮುಂಬೈವರೆಗೆ 2022 ರಲ್ಲಿ ಬುಲೆಟ್ ಟ್ರೈನ್ ಪ್ರಾರಂಭಿಸುವುದಾಗಿ ಹೇಳಿದರು, ಆಯ್ತಾ ?
10. ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಯಾರಿಗೂ ಲಾಭ ಆಗಲಿಲ್ಲ
11. ಶ್ರೀಮಂತರು ಓಡಿ ಹೋಗಿದ್ದಾರೆ ಅವರಿಗೆ ತಂದು ಜೈಲಿಗೆ ತಂದು ಹಾಕುವುದಾಗಿ ಹೇಳಿದ್ದರು. ಈಗ ಅದನ್ನ ಮೋದಿ ಅವರು ಮಾಡಿದ್ದಾರ ? ಎಂದು ಪ್ರಶ್ನಿಸಿದರು.
ಕೇಂದ್ರ ಸರಕಾರದಿಂದ ನಮ್ಮ ರಾಜ್ಯಕ್ಕೆ ಬರಬೇಕಿದ್ದ ಹಣ ಬರುತ್ತಿಲ್ಲ. ಅದರಲ್ಲಿ ಮನರೇಗಾ ಯೋಜನೆಯಲ್ಲಿ ಬರುವ ಹಣ ಬರುತ್ತಿಲ್ಲ. 4 ಪರ್ಸಂಟೇಜ್ ಜನರಿಗೆ ಮಾತ್ರ 100 ದಿನಗಳ ಕೆಲಸ ಸಿಗುತ್ತಿದೆ. ಉಳಿದವರಿಗೆ ಉದ್ಯೋಗವೇ ಸಿಗುತ್ತಿಲ್ಲ. ಯಾವ ಯೋಜನೆ ಮಹಾತ್ಮ ಗಾಂಧಿ ಯೋಜನೆಯ ಹೆಸರಿನಲ್ಲಿ ಯೋಜನೆಯಿದೆ ಆ ಯೋಜನೆ ಪ್ರತಿಯೊಬ್ಬರಿಗೂ ಮುಟ್ಟಬೇಕು, ಅದನ್ನ ಸಾಕಾರಗೊಳಿಸುವಲ್ಲಿ ಮೋದಿ ಹೆಜ್ಜೆ ಇಡುತ್ತಿಲ್ಲ ಎಂದು ಕಿಡಿಕಾರಿದರು.
ನ್ಯಾಶನಲ್ ಹೈವೆ, ರೈಲ್ವೆ ಅಭಿವೃದ್ಧಿ, ರೈಲ್ವೆ ಬೋಗಿ ಮತ್ತಿತರ ಘೋಷಿಸಿದ್ದಾರೆ, ಅವ್ಯವವು ಆಗಿಲ್ಲ ಎಂದ ಅವರು, ನಾನು ಕೈಲಾದಷ್ಟು ಕೆಲಸ ಮಾಡುತ್ತೇನೆಂದು ನಿಜ ಹೇಳಿಕೊಂಡು 11 ಎಲೆಕ್ಷನ್ ಗೆದ್ದಿದ್ದೇನೆ, ಮೋದಿಯಂತೆ ಸುಳ್ಳುಗಳನ್ನು ಹೇಳುವುದಿಲ್ಲ. ನಾನು ನಿಜ ಹೇಳಿಕೊಂಡು ಬಂದಿದ್ದಕ್ಕೆ ಇಂದು ಜನರು ನನ್ನನ್ನು ಎಐಸಿಸಿ ಅಧ್ಯಕ್ಷನ ಹುದ್ದೆಯತ್ತ ಕರೆದುಕೊಂಡು ಹೋಗಿದ್ದಾರೆ. ಕಾರಣಕರ್ತರಾದ ಕಲಬುರಗಿ ಜನರಿಗೆ ನಾನು ಎಂದಿಗೂ ಚಿರಋಣಿ ಎಂದರು.