ಕಲಬುರಗಿ | ಸರಸ್ ಮೇಳಕ್ಕೆ ಈವರೆಗೆ 1 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ : ಭಂವರ್ ಸಿಂಗ್ ಮೀನಾ
ಕಲಬುರಗಿ : ನಗರದ ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ನಡೆಯುತ್ತಿರುವ ರಾಷ್ಟ್ರಮಟ್ಟದ ಬೃಹತ್ ನಮ್ಮ ಸರಸ್ ಮೇಳ-2025ಕ್ಕೆ ಜಿಲ್ಲೆಯ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೂವರೆಗೆ 1 ಲಕ್ಷಕ್ಕಿಂತ ಹೆಚ್ಚಿನ ಜನ ಭೇಟಿ ನೀಡಿದ್ದು, ಸುಮಾರು 1 ಕೋಟಿ ರೂ. ವಹಿವಾಟು ದಾಟುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಹೇಳಿದರು.
ಶನಿವಾರ ಸರಸ್ ಮೇಳೆ ನಡೆಯುತ್ತಿರುವ ಶ್ರೀ ಶಣಬಸವೇಶ್ವರ ಜಾತ್ರೆ ಮೈದಾನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದು, ಅಕ್ಕ ಕೆಫೆ ಪುಡ್ ಸ್ಟಾಲ್ ವ್ಯಾಪಾರ ಜೋರಾಗಿದೆ. ಒಟ್ಟಾರೆ 36.08 ಲಕ್ಷ ರೂ. ವಹಿವಾಟಿನಲ್ಲಿ ರಾಜ್ಯದ ಮಳಿಗೆಯಲ್ಲಿ ಸುಮಾರು 23 ಲಕ್ಷ ರೂ. ವಹಿವಾಟು ಕಂಡು ಬಂದಿದೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ, ಬಿಹಾರ ರಾಜ್ಯಗಳ ಮಳಿಗೆಗಳು ಸೇರಿವೆ ಎಂದರು.
ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಒಂದು ಬೃಹತ್ ವೇದಿಕೆಯನ್ನು ಇಲ್ಲಿ ಕಲ್ಪಿಸಿದ್ದು, ಪ್ರತಿದಿನ ಬೆಳಗ್ಗೆ 10.30 ರಿಂದ ರಾತ್ರಿ 9.30 ಗಂಟೆ ವರೆಗೆ ಮಳಿಗೆಗಳು ತೆರೆಯಲಿವೆ. ಹಿಂದೆ ಬೆಂಗಳೂರು, ಬೆಳಗಾವಿಯಲ್ಲಿ ಈ ಸರಸ್ ಮೇಳ ಆಯೋಜನೆ ಮಾಡಿದ್ದು, ಇದೇ ಪ್ರಥಮ ಬಾರಿಗೆ ಕಲಬುರಗಿಯಲ್ಲಿ ಆಯೋಜಿಸಿದೆ ಎಂದರು.
ಕಲಬುರಗಿ ಜನತೆಗೆ ವಿವಿಧ ರಾಜ್ಯಗಳ ವೈವಿದ್ಯಮಯ ವಸ್ತುಗಳ ಖರೀದಿಗೆ ಅಪೂರ್ವ ಅವಕಾಶ ಇದಾಗಿದೆ. ಫೆ.5ರವರೆಗೆ ಮೇಳ ನಡೆಯಲಿದ್ದು, ಜಿಲ್ಲೆಯ ಜನ ಇದರ ಲಾಭ ಪಡೆಯಬೇಕು. ಸ್ವ-ಸಹಾಯ ಗುಂಪುಗಳು ತಯಾರಿಸಿರುವ ವಿವಿಧ ವಸ್ತುಗಳ ಖರೀದಿಸುವ ಮೂಲಕ ಅವರ ಸ್ವಯಂ ಉದ್ಯೋಗ ಕಾರ್ಯಕ್ಕೆ ಬೆಂಬಲಿಸಬೇಕೆಂದು ಸಿ.ಇ.ಓ ಭಂವರ್ ಸಿಂಗ್ ಮನವಿ ಮಾಡಿದರು.
ಒಂದೇ ಸೂರಿನಡಿ 230 ಮಳಿಗೆಗಳು :
20 ಲೈವ್ ಫುಡ್ ಸ್ಟಾಲ್ ಅಲ್ಲದೆ ನಮ್ಮ ಸರಸ್ ಮೇಳದಲ್ಲಿ ಒಂದೇ ಸೂರಿನಡಿ 230 ಮಳಿಗೆಗಳಿವೆ. ಪ್ರಮುಖವಾಗಿ ಬಿದರಿ ಕಲೆ, ಚನ್ನಪಟ್ಟಣ ಗೊಂಬೆ, ಕಿನ್ನಾಳ ಆಟಿಕೆ, ಇಳಕಲ್ ಸೀರೆ, ಮೈಸೂರು ಇನ್ಲೇ, ಚಿಕ್ಕಬಳ್ಳಾಪುರ ಲೆದರ್ ಪಪ್ಪೆಟ್, ಲಂಬಾಣಿ ಕುಸುರಿ ಕಲೆ, ಖಾದಿ ಬಟ್ಟೆಗಳು, ಮಲೆನಾಡಿನ ಉಪ್ಪಿನಕಾಯಿ, ಹ್ಯಾಂಡ್ ಲೂಮ್ ಸೀರೆಗಳು, ಟೆರಿಕೋಟ್ ಆಭರಣಗಳು, ಹೋಂ ಮೇಡ್ ಸೌಂದರ್ಯ ವರ್ಧಕಗಳು, ಹರ್ಬಲ್ ಸೋಪ್ ಗಳು, ಸ್ಯಾನಿಟರಿ ನ್ಯಾಪ್ಕಿನ್ಸ್, ಸೆಣಬಿನ ಬ್ಯಾಗ್ ಗಳು ಹೀಗೆ 30 ಜಿಲ್ಲೆಯ 200ಕ್ಕೂ ಹೆಚ್ಚು ಮಳಿಗೆಗಳಿವೆ.
ಇನ್ನೂ 10 ಹೊರ ರಾಜ್ಯಗಳಿಂದ ಆಗಮಿಸಿರುವ ಮಹಿಳಾ ಸ್ವ-ಸಹಾಯ ಗುಂಪುಗಳು ಇಲ್ಲಿ ಮಳಿಗೆ ತೆರೆದಿದ್ದು, ಪಂಜಾಬಿನ ಹ್ಯಾಂಡ್ ಮೇಡ್ ಬಳೆಗಳು, ಆಂಧ್ರಪ್ರದೇಶ ಲೆದರ್ ಪಪ್ಪೆಟ್ಸ್, ಮಣಿಪುರದ ಹ್ಯಾಂಡ್ ಲೂಮ್ ಸೀರೆಗಳು, ಕೇರಳದ ಹರ್ಬಲ್ ಸೋಪ್ ಗಳು, ಸಿರಿಧಾನ್ಯಗಳ ಉತ್ಪನ್ನಗಳು, ಕಾಫಿಪುಡಿ, ತಮಿಳುನಾಡಿನ ಬ್ಯಾಗ್ ಗಳು, ಬಿಹಾರಿ ಹ್ಯಾಂಡ್ ಲೂಮ್ಸ್, ರಾಜಸ್ಥಾನಿ ಉಡುಪುಗಳು, ಮಧ್ಯಪ್ರದೇಶದ ಕುರ್ತೀಸ್ ಮುಂತಾದವುಗಳು ಸರಸ್ ಮೇಳದ ಪ್ರಮುಖ ಆಕರ್ಷಣೆಯಾಗಿವೆ.
ರಾಜ್ಯ ಹಾಗೂ ಹೊರ ರಾಜ್ಯಗಳ ಸಾಂಪ್ರದಾಯಿಕ ತಿನಿಸುಗಳನ್ನು ಉಣ ಬಡಿಸಲು 20 ಲೈವ್ ಫುಡ್ ಸ್ಟಾಲ್ ಗಳಿವೆ. ಇಲ್ಲಿ ಪ್ರಮುಖವಾಗಿ ಮಂಗಳೂರು ಗೋಳಿ ಬಜೆ, ಬನ್ಸ್, ಬಂಗಾರಪೇಟೆ ಚಾಟ್ಸ್, ಗದಗ ಗಿರ್ಮಿಟ್, ಮಿರ್ಚಿ ಬಜ್ಜಿ, ಬೆಂಗಳೂರು ವೆರೈಟಿ ದೋಸೆ, ಚಿಕ್ಕಮಗಳೂರು ಫಿಲ್ಟರ್ ಕಾಫಿ, ಮದ್ದೂರು ವಡೆ ಹಾಗೂ ನೆರೆಯ ರಾಜ್ಯಗಳ ಪ್ರಮುಖ ತಿನಿಸುಗಳಾದ ಹೈದರಾಬಾದ್ ಧಮ್ ಬಿರಿಯಾನಿ, ಆಂಧ್ರಪ್ರದೇಶದ ಪುಲಿಯಾರಾ, ಕೇರಳದ ಪ್ರೆಶ್ ಫ್ರೂಟ್ ಜ್ಯೂಸ್, ಮಹಾರಾಷ್ಟ್ರ ವಡಾಪಾವ್, ತಾಲಿಪಟ್, ಪುದುಚೆರಿ ಮೊಳಗ ಭಜಿ, ಸ್ವೀಟ್ ಬೋಂಡ, ಫಿಶ್ ಥಾಲಿ, ಫಿಶ್ ತವಾ ಫ್ರೈ ಇತ್ಯಾದಿ ತಿನಿಸುಗಳು ಲಭ್ಯವಿದೆ ಎಂದರು.
ಮಹಿಳೆಯರನ್ನು ಆದಾಯೋತ್ಪನ್ನ ಚಟುವಟಿಕೆಯಲ್ಲಿ ತೊಡಗಿಸುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರಲೆಂದೆ ನಗರ ಮತ್ತು ಗ್ರಾಮೀಣ ಮಹಿಳೆಯರಿಗಾಗಿಯೇ ಸರ್ಕಾರ ಎನ್.ಆರ್.ಎಲ್.ಎಮ್ ಮತ್ತು ಎನ್.ಯು.ಎಲ್.ಎಮ್ ಕಾರ್ಯಕ್ರಮ ರೂಪಿಸಿದ್ದು, ಜಿಲ್ಲೆಯಲ್ಲಿ 4,046 ಸ್ವ-ಸಹಾಯ ಗುಂಪುಗಳಿಗೆ 55.91 ಕೋಟಿ ರೂ. ಸಮುದಾಯ ಬಂಡವಾಳ ನಿಧಿ ಯೋಜನೆಯಡಿ ಸಾಲ ನೀಡಲಾಗಿದೆ. ಇನ್ನು 1,027 ಗುಂಪುಗಳಿಗೆ 164.80 ಲಕ್ಷ ರೂ. ರಿವಾಲ್ವಿಂಗ್ ಫಂಡ್ ಬಿಡುಗಡೆ ಮಾಡಲಾಗಿದೆ ಎಂದರು.
ಮಹಿಳೆಯರಿಗೆ ಮಾಹಿತಿ ಕಾರ್ಯಾಗಾರ :
ಪ್ರತಿ ದಿನ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಅದಾಯೋತ್ಪನ್ನ ಹೆಚ್ಚಿಸಲು ಮತ್ತು ಸ್ವಯಂ ಉದ್ಯೋಗಕ್ಕೆ ಪೂರಕವಾಗಿ ಬೆಳಿಗ್ಗೆ 11 ಗಂಟೆಯಿಂದ ವಿವಿಧ ಉದ್ಯಮಶೀಲತೆಯ ಉಪಯುಕ್ತ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಕಳೆದ ಐದು ದಿನಗಳಲ್ಲಿ ಪ್ಯಾಕೇಜಿಂಗ್, ಮಾರುಕಟ್ಟೆ ಕೌಶಲ್ಯ, ಬ್ಯಾಂಕ್ ಲಿಂಕೇಜ್, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕುರಿತು, ಜಿ.ಎಸ್.ಟಿ ಮತ್ತು ಉದ್ಯಮ ನೋಂದಣಿ, ಮಾರ್ಕೆಟಿಂಗ್ ರಿಜಿಸ್ಟ್ರೇಷನ್, ಮಾರ್ಕೆಟಿಂಗ್ ಅವಕಾಶಗಳ ಕುರಿತು ಕಾರ್ಯಾಗಾರಗಳು ಯಶಸ್ವಿಯಾಗಿ ನಡೆದಿವೆ. ಇನ್ನು ಮುಂದಿನ ನಾಲ್ಕು ದಿನಗಳಲ್ಲಿಯೂ ಸಹ ಈ ರೀತಿಯ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಾಗಾರಗಳು ನುರಿತ ತಜ್ಞರಿಂದ ನಡೆಯಲಿವೆ ಎಂದು ಭಂವರ್ ಸಿಂಗ್ ಮೀನಾ ತಿಳಿಸಿದರು.
ಮಾ.2 ರಿಂದ ವಾಸುಕಿ ವೈಭವ ತಂಡದಿಂದ ರಸ ಸಂಜೆ :
ವಸ್ತುಗಳ ಖರೀದಿಗೆ ಬರುವ ಸಾರ್ವಜನಿಕರ ಮನ ತಣಿಸಲೆಂದೆ ಪ್ರತೀ ದಿನ ಮುಸ್ಸಂಜೆ ವೇಳೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಖ್ಯಾತ ಕಲಾವಿದರಿಂದ ಮತ್ತು ಸ್ಥಳೀಯ ಕಲಾವಿದರಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಇಂದು ಸಂಜೆ ಖ್ಯಾತ ಗಾಯಕ ಕಲ್ಯಾಣ್ ಮಂಜುನಾಥ್ ರವರ ಕಾರ್ಯಕ್ರಮ ಹಾಗೂ ನಾಳೆ ಮಾ.2ರಂದು ಖ್ಯಾತ ಸಂಗೀತ ಸಂಯೋಜಕ ಹಾಗೂ ಗಾಯಕರಾದ ವಾಸುಕಿ ವೈಭವ್ ತಂಡದಿಂದ ಸಂಗೀತ ರಸಸಂಜೆ ನಡೆಯಲಿದ್ದು, ಕಲಾ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮುನಾವರ ದೌಲಾ, ಎನ್.ಆರ್.ಎಲ್.ಎಂ.ಚೀಫ್ ಅಪರೇಟಿಂಗ್ ಆಫೀಸರ್ (ಸ್ಕಿಲ್) ಅನಿತಾಲಕ್ಷ್ಮೀ ಇದ್ದರು.