ಕಲಬುರಗಿ | ಚಿತ್ತಾಪುರದಲ್ಲಿ ಅಳವಡಿಸಿದ್ದ ಭಗವಾಧ್ವಜ ತೆರವುಗೊಳಿಸಿದ ಪುರಸಭೆ ಅಧಿಕಾರಿಗಳು
Update: 2025-10-18 11:31 IST
ಕಲಬುರಗಿ: ಚಿತ್ತಾಪುರದಲ್ಲಿ ರವಿವಾರದಂದು ನಡೆಯುವ ಆರೆಸ್ಸೆಸ್ ಪಥಸಂಚಲನ ನಿಮಿತ್ತ ಹಲವೆಡೆ ಅಳವಡಿಸಲಾಗಿದ್ದ ಆರೆಸ್ಸೆಸ್ ಬ್ಯಾನರ್ ಹಾಗೂ ಭಗವಾ ಧ್ವಜಗಳನ್ನು ಅಧಿಕಾರಿಗಳು ತಡರಾತ್ರಿ ತೆರವು ಮಾಡಿದ್ದಾರೆ.
ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ತಡರಾತ್ರಿ ಪುರಸಭೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಭಗವಾ ಧ್ವಜಗಳು ಹಾಗೂ ಬ್ಯಾನರ್ ಗಳನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸರ್ಕಾರಿ ಜಾಗಗಳು, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘ-ಸಂಸ್ಥೆಗಳ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಕಡ್ಡಾಯ ಎಂದು ಇತ್ತೀಚೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.
ಸ್ಥಳೀಯ ಆಡಳಿತ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ಈ ಕುರಿತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕೂಡ ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.