×
Ad

ಕಲಬುರಗಿ | ಕರ್ತವ್ಯ ಲೋಪ : ಮೂವರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲು

Update: 2025-03-27 12:19 IST

ಕಲಬುರಗಿ : ವೈದ್ಯಕೀಯ ತಪಾಸಣೆಗೆ ಕರೆ ತಂದಿದ್ದ ಆರೋಪಿ ಜಿಮ್ಸ್ ಕಟ್ಟಡದಿಂದ ಜಿಗಿದು ಮೃತಪಟ್ಟಿದ್ದ ಪ್ರಕರಣದಲ್ಲಿ ಪೊಲೀಸರು ಕರ್ತವ್ಯ ನಿರ್ಲಕ್ಷ್ಯ ತೋರಿದ್ದು ಸಿಐಡಿ ತನಿಖೆಯಿಂದ ದೃಢಪಟ್ಟಿದ್ದರಿಂದ ಎಎಸ್ಐ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬ್ರಹ್ಮಪುರ ಪೊಲೀಸ್ ಠಾಣೆಯ ಎಎಸ್ಐ ಅಬ್ದುಲ್ ಖಾದರ್ (54), ಕಾನ್ ಸ್ಟೆಬಲ್ ಗಳಾದ ಹುಣಚಪ್ಪ ಮಲ್ಲಪ್ಪ (56) ಹಾಗೂ ಕುಮಾರ ರಾಠೋಡ (22) ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ : ಆರೋಪಿ ಸೋಹೇಬ್ (20) ರನ್ನು ಬ್ರಹ್ಮಪುರ ಠಾಣೆಯ ಪೊಲೀಸರು 2022ರ ಆ.8ರಂದು ವಶಕ್ಕೆ ಪಡೆದಿದ್ದರು. ನ್ಯಾಯಾಲಯದ ಮುಂದೆ ಹಾಜರಿಪಡಿಸಲು ಆರೋಪಿಯನ್ನು ವೈದ್ಯಕೀಯ ತಪಾಸಣೆಗಾಗಿ ಜಿಮ್ಸ್ಗೆ ಕರೆದೊಯ್ದಿದ್ದರು.

ಕೋವಿಡ್ ಸೋಂಕು ಪರೀಕ್ಷೆ, ವೈದ್ಯಕೀಯ ತಪಾಸಣೆಗಾಗಿ ಆರೋಪಿಯ ಕೈಕೋಳವನ್ನು ಬಿಚ್ಚಿದ್ದರು. ಪೊಲೀಸರ ವಶದಿಂದ ತಪ್ಪಿಸಿಕೊಂಡು ಓಡಿ ಹೋದ ಆರೋಪಿ, ಜಿಮ್ಸ್ ಆಸ್ಪತ್ರೆಯ 3ನೇ ಮಹಡಿಯಿಂದ ಕೆಳಗೆ ಜಿಗಿದು ಮೃತಪಟ್ಟಿದ್ದ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು.

ಸಿಐಡಿ ಅಧಿಕಾರಿಗಳು ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳು, ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದು, 257 ಪುಟಗಳಲ್ಲಿ ತನಿಖಾ ದಾಖಲಾತಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಆರೋಪಿಯನ್ನು ಸುರಕ್ಷಿತವಾಗಿ ತಮ್ಮ ಜೊತೆಯಲ್ಲಿ ಇರಿಸಿಕೊಳ್ಳದೆ ಸ್ವತಂತ್ರ್ಯವಾಗಿ ದೂರದಲ್ಲಿ ಬಿಟ್ಟು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದು ತನಿಖೆಯಿಂದ ದೃಢಪಟ್ಟಿದೆ ಎಂದು ಅಬ್ದುಲ್, ಹುಣಚಪ್ಪ ಮತ್ತು ಕುಮಾರ್ ಅವರ ವಿರುದ್ಧ ಐಪಿಸಿ ಸೆಕ್ಷನ್ 225 (ಎ), (ಬಿ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News