ಕಲಬುರಗಿ| ದೇಶಭಕ್ತಿಯು ನೈತಿಕ, ಆಧ್ಯಾತ್ಮಿಕ ಜವಾಬ್ದಾರಿ: ಡಾ.ಮುಸ್ತಫಾ ಅಲ್ ಹುಸೈನಿ
ಕಲಬುರಗಿ: ಸ್ವತಂತ್ರ ಭಾರತದಲ್ಲಿ ಸ್ವತಂತ್ರವಾಗಿ ಜೀವಿಸುತ್ತೇವೆ ಎಂದರೆ ಇದಕ್ಕೆ ಅನೇಕ ಮಹನಿಯರ ಧೈರ್ಯ, ಸಾಹಸ ಮತ್ತು ತ್ಯಾಗದ ಫಲ ಎಂದು ಖ್ವಾಜಾ ಬಂದಾನವಾಜ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಮುಸ್ತಫಾ ಅಲ್ ಹುಸೈನಿ ಹೇಳಿದರು.
ಅವರು ಶುಕ್ರವಾರ ಕೆಬಿಎನ್ ವಿವಿಯಲ್ಲಿ ಸ್ವಾತಂತ್ರೋತ್ಸವ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸ್ವಾತಂತ್ರವೆಂದರೆ ಕೇವಲ ಪರಕೀಯರ ಆಡಳಿತದಿಂದ ಮುಕ್ತಿ ಅಷ್ಟೇ ಅಲ್ಲ, 79 ವರ್ಷಗಳ ಸ್ವತಂತ್ರ ನಮಗೆ ಸಮಾನತೆ, ವಿವಿಧತೆಯಲ್ಲಿ ಏಕತೆಯನ್ನು ಕಲಿಸಿದೆ. ನಮ್ಮ ದೇಶವನ್ನು ಬಲಿಷ್ಠಮಾಡಿ ಅಭಿವೃದ್ಧಿಪಡಿಸಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಹೋರಾಟಗಾರರ ತ್ಯಾಗಕ್ಕೆ ಗೌರವ ಸೂಚಿಸಿವುದು ನಮ್ಮೆಲ್ಲರ ಆದ್ಯ ಕರ್ತ್ಯವ್ಯ ಆಗಿದೆ ಎಂದರು.
ಒಳ್ಳೆಯ ಉದ್ದೇಶದಿಂದ ಕಾಯಕ ಮಾಡಿದಾಗ ದೇವರು ತಾನಾಗಿಯೇ ದಾರಿ ತೋರಿಸುತ್ತಾನೆ. ವಿವಿಯ ಸಂಸ್ಥಾಪಕ ಕುಲಾಧಿಪತಿ ದಿವಂಗತ ಡಾ. ಸೈಯದ್ ಶಹಾ ಖುಸ್ರೋ ಹುಸೈನಿಯವರ ಆಶಿರ್ವಾದ ನಮ್ಮೆಲ್ಲರ ಮೇಲಿದೆ. ಶರಣ ಬಸವೇಶ್ವರ ವಿವಿಯ ಸಮ ಕುಲಾಧಿಪತಿ ಡಾ.ಶರಣ ಬಸವಪ್ಪ ಅಪ್ಪಾಜಿಯವರು ನಮ್ಮನ್ನು ನಿನ್ನೆ ಅಗಲಿದ್ದು, ತುಂಬಲಾರದ ನಷ್ಟವಾಗಿದೆ. ಡಾ. ಸೈಯದ್ ಶಾಹ್ ಖುಸ್ರೋ ಹುಸೈನಿ ಹಾಗೂ ಡಾ. ಶರಣಬಸವಪ್ಪ ಅಪ್ಪಾಜಿಯವರು ಇಬ್ಬರೂ ಕಲಬುರಗಿಯ ಕಣ್ಣುಗಳಿದ್ದಂತೆ. ಅವರ ಮಾನವೀಯತೆಯ ಸೇವೆಗೆ ತಮ್ಮ ಜೀವನ ಸಮರ್ಪಣೆ ಮಾಡಿ ದಂತ ಕಥೆಯಾಗಿದ್ದಾರೆ ಎಂದರು.
ವಿವಿಯ ಉಪಕುಲಪತಿ ಪ್ರೊ. ಅಲಿ ರಜಾ ಮೂಸ್ವಿ, ವಿವಿಯ ಸಮ ಉಪಕುಲಪತಿ ಪ್ರೊ.ಅಶ್ಫಾಕ್ ಅಹ್ಮದ್ ಮಾತನಾಡಿದರು.
ಅಕ್ಬರ್ ಹುಸೈನಿ ಶಾಲೆಯ ವಿದ್ಯಾರ್ಥಿಗಳು ಪಥಸಂಚಲನ ಮಾಡಿದರು. ವಿದ್ಯಾರ್ಥಿಗಳು ಭಾಷಣ ಮಾಡಿದರು. ಕುಲಸಚಿವ ಮಿರ ವಿಲಾಯತ ಅಲಿ ಸ್ವಾಗತಿಸಿದರು. ಮೆಡಿಕಲ್ ಡೀನ್ ಡಾ.ಗುರುಪ್ರಸಾದ ವಂದಿಸಿದರು.
ಕಾರ್ಯಕ್ರಮದಲ್ಲಿ ವಿವಿಯ ಐಕ್ಯೂಎಸಿ ನಿರ್ದೇಶಕ ಅಬ್ದುಲ ಬಷೀರ, ಕೆಈಎಸ್ ಕಾರ್ಯದರ್ಶಿ, ಎಲ್ಲ ನಿಕಾಯದ ಡೀನ್, ಮುಖ್ಯಸ್ಥರು ಹಾಗೂ ಕೆಬಿಎನ್ ಅಡಿ ಬರುವ ಎಲ್ಲ ವಿದ್ಯಾ ಸಂಸ್ಥೆಗಳ ಸಮಸ್ತ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು.