ಕಲಬುರಗಿ | ಬಹುತ್ವ ಸಂಸ್ಕೃತಿ ಜನಪದ ಸಾಹಿತ್ಯಕ್ಕೆ ಜೀವಾಳ : ಡಾ.ಟಿ.ಎಂ.ಭಾಸ್ಕರ್
ಕಲಬುರಗಿ : ನಮ್ಮ ಜನಪದರು ಬದುಕಿದ ರೀತಿ ನೀತಿಗಳಂತೆ ತಮ್ಮ ಜನಪದ ಸಾಹಿತ್ಯದಲ್ಲೂ ಬಹುತ್ವ ಸಂಸ್ಕೃತಿ ಅಳವಡಿಸಿಕೊಂಡಿದ್ದಾರೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಹೇಳಿದರು.
ಹೆಚ್.ಕೆ.ಇ. ಸಂಸ್ಥೆಯ ಎಂ.ಎಸ್. ಇರಾಣಿ ಪದವಿ ಮಹಾವಿದ್ಯಾಲಯ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ ʼಜನಪದ ಸಾಹಿತ್ಯದ ಬಹುತ್ವದ ಆಯಾಮಗಳು ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣʼಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃತಿ ಬಿಡುಗಡೆ ಮಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಗ್ರಾಮೀಣ ಪ್ರದೇಶದ ಕಲೆ, ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾನಪದ ಕಲಾವಿದರ ಕೊಡುಗೆ ಅಪಾರವಾಗಿದೆ. ಜನಪದ ಕಲೆಯನ್ನು ಇಂದಿಗೂ ಉಳಿಸಿ ಬೆಳೆಸುತ್ತಿರುವ ಎಷ್ಟೋ ಕಲಾವಿದರು ಗೌರವ ಸಿಗದೇ ಹಿಂದೆ ಉಳಿದಿದ್ದಾರೆ. ಅಂಥವರನ್ನು ಗುರುತಿಸಿ ಸರಕಾರ, ವಿಶ್ವವಿದ್ಯಾಲಯಗಳು, ಸಂಘ-ಸಂಸ್ಥೆಗಳು ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ ಆ ಪ್ರಶಸ್ತಿಯ ಗೌರವೂ ಹೆಚ್ಚುತ್ತದೆ. ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.
ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ರೋಹಿಣಿಕುಮಾರ ಎಸ್. ಹಿಳ್ಳಿ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರಣದ ಸಂಚಾಲಕ ಪ್ರೊ.ಬಸಣ್ಣ ಎಸ್.ಕಾಗೆ, ಸಂಘಟನಾ ಕಾರ್ಯದರ್ಶಿ ಡಾ.ಪ್ರಾಣೇಶ ಎಸ್., ಸಂಯೋಜಕಿ ಚಂದ್ರಕಲಾ ಅಣಕಲ್, ಶಂಕರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಪ್ರಾಧ್ಯಾಪಕ ಮಾಧವ ಎಂ.ಕೆ., ಮೈತ್ರಾ ಹಳಿಮನಿ ವೇದಿಕೆ ಮೇಲಿದ್ದರು.
ನಂತರ ನಡೆದ ಗೋಷ್ಠಿಗಳಲ್ಲಿ ಜನಪದ ಸಾಹಿತ್ಯದ ಕಲೆಗಳು ಕುರಿತು ಪ್ರಾಧ್ಯಾಪಕ ಡಾ.ಗುರುಲಿಂಗಪ್ಪ ದಬಾಲೆ ಮಾತನಾಡಿದರು. ಸಾಹಿತಿ ಡಾ.ಜಯದೇವಿ ಗಾಯಕವಾಡ ಅಧ್ಯಕ್ಷತೆ ವಹಿಸಿದ್ದರು. ಆನಪದ ಮಹಾಕಾವ್ಯಗಳ ಬಹುತ್ವದ ಆಯಾಮಗಳು ಕುಇರಿತು ಡಾ.ಅಪ್ಪುಗೆರೆ ಸೋಮಶೇಖರ ಮಾತನಾಡಿದರು. ಡಾ.ಖಾಜಾವಳಿ ಈಚನಾಳ ಅಧ್ಯಕ್ಷತೆ ವಹಿಸಿದ್ದರು. ಆನಪದ ಕಲೆಯಾಗಿ ಯಕ್ಷಗಾನ ಕುರಿತು ಡಾ.ಮಾಧವ ಎಂ.ಕೆ. ಮಾತನಾಡಿದರು. ಡಾ.ಪಂಡಿತ ಬಿ.ಕೆ. ಅಧ್ಯಕ್ಷತೆ ವಹಿಸಿದ್ದರು.
ಜಾನಪದ ಕಲಾವಿದರಾದ ಶಿವಶರಣ ಕವಿ ದೇಗಾಂವ, ಶಶಿಕುಮಾರ ಕೆ.ಶರಣ ಸಿರಸಗಿ, ಡಾ.ಸಿದ್ರಾಮ ವಾಘ್ಮೋರೆ ಹಾಗೂ ಸಂಗಡಿಗರಿಂದ ವಿವಿಧ ಜನಪದ ಕಲೆಗಳ ಪ್ರದರ್ಶನ ಜರುಗಿತು.
ಪ್ರಮುಖರಾದ ಡಾ.ಶೀಲಾ ಬಿರಾದಾರ, ರಾಜೇಂದ್ರ ಮಾಡಬೂಳ, ಪ್ರಭವ ಪಟ್ಟಣಕರ್, ಸೋಮಶೇಕರ ನಂದಿಧ್ವಜ, ಎಂ.ಎನ್.ಸುಗಂಧಿ, ರಮೇಶ ಡಿ.ಬಡಿಗೇರ, ಶ್ರೀಶೈಲ ಮಾಡ್ಯಾಳೆ ಸೇರಿದಂತೆ ಅನೇಕರು ಯುವ ಸಂಶೋಧಕರು, ಉಪನ್ಯಾಸಕರು ಭಾಗವಹಿಸಿದ್ದರು.