ಕಲಬುರಗಿ | ಪೌರಕಾರ್ಮಿಕರ ಅಸಮರ್ಪಕ ಕಾರ್ಯಕ್ಕೆ ಅಧ್ಯಕ್ಷ ಅನ್ಸಾರಿ ಅಸಮಾಧಾನ
ಕಲಬುರಗಿ: ಆಳಂದ ಪಟ್ಟಣದ ಬಡಾವಣೆಗಳಲ್ಲಿ ಸಮಪರ್ಕವಾಗಿ ಸ್ವಚ್ಛತೆ ಮತ್ತು ಕಸ ವಿಲೆವಾರಿಗೆ ಪೌರಕಾರ್ಮಿಕರು ಹಿಂದೇಟು ಹಾಕುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ ಪುರಸಭೆ ಅಧ್ಯಕ್ಷ ಫಿರದೋಸ್ ಅನ್ಸಾರಿ ಸಮಪರ್ಕವಾಗಿ ಕಾರ್ಯನಿರ್ವಹಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು. ಹಿಂದಿನಂತೆ ಈಗ ನಡೆಯುವುದಿಲ್ಲ ಎಂದು ತಾಕೀತು ಮಾಡಿದರು.
ಆಳಂದ ಪಟ್ಟಣದ ತಾಪಂ ಕಚೇರಿಯ ಸಮೀಪದ ಆಶ್ರಯ ಕಾಲೋನಿಯ ಫುಲೆ ನಗರದಲ್ಲಿ ಬುಧವಾರ ಜನರ ಕೋರಿಕೆಯ ಮೆರೆಗೆ ಭೇಟಿ ನೀಡಿ ಅವ್ಯವಸ್ಥೆ ವೀಕ್ಷಿಸಿದ ಬಳಿಕ ಬಡಾವಣೆ ನಿವಾಸಿಗಳೊಂದಿಗೆ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಬಡಾವಣೆಯಲ್ಲಿ ಅಲೆಮಾರಿಗಳು, ನಿರ್ಗತಿಕರು, ಮತ್ತು ಆರ್ಥಿಕವಾಗಿ ಹಿಂದುಳಿದವರು ವಾಸಿಸುವ ಈ ಕೊಳಚೆ ಪ್ರದೇಶದ ಸಮಸ್ಯೆಗಳನ್ನು ಪರಿಹರಿಸಲು ಪುರಸಭೆ ಬದ್ಧವಾಗಿದ್ದೇವೆ. ಹಿಂದಿನ ಅಸಮರ್ಪಕ ವ್ಯವಸ್ಥೆಯನ್ನು ತೊಡೆದುಹಾಕಿ, ಸುವ್ಯವಸ್ಥೆ ಕಾಪಾಡಿಕೊಂಡಿರುವುದಾಗಿ ತಿಳಿಸಿದರು. ಸಾರ್ವಜನಿಕರು ತಮ್ಮ ಕುಂದಕೊರತೆಗಳನ್ನು ಅರ್ಜಿಗಳ ಮೂಲಕ ಸಲ್ಲಿಸಿ ಸೌಲಭ್ಯಗಳನ್ನು ಪಡೆಯಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಿಸಾನ್ ಸಭಾದ ರಾಜ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಅವರು ನಾಗರಿಕರ ಪರವಾಗಿ ಧ್ವನಿಯಾಗಿ, ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿದರು.
ಬಡಾವಣೆಯಲ್ಲಿ ವಾಸಿಸುವ ಹೆಚ್ಚಿನ ಅಲೆಮಾರಿಗಳಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜನನ ಮತ್ತು ಮರಣ ಪ್ರಮಾಣ ಪತ್ರಗಳಿಲ್ಲದಿರುವುದರಿಂದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಶಾಲಾ ದಾಖಲಾತಿಗೆ ಜನನ ಪ್ರಮಾಣ ಪತ್ರದ ಕೊರತೆಯಿಂದ ಮಕ್ಕಳ ಶಿಕ್ಷಣಕ್ಕೆ ತೊಡಕಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಮೌಲಾ ಮುಲ್ಲಾ ಈ ಸಮಸ್ಯೆಯನ್ನು ಒತ್ತಿ ಹೇಳಿ, ಸಕಾಲಕ್ಕೆ ಈ ದಾಖಲೆಗಳನ್ನು ಒದಗಿಸುವ ಕೆಲಸವನ್ನು ಆಡಳಿತದಿಂದ ತ್ವರಿತಗೊಳಿಸಬೇಕೆಂದು ಒತ್ತಾಯಿಸಿದರು. ಅಧಿಕಾರಿಗಳು ಈ ಕುರಿತು ಶೀಘ್ರ ಕ್ರಮಕ್ಕೆ ತಿಳಿಸಿದರು.
ಸಭೆಯಲ್ಲಿ ಪುರಸಭೆ ಸದಸ್ಯ ಸೋಮಶೇಖರ್ ಹತ್ರಿಕಿ, ನ್ಯಾಯವಾದಿ ಸಂಜಯ ನಾಯಕ್, ಅನಿಲ್ ಕಾಟೆ, ಮತ್ತು ಬಡಾವಣೆಯ ಮಹಿಳೆಯರು, ಯುವಕರು ಹಾಗೂ ಪುರುಷರು ಭಾಗವಹಿಸಿದ್ದರು.