ಕಲಬುರಗಿ | ಬಿಹಾರದಲ್ಲಿ ಬೌದ್ಧ ಬಿಕ್ಕುಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಕಲಬುರಗಿ : ಬಿಹಾರದಲ್ಲಿ ಮಹಾಬೋಧಿ ಮಹಾ ವಿಹಾರದ ಮುಕ್ತಿ ಆಂದೋಲನದ ಸತ್ಯಾಗ್ರಹ ನಿರತ ಬೌದ್ಧ ಬಿಕ್ಕುಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಶಹಾಬಾದ್ ನಗರದ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ಬೋಧ ಗಯಾ ಟೆಂಪಲ್ ಆಕ್ಟ್ 1949 ರದ್ದುಗೊಳಿಸಿ, ಮಹಾಬೋಧಿ ಮಹಾ ವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿ ಬುದ್ಧ ಗಯಾದ ಮಹಾಬೋಧಿ ಮಹಾ ವಿಹಾರದ ಮುಂದೆ ಬೌದ್ಧ ಬಿಕ್ಕುಗಳ ನೇತೃತ್ವದಲ್ಲಿ ಫೆ.12 ರಿಂದ ಪ್ರಾರಂಭವಾದ ಮಹಾಬೋಧಿ ಮಹಾ ವಿಹಾರದ ಮುಕ್ತಿ ಆಂದೋಲನದ ಅನಿರ್ಧಿಷ್ಟಾವಧಿ ಸರದಿ ಆಮರಣಾಂತ ಉಪವಾಸ ಸತ್ಯಾಗ್ರಹ ಶಾಂತಿಯುತವಾಗಿ ಹದಿನಾರನೇ ದಿನಕ್ಕೆ ತಲುಪಿದೆ. ಈ ಹೋರಾಟವನ್ನು ವಿಫಲಗೊಳಿಸಲು ಸಂಘಪರಿವಾರ ಹಲವು ಕುತಂತ್ರಗಳನ್ನು ಮಾಡಿದೆ. ಆದರೆ ಧರಣಿ ನಿರತ ಬೌದ್ಧ ಸಂಘ ಶಾಂತಿ ಮತ್ತು ತಾಳ್ಮೆಯಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನಡೆದುಕೊಂಡು ವಿರೋಧಿಗಳ ತಂತ್ರಗಳನ್ನು ವಿಫಲಗೊಳಿಸಿದೆ. ಆದರೆ ಸರ್ಕಾರ ತನ್ನ ಕುತಂತ್ರ ಬುದ್ದಿ ತೋರಿ, ಬಂತೇಜಿಗಳ ಮೇಲೆ ಪ್ರಾಣಿಗಳಿಗಿಂತ ಕೀಳಾಗಿ ದೌರ್ಜನ್ಯ ಎಸಗಿದ್ದು, ನಿಮ್ಮ ಆರೋಗ್ಯ ಸರಿ ಇಲ್ಲ ಎಂದು ಕೆಲವರನ್ನು ಅಂಬುಲೆನ್ಸ್ ಗೆ ಬಲವಂತವಾಗಿ ಹಾಕಿಕೊಂಡು, ಇನ್ನೂ ಕೆಲವರಿಗೆ ಇಲ್ಲಿ ಸತ್ಯಾಗ್ರಹ ಕೂರಲು ನಿಮಗೆ ಪರವಾನಗಿ ಇಲ್ಲ ಎಂದು ಪೊಲೀಸ್ ವ್ಯಾನ್ ನಲ್ಲಿ ಎತ್ತಿಹಾಕಿ ಹಿಂಸೆ ನೀಡಿದ್ದು, ಮಹಿಳಾ ಬಿಕ್ಕುಣಿಗಳ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಸುರೇಶ ಮೆಂಗನ ಮಾತನಾಡಿ, ಎಲ್ಲರನ್ನೂ ಬಲವಂತವಾಗಿ ಸತ್ಯಾಗ್ರಹ ಸ್ಥಳದಿಂದ ಬಂಧಿಸಿ ಕರೆದೊಯ್ದಿದ್ದಾರೆ. ಕೆಲವರನ್ನು ಗಯಾ ನಗರದ ಅನುಗ್ರಹ ನಾರಾಯಣ ಮಗಧ ಮೆಡಿಕಲ್ ಕಾಲೇಜು ಆಸ್ಪತ್ರೆ ಗೇಟ್ ಬಳಿ ತಂದು ಬಿಟ್ಟು ಪೊಲೀಸರು ಪರಾರಿಯಾಗಿದ್ದಾರೆ. ಇನ್ನೂ ಕೆಲವರಿಗೆ ಎಲ್ಲಿ ಬಂಧನದಲ್ಲಿ ಇಟ್ಟಿದ್ದಾರೆ ಎಂದು ಮಾಹಿತಿ ಸಹ ನೀಡಿರುವುದಿಲ್ಲ, ಬಂತೇಜಿಗಳ ಆರೋಗ್ಯ ನೆಪ ಹೇಳಿದ ಅಧಿಕಾರಿಗಳು ಬಂತೇಜಿಗಳನ್ನು ಕನಿಷ್ಠ ಆಸ್ಪತ್ರೆಗೆ ದಾಖಲು ಸಹ ಮಾಡದೆ ಅಮಾನವೀಯವಾಗಿ ವರ್ತನೆ ಮಾಡಿದ್ದಾರೆ. ಬಿಹಾರ ಸರ್ಕಾರದ ಈ ಕ್ರಮ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ" ಎಂದು ಆರೋಪಿಸಿದರು. ಕೂಡಲೇ ಮಹಾವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡುವವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಕೆ ನೀಡಿದರು.
ಶಿವಶಾಲಕುಮಾರ ಪಟ್ಟಣಕರ್, ಬಸವರಾಜ ಮಯೂರ, ಬುದ್ಧ ಗೋಷ ದೇವೆಂದ್ರ ಹೆಗಡೆ ಮಾತನಾಡಿದರು.
ಈ ಸಂದರ್ಭದಲ್ಲಿ ಮಲ್ಲಣ್ಣ ಮಸ್ಕಿ, ಸತೀಶ ಕೋಬಾಳಕರ್,ಕೃಷ್ಣಪ್ಪ ಕರಣಿಕ್, ಶಂಕರ ಅಳ್ಳೊಳ್ಳಿ, ಮಲ್ಲಿಕರ್ಜುನ ಕಟ್ಟಿ, ಪುನೀತ್ ಹಳ್ಳಿ,ನರಸಿಂಹಲೂ ರಾಯಚೂರಕರ್, ರಾಜು ಜಂಬಗಿ,ಮಲ್ಲಿಕಾರ್ಜುನ ಹಳ್ಳಿ, ಮಹಾದೇವ ತರನಳ್ಳಿ, ಮನೋಹರ್ ಕೊಳ್ಳೂರ್,ಮಲ್ಲೇಶಿ ಭಜಂತ್ರಿ,ಪ್ರವೀಣ ರಾಜನ್, ಜಯಕರ್ನಾಟಕ ವೇದಿಕೆಯ ಅಧ್ಯಕ್ಷಶೇಖರ ಪಾಟೀಲ, ಗೋವಾ ಬಾಬು, ಡಾ.ಅಹ್ಮದ್ ಪಟೇಲ್, ಸಾಹೇಬಗೌಡ ಬೋಗುಂಡಿ ಇತರರು ಇದ್ದರು.