ಕಲಬುರಗಿ | ವಕೀಲ ರಾಕೇಶ್ ಕಿಶೋರ್ ಗಡಿಪಾರಿಗೆ ಸಮತಾ ಸೈನಿಕ ದಳ ಆಗ್ರಹ
ಕಲಬುರಗಿ: ಸುಪ್ರೀಂ ಕೋರ್ಟ್ ಗೌರವಾನ್ವಿತ ಪೀಠಕ್ಕೆ ಅವಮಾನ ಮಾಡಿದ ವಕೀಲರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ಸಮತಾ ಸೈನಿಕ ದಳ ಕಲಬುರಗಿ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಭಾರತವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಅದರ ಮೂಲ ಅಸ್ತಿತ್ವವು ಸಂವಿಧಾನ ಮತ್ತು ನ್ಯಾಯಾಂಗದ ಗೌರವದಿಂದಲೇ ಉಳಿದಿದೆ. ಇಂತಹ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ ಪವಿತ್ರ ಪೀಠಕ್ಕೆ ಶೂ ಎಸೆದು ಅಪಮಾನ ಮಾಡಿದ ವಕೀಲ ರಾಕೇಶ್ ಕಿಶೋರ್ ಕೃತ್ಯವು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದಾಳಿ ಅಲ್ಲ. ಅದು ಭಾರತದ ಸಂವಿಧಾನದ ಆತ್ಮದ ಮೇಲಿನ ನೇರ ಅವಮಾನವಾಗಿದೆ. ಇದು ಕೇವಲ ಕಾನೂನು ಉಲ್ಲಂಘನೆ ಅಲ್ಲ. ಇದು ಸಂವಿಧಾನ, ನ್ಯಾಯಾಂಗ ಮತ್ತು ರಾಷ್ಟ್ರದ ಘನತೆಗೆ ವಿರುದ್ಧವಾದ ಅತಿದೊಡ್ಡ ಅಪರಾಧ. ಇಂತಹ ಕೃತ್ಯಗಳಿಗೆ ದೇಶದ ಪ್ರತಿ ನಾಗರಿಕನು ಖಂಡನೆ ವ್ಯಕ್ತಪಡಿಸಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಸುಪ್ರೀಂ ಕೋರ್ಟ್ ನ್ಯಾಯಾಧೀಶರು ನಮ್ಮ ಸಂವಿಧಾನದ ಕಂಬಗಳಂತಿದ್ದಾರೆ. ಅವರು ನ್ಯಾಯ, ಸಮಾನತೆ ಮತ್ತು ಸತ್ಯಕ್ಕಾಗಿ ಬದ್ಧರಾಗಿದ್ದಾರೆ. ಇಂತಹ ನ್ಯಾಯಮೂರ್ತಿಗಳ ಗೌರವಕ್ಕೆ ಧಕ್ಕೆ ತಂದವರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPಅ) ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಅತ್ಯವಶ್ಯಕ ಎಂದು ಹೇಳಿದರು.
ಅವರು ಮಾಡಿದ ಕೃತ್ಯವು ಕೇವಲ ನ್ಯಾಯಾಂಗವನ್ನೇ ಅಲ್ಲ. ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಗಳಿಗೆ ಮತ್ತು ಅವರ ಸಂವಿಧಾನಿಕ ಪರಂಪರೆಗೆ ಅಪಮಾನವಾಗಿದೆ. ಅಂಬೇಡ್ಕರ್ ಅವರು ಶಿಕ್ಷಣದಿಂದ ಶಕ್ತಿ ಪಡೆದು ಸಮಾನತೆ ಮತ್ತು ಮಾನವೀಯತೆಗಾಗಿ ಸಂವಿಧಾನವನ್ನು ರಚಿಸಿದ್ದರು. ಇಂತಹ ಅಪಮಾನಕಾರಿ ನಡೆಗಳು ಅವರ ಕನಸುಗಳ ಭಾರತವನ್ನು ಕಳಂಕಗೊಳಿಸುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಭಾರತದ ನ್ಯಾಯಾಂಗವು ಪ್ರಜಾಪ್ರಭುತ್ವದ ಹೃದಯವಾಗಿದೆ. ಅದರ ಮೇಲೆ ಕಲ್ಲು ಎಸೆಯುವವರು, ಭಾರತ ಸಂವಿಧಾನದ ನಾಳಗಳನ್ನು ಕತ್ತರಿಸುವವರಂತಿದ್ದಾರೆ. ನಾವು ಕರ್ನಾಟಕ ಸಮತಾ ಸೈನಿಕ ದಳ ಕಲಬುರಗಿ ಪರವಾಗಿ, ರಾಷ್ಟ್ರಪತಿಗಳಿಂದ ನ್ಯಾಯ ಮತ್ತು ಕ್ರಮದ ನಿರೀಕ್ಷೆಯಲ್ಲಿದ್ದೇವೆ. ವಕೀಲ ಕಿಶೋರ್ ರಾಕೇಶ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಗಡಿಪಾರು ಮಾಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ವಿಭಾಗೀಯ ಅಧ್ಯಕ್ಷ ಸಂಜೀವ ಟಿ.ಮಾಲೆ, ಜಿಲ್ಲಾಧ್ಯಕ್ಷ ಈರಣ್ಣಾ ಜಾನ, ಮಾಜಿ ಸಿಂಡಿಕೇಟ್ ಸದಸ್ಯ ಡಾ. ಸುನೀಲಕುಮಾರ ವಂಟಿ, ಅಪ್ಪಾರಾವ ಭಾವಿಮನಿ, ಶರಣು ಕಡಗಂಚಿ, ಮಹಾದೇವ ನಾಟೀಕಾರ, ಸಿದ್ದಾರ್ಥ ಕಣಮಸ್, ಶಿವಲಿಂಗಮ್ಮ ಸಾವಳಗಿ, ಜ್ಯೋತಿ ದರ್ಗಿ, ಅಮೃತಾವ ನಾಯಿಕೋಡಿ, ಖತಲಪ್ಪ ಕಟ್ಟಿಮನಿ, ಮಲ್ಲಿಕಾರ್ಜುನ ಉದಯಕರ, ಇಂದುಮತಿ ಭರತನೂರ, ಪದ್ಮಾ ಅಟ್ಟೋಕರ ನಗರ, ವಿಜಯಕುಮಾರ ಸಾವಳಗಿ, ಸೂರ್ಯಕಾಂತ ಅಂಬಲಗಿ, ಶಿವಮೂರ್ತಿ ಬಳಚಕ್ರ, ವಿಜಯಕುಮಾರ ಸೇರಿದಂತೆ ಮತ್ತಿತರರು ಇದ್ದರು.