ಕಲಬುರಗಿ | ರಾಜ್ಯ ಸರಕಾರ ಚಿಲ್ಲರೆ ಮದ್ಯ ಮಾರಾಟದ ಮೇಲೆ ಶೇ.20ರಷ್ಟು ಕಮಿಷನ್ ನೀಡಬೇಕು : ಅಶೋಕ್ ಗುತ್ತೇದಾರ್
ಕಲಬುರಗಿ: ರಾಜ್ಯ ಸರಕಾರವು ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ.20ರಷ್ಟು ಕಮಿಷನ್ ನೀಡಬೇಕು. ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆ ಮಾಡುವುದಲ್ಲದೆ ಯಾವುದೇ ಕಾರಣಕ್ಕೂ ಹೆಚ್ಚಳ ಮಾಡಬಾರದು ಸೇರಿದಂತೆ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಕೂಡಲೇ ಪರಿಗಣಿಸಿ ಈಡೇರಿಸಬೇಕೆಂದು ಫೆಡರೇಶನ್ ಆಫ್ ಮರ್ಚೆಂಟ್ಸ್ ನ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಅಶೋಕ್ ಗುತ್ತೇದಾರ್ ಹೇಳಿದರು.
ಫೆಡರೇಶನ್ ಆಫ್ ಮರ್ಚೆಂಟ್ಸ್ ಕರ್ನಾಟಕ ಬೆಂಗಳೂರು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳ ವೈನ್ ಮರ್ಚೆಂಟ್ ಅಸೋಸಿಯೇಷನ್ ನ ಆಶ್ರಯದಲ್ಲಿ ರಾಜ್ಯಾದ್ಯಂತ ನಡೆಯುವ ಸಾಂಕೇತಿಕ ಪ್ರತಿಭಟನೆಯ ಅಂಗವಾಗಿ ಕಲಬುರಗಿಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಸುವ ಮನವಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಶಿಷ್ಟಾಚಾರ ವಿಭಾಗದ ಸಹಾಯಕ ನಿರ್ದೇಶಕರಾದ ಶಿವಶರಣಪ್ಪ ಅವರಿಗೆ ಮನವಿ ಸಲ್ಲಿಸಿದ ನಂತರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಮದ್ಯ ಮಾರಾಟಗಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ರಾಜ್ಯ ಸರಕಾರಕ್ಕೆ ಸುಮಾರು 40 ಸಾವಿರ ಕೋಟಿ ರೂ. ಆದಾಯವನ್ನು ತಂದು ಕೊಡುವ ಈ ಉದ್ಯಮದ ಬಗ್ಗೆ ರಾಜ್ಯ ಸರ್ಕಾರದಿಂದ ಸೂಕ್ತವಾದ ಸ್ಪಂದನೆ ದೊರೆಯದಿರುವುದರಿಂದ ರಾಜ್ಯಾದ್ಯಂತ ಮಧ್ಯ ಮಾರಾಟಗಾರರು ಒಂದು ದಿನದ ಸಾಂಕೇತಿಕ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಮದ್ಯ ಮಾರಾಟಗಾರರಿಗೆ ಶೇ.20ರಷ್ಟು ಇದ್ದ ಕಮಿಷನನ್ನು ಕುಗ್ಗಿಸಿ ಈಗ ಶೇ.10 ಕ್ಕೆ ಇಳಿಸಲಾಗಿದೆ. ಪ್ರಸಕ್ತ ದಿನಮಾನದಲ್ಲಿ ಗ್ರಾಹಕರ ಬೇಡಿಕೆ ಹಾಗೂ ಸುವ್ಯವಸ್ಥೆ ಕಲ್ಪಿಸಲು ಖರ್ಚು ವೆಚ್ಚಗಳು ಜಾಸ್ತಿ ಆಗುತ್ತಿರುವುದರಿಂದ ಕಮಿಷನ್ ಹೆಚ್ಚಿಸಿ ಮತ್ತೆ ಮಾರಾಟಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಿ ಎಲ್ 2 ರಲ್ಲಿ ಮದ್ಯ ಸೇವಿಸಲು ಅನುಮತಿಯನ್ನು ನೀಡಬೇಕು. ಸಿ ಎಲ್ 9ರಲ್ಲಿ ಮಧ್ಯವನ್ನು ಪಾರ್ಸೆಲ್ ರೂಪದಲ್ಲಿ ಮಾರಾಟ ಮಾಡುವ ಕುರಿತು ಕಾನೂನು ತಿದ್ದುಪಡಿ ಮಾಡಬೇಕು. ಸಿಎಲ್7 ಅಥವಾ ಇನ್ನಿತರ ದೊಡ್ಡ ಹೋಟೆಲ್ ಗಳಿಗೆ ಹೋಗಿ ಮದ್ಯದೊಂದಿಗೆ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ದುಬಾರಿ ಖರ್ಚು ಮಾಡಲು ಸಾಧ್ಯವಿಲ್ಲದ ಬಡವರ್ಗದ ಗ್ರಾಹಕರಿಗೆ ಅನುಕೂಲವಾಗಲು ಸಣ್ಣ ಶರತ್ತನ್ನು ಸಡಿಲಿವುದು ಅತ್ಯಂತ ಅಗತ್ಯವಾಗಿದೆ. ಸನ್ನದು ಆವರಣದಲ್ಲಿ ನಿಗದಿ ಪಡಿಸಿದ ನಿರ್ದಿಷ್ಟ ಸ್ಥಳ ಮತ್ತು ಮೊದಲೇ ತಯಾರಿಸಿದ ಆಹಾರಗಳನ್ನು ನೀಡಲು ಅವಕಾಶ ಮಾಡಿಕೊಡುವುದರಿಂದ ಬಡವರ್ಗದ ಗ್ರಾಹಕರಿಗೆ ಸಹಾಯವಾಗುತ್ತದೆ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಮಾಧ್ಯಮ ಮಾಡುವುದನ್ನು ತಡೆಗಟ್ಟಲು ಅನುಕೂಲವಾಗುತ್ತದೆ. ಇದರಿಂದ ಅಬಕಾರಿ ಕಾಯಿದೆ ಉಲ್ಲಂಘನೆಯನ್ನು ಕೂಡ ತಡೆಯಲು ಸಾಧ್ಯ ಎಂದರು.
ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷರಾದ ವೀರಯ್ಯ ಕೆ ಗುತ್ತೇದಾರ್, ಉಪಾಧ್ಯಕ್ಷರಾದ ರಾಮುಲು ಬಿ ರೆಡ್ಡಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕಡೆಚೂರ್ , ಕೋಶಾಧಿಕಾರಿ ತಿಮ್ಮಪ್ಪ ಎ.ಇ ಸನ್ನದು ದಾರರಾದ ಮಹಾದೇವ ಗುತ್ತೇದಾರ್, ಅಶೋಕ್ ಶಹಪುರಕರ್, ಜಗದೇವ ಗುತ್ತೇದಾರ್, ದಯಾನಂದ ಪೂಜಾರಿ, ಶಿವು ಗುತ್ತೇದಾರ್, ಶಾಂತಕುಮಾರ್ ಪಾಟೀಲ್ ಗಂಗಾಧರ್ ಪ್ರೀತಮ್ ರೆಡ್ಡಿ, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಮಲ್ಲಿಕಾರ್ಜುನ ಸ್ವಾಮಿ ಭಂಕೂರ್,ಆಕಾಶ್ ಗುತ್ತೇದಾರ್, ಸುರೇಶ್ ಗುತ್ತೇದಾರ ಮಟ್ಟೂರು, ಮಹಾ ಕೀರ್ತಿ ಶೆಟ್ಟಿ,ಹರ್ಷ,ಸೋನು ಪಟೇಲ್, ಮಂಜುನಾಥ ಗುತ್ತೇದಾರ್ ಮತ್ತಿತರರಿದ್ದರು.