ಕಲಬುರಗಿ | ವಿದ್ಯಾರ್ಥಿನಿಯದ್ದು ಆತ್ಮಹತ್ಯೆ ಅಲ್ಲ, ಕೊಲೆ? : ಪಾಲಕರಿಂದ ಮತ್ತೆ ದೂರು
ಕಲಬುರಗಿ: ಕಳೆದ ವರ್ಷ ಡಿಸೆಂಬರ್ 4 ರಂದು ಮಧ್ಯಾಹ್ನ ನಗರದ ಖಾಸಗಿ ಕಾಲೇಜವೊಂದರ ವಸತಿ ನಿಲಯದಲ್ಲಿನ ಕೋಣೆಯಲ್ಲಿ ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಕರು ಇದು ಆತ್ಮಹತ್ಯೆ ಅಲ್ಲ, ಇದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಮೂಲತ: ಆಳಂದ ಪಟ್ಟಣದ ನಿವಾಸಿಯಾಗಿದ್ದ ಹಾಗೂ ನಗರ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ನಮೀರಾ ಸವೃತ ವಿದ್ಯಾರ್ಥಿನಿ ಮೃತಪಟ್ಟಿದ್ದಳು.
ವಿದ್ಯಾರ್ಥಿನಿ ನಮೀರಾಳನ್ನು ಕಳೆದ ವರ್ಷ ಡಿಸೆಂಬರ್ 1 ರಂದು ತಂದೆ ಅವರು ಆಳಂದ ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದು, ಪುನಃ 4 ಅವರ ಮಗಳು ವಸತಿ ನಿಲಯಕ್ಕೆ ಬಂದು ಮುಟ್ಟಿದ್ದಾಗಿ 10 ಗಂಟೆಗೆ ಫೋನ್ ಮಾಡಿ ಹೇಳಿದ್ದಾರೆ. ಅದೇ ದಿನ ಮಧ್ಯಾಹ್ನ 3.24ಕ್ಕೆ ಕಾಲೇಜಿನ ಪ್ರಾಂಶುಪಾಲರು ಪಾಲಕರಿಗೆ ಕರೆ ಮಾಡಿ ನಿಮ್ಮ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಬನ್ನಿ ಎಂದು ಹೇಳಿದ್ದು, ಈ ಪ್ರಕರಣವನ್ನು ರಾಘವೇಂದ್ರ ನಗರ ಠಾಣೆಯಲ್ಲಿ ಪೊಲೀಸರು ಆತ್ಮಹತ್ಯೆ ಪ್ರಕರಣವೆಂದು ದೂರು ದಾಖಲಿಸಿಕೊಂಡಿದ್ದರು.
ಆದರೆ, ಮೃತ ವಿದ್ಯಾರ್ಥಿಯ ತಂದೆ ಭಾಷಾ ಅವರು ಇದೀಗ ಮರು ದೂರು ನೀಡಿದ್ದು, ಮಗಳು ಆತ್ಮಹತ್ಯೆ ಮಾಡಿಕೊಂಡ ವಸತಿ ನಿಲಯದಲ್ಲಿ 600 ವಿದ್ಯಾರ್ಥಿಗಳಿದ್ದು, ಒಂದು ಕೋಣೆಯಲ್ಲಿ 4 ರಿಂದ 5 ಜನರಿದ್ದಾರೆ. ಅಲ್ಲದೆ ವಾರ್ಡ್ ನ ವ್ಯಾಚ್ ಮೇನ್ ಸಹ ಇದ್ದಾರೆ. ಅಲ್ಲದೆ ಕೋಣೆ 11 ಅಡಿ ಎತ್ತರವಿದ್ದು ಕುರ್ಚಿ ಮೇಲೆ ನಿಂತರು ಓಡಣಿ ಹಾಕಲು ನಿಲುಕುವುದಿಲ್ಲ, ಇದರಿಂದ ಮಗಳ ಸಾವಿನಲ್ಲಿ ಸಂಶಯವಿದ್ದು, ವಸತಿ ನಿಲಯದ ಸಿಸಿ ಕ್ಯಾಮರಾ ಪರಿಶೀಲಿಸಿ, ಮಗಳ ಮಾತನಾಡಿದ ವಸತಿ ನಿಲಯದ ಮೊಬೈಲ್ ಪರಿಶೀಲಿಸಬೇಕು. ತಮ್ಮ ಮಗಳ ಸಾವು ಆತ್ಮಹತ್ಯೆ ಅಲ್ಲ, ಇದೊಂದು ಕೊಲೆಯಾಗಿದ್ದು, ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕಲಬುರಗಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಈ ಕುರಿತು ಇದೀಗ ಪುನಃ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಮರು ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.