ಕಲಬುರಗಿ | ಶರಣಬಸವ ವಿಶ್ವವಿದ್ಯಾಲಯದಲ್ಲಿ ಶರಣಬಸವಪ್ಪ ಅಪ್ಪಾಜಿಗೆ ಶ್ರದ್ಧಾಂಜಲಿ
ಕಲಬುರಗಿ: ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಲಯದಲ್ಲಿ ಹಾಗೂ ಶರಣಬಸವ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಿಧನರಾದ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪಾಜಿಯವರ ಭಾವಚಿತ್ರಕ್ಕೆ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು, ಪೂಜೆ ಮಾಡಿ, ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
ಈ ವೇಳೆಯಲ್ಲಿ ಮಾತನಾಡಿದ ಕುಲಸಚಿವ ಡಾ.ಎಸ್.ಜಿ.ಡೊಳ್ಳೇಗೌಡರ್ ಅವರು, ಪರಿಪೂರ್ಣತಾವಾದಿಯಾಗಿದ್ದ ಡಾ.ಅಪ್ಪಾಜಿಯವರ ಶ್ರೇಷ್ಠ ವೃತ್ತಿಜೀವನವನ್ನು ಸ್ಮರಿಸಿದರು, ಅವರು ಪ್ರತಿಯೊಂದು ಶಿಕ್ಷಣ ಸಂಸ್ಥೆ ಮತ್ತು ಶರಣಬಸವ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಲು ಸಂಘದ ಪ್ರತಿಯೊಬ್ಬರನ್ನೂ ತೊಡಗಿಸಿಕೊಂಡಿದ್ದರು. ಡಾ. ಅಪ್ಪಾಜಿಯವರು ಸಂಘ ಮತ್ತು ಶರಣಬಸವ ವಿಶ್ವವಿದ್ಯಾಲಯ ನಡೆಸುವ ಶಿಕ್ಷಣ ಸಂಸ್ಥೆಗಳ ಪ್ರತಿಯೊಬ್ಬ ಶಿಕ್ಷಕ ಮತ್ತು ಬೋಧಕೇತರ ಸಿಬ್ಬಂದಿಯಿಂದ ಅತ್ಯುತ್ತಮವಾದದ್ದನ್ನು ಪಡೆಯುವ ಕೌಶಲ್ಯವನ್ನು ಹೊಂದಿದ್ದರು ಎಂದರು.
ವಿವಿಯ ಡೀನ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ, ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ.ವಿ.ಡಿ.ಮೈತ್ರಿ ಕೂಡ ಮಾತನಾಡಿದರು.
ಈ ಸಂದರ್ಭದಲ್ಲಿ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವ (ಮೌಲ್ಯಮಾಪನ) ಡಾ.ಎಸ್.ಎಚ್.ಹೊನ್ನಳ್ಳಿ, ವಿಶ್ವವಿದ್ಯಾಲಯದ ಎಲ್ಲಾ ಅಧ್ಯಾಪಕರು, ಡೀನರು ಮತ್ತು ಮುಖ್ಯಸ್ಥರು ಸೇರಿದಂತೆ ಇತರ ಪ್ರಮುಖರು ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.