ಕಲಬುರಗಿ | ಮಕ್ಕಳಿಗೆ ʼವಿದ್ಯಾದೃಷ್ಟಿʼ ಕಾರ್ಯಕ್ರಮ ವರದಾನ : ಶಾಸಕ ಅಲ್ಲಮ ಪ್ರಭು ಪಾಟೀಲ್
ಕಲಬುರಗಿ : ಗ್ರಾಮೀಣ ಪ್ರದೇಶದಲ್ಲಿ ಕಣ್ಣಿನ ಆರೈಕೆ ಸೇವೆ ಹೆಚ್ಚಳಕ್ಕೆ ಕರ್ನಾಟಕ ಸರ್ಕಾರ ಝೀಸಸ್ ಇಂಡಿಯಾದೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯಿಂದ ಜಿಲ್ಲೆಯ ಶಾಲಾ ಮಕ್ಕಳಿಗೆ ವರದಾನವಾಗಲಿದೆ. ಈ ಒಪ್ಪಂದಕ್ಕೆ ಕಾರಣರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಹೇಳಿದ್ದಾರೆ.
ಕಲಬುರಗಿಯ 8 ತಾಲ್ಲೂಕುಗಳಲ್ಲಿ ನೇತ್ರ ಪರೀಕ್ಷೆ ಆಂದೋಲನ ನಡೆಯಲಿದೆ. ಇದರಿಂದಾಗಿ 11 ಲಕ್ಷ ಮಂದಿಗೆ ನೇತ್ರ ಪರೀಕ್ಷೆಯಾಗಲಿದೆ. 5.32 ಲಕ್ಷ ಮಕ್ಕಳು ಹಾಗೂ 6 ಲಕ್ಷ ವಯಸ್ಕರಿಗೆ ಕಣ್ಣಿನ ಆರೈಕೆ ಆಗಲಿದೆ. ಈ ಆಂದೋಲನ ಬಡವರ ಬಾಳನ್ನು ಬದಲಿಸಲಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ 5,32,000 ಶಾಲಾ ಮಕ್ಕಳಿಗೆ ಕಣ್ಣಿನ ಪರೀಕ್ಷೆ ಅಭಿಯಾನ ನಡೆಯಲಿದೆ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಏಳಿಗೆ ಕಾಣಲಿದೆ. ಇದು ಜಿಲ್ಲೆಯ ಶಿಕ್ಷಣ ರಂಗದಲ್ಲಿ ಹೆಚ್ಚಿನ ಬದಲಾವಣೆಗೆ ಕಾರಣವಾಗಲಿದೆ. ಬೆಂಗಳೂರಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ. ಇದು ಸಂತಸ ತಂದಿದೆ. ಜಿಲ್ಲೆಯಾದ್ಯಂತ ಮಕ್ಕಳ ದೃಷ್ಟಿ-ಸಂಬಂಧಿತ ಸಮಸ್ಯೆಗಳನ್ನು ಪತ್ತೆಹಚ್ಚಿ ಅಗತ್ಯವಿರುವವರಿಗೆ ಕನ್ನಡಕಗಳನ್ನು ವಿತರಿಸುವ ಯೋಜನೆಯ ಲಾಭ ಕಲಬುರಗಿ ದಕ್ಷಿಣ ಸೇರಿದಂತೆ ಜಿಲ್ಲೆಯ 8 ತಾಲೂಕುಗಳ ಎಲ್ಲಾ ಮತಕ್ಷೇತ್ರಗಳ ಜನ, ಮಕ್ಕಳು ಪಡೆಯಬೇಕು ಎಂದು ಅಲ್ಲಮಪ್ರಭು ಪಾಟೀಲ್ ಕೋರಿದ್ದಾರೆ.