ಸೀಗಿ-ಸಂಸ್ಕೃತಿ ಪ್ರಶಸ್ತಿಗೆ ಲಿಂಗಾರೆಡ್ಡಿ ಶೇರಿ, ಶೋಭಾದೇವಿ ಚೆಕ್ಕಿ ಆಯ್ಕೆ
ಕಲಬುರಗಿ: ಇಲ್ಲಿನ ಸಂಸ್ಕೃತಿ ಪ್ರಕಾಶನ ಕೊಡಮಾಡುವ ಸಂಸ್ಕೃತಿ ಸಮ್ಮಾನ್ ಪ್ರಶಸ್ತಿಗೆ ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಹಾಗೂ ಸೀಗಿ ಸಾಹಿತ್ಯ ಪ್ರಶಸ್ತಿಗೆ ಹಿರಿಯ ಲೇಖಕಿ ಶೋಭಾದೇವಿ ಚೆಕ್ಕಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಕೃತಿ ಪ್ರಕಾಶನ ಟ್ರಸ್ಟ್ ಕಾರ್ಯದರ್ಶಿ ಆದಿತ್ಯ ಜೋಶಿ ತಿಳಿಸಿದ್ದಾರೆ.
ಡಿಸೆಂಬರ್ 15ರಂದು ಸೇಡಂನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಸ್ಕೃತಿ ಪ್ರಕಾಶನದ ಬೆಳ್ಳಿ ಹಬ್ಬದ ನೆನಪಿಗೆ ಸ್ಥಾಪಿಸಿದ ಸಂಸ್ಕೃತಿ ಸಮ್ಮಾನ್ ಪ್ರಶಸ್ತಿಯನ್ನು ಈಗಾಗಲೇ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ, ಶಾಸ್ತ್ರ ಚೂಡಾಮಣಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ವಿದ್ವಾನ್ ಡಾ.ವಾಸುದೇವ ಅಗ್ನಿಹೋತ್ರಿ, ದಾಸಸಾಹಿತ್ಯದ ವಿದ್ವಾನ್ ಡಾ.ಸ್ವಾಮಿರಾವ ಕುಲಕರ್ಣಿ ಅವರಿಗೆ ಪ್ರದಾನ ಮಾಡಲಾಗಿದೆ.
ಪ್ರಕಾಶನದ ಕಾರ್ಯದರ್ಶಿಯಾಗಿದ್ದ ಸೀತಾಗೀತ ಜೋಶಿ ಸ್ಮರಣೆಗೆ ಸೀಗಿ ಸಾಹಿತ್ಯ ಪ್ರಶಸ್ತಿ ಪ್ರಶಸ್ತಿ ನೀಡಲಾಗುತ್ತಿದೆ.
ಡಿ.15 ರಂದು ಸಂಜೆ 5.45 ಕ್ಕೆ ಸೇಡಂ ರಥಬೀದಿಯಲ್ಲಿರುವ ಶ್ರೀ ಕೊತ್ತಲ ಬಸವ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಹಿರಿಯ ವೈದ್ಯರು, ಸಾಹಿತಿಗಳಾದ ಡಾ.ಎಂ.ಜಿ.ದೇಶಪಾoಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಅನುರಾಧ ಪಾಟೀಲರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಕೃತಿ ಪ್ರಕಾಶನ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಜೋಶಿ ವಹಿಸಲಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.