ಕಲಬುರಗಿ | ಯುವಕರಿಗೆ ಜೀವನ ಮೌಲ್ಯಗಳನ್ನು ಹೇಳಿಕೊಡುವ ಸಾಹಿತ್ಯ ಅವಶ್ಯಕವಾಗಿದೆ : ಡಾ.ನೀಲಾಂಬಿಕಾ ಪಾಟೀಲ್
ಕಲಬುರಗಿ : ಜೀವಾನುಭವ ಮತ್ತು ಮನದಾಸೆಯ ಸಾಹಿತ್ಯ ಜೀವನಕ್ಕೆ ಅವಶ್ಯಕವಾಗಿದೆ ಎಂದು ಹಿರಿಯ ಸಾಹಿತಿ ಡಾ.ನೀಲಾಂಬಿಕಾ ಪಾಟೀಲ್ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕವಿ ಮಹಾಲಿಂಗಯ್ಯ ಕೆ.ಸ್ವಾಮಿ ವಿರಚಿತ ಬೊಗಸೆಯ ಚಂದಿರ ಕೃತಿಯನ್ನು ಜನಾರ್ಪಣೆಗೊಳಿಸಿ ಮಾತನಾಡಿದ ಡಾ.ನೀಲಾಂಬಿಕಾ ಪಾಟೀಲ್, ಯುವಕರಿಗೆ ಜೀವನ ಮೌಲ್ಯಗಳನ್ನು ಹೇಳಿಕೊಡುವ ಸಾಹಿತ್ಯ ಅವಶ್ಯವಾಗಿದೆ ಎಂದು ಹೇಳಿದರು.
ಕೃಷ್ಣಭಾಗ್ಯ ಜಲ ನಿಗಮ ನಿಯಮಿತದ ಮುಖ್ಯ ಇಂಜಿನಿಯರ್ ಪ್ರೇಮಸಿಂಗ್ ಮಾತನಾಡಿ, ಮಕ್ಕಳಿಗೆ ಮಾತೃ ಭಾಷೆಯ ಶಿಕ್ಷಣ ಕೊಡಿಸಬೇಕು. ಆ ಮೂಲಕ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು. ನಮ್ಮ ಕನ್ನಡವನ್ನು ಪ್ರೀತಿಸಿ ಅನ್ಯ ಭಾಷೆಯನ್ನು ಗೌರವಿಸಬೇಕು. ಈ ನೆಲದ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಮಕ್ಕಳು, ಯುವಕರಿಗೆ ಅನುಕೂಲವಾಗಲು ಕಮ್ಮಟಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಮಾತನಾಡಿ, ಸಮಾಜದ ಅಂತರಂಗದ ಕನ್ನಡಿಯೇ ಕಾವ್ಯ. ನಾವು ಬರೆಯುವ ಕಾವ್ಯಕ್ಕೆ ಸಾಮಾಜಿಕ ಪ್ರಜ್ಞೆ ಮತ್ತು ಕಳಕಳಿ ಹೊಂದಿರಬೇಕು. ಸಮಾಜದ ನೋವಿಗೆ ಕಾವ್ಯ ಪರಿಹಾರವಾಗಬೇಕಿದೆ ಎಂದರು.
ಸಾಹಿತಿ ಭೀಮರಾಯ ಹೇಮನೂರ ಕೃತಿ ಪರಿಚಯಿಸಿದರು. ಕೃತಿ ಲೇಖಕ ಮಹಾಲಿಂಗಯ್ಯ ಕೆ. ಸ್ವಾಮಿ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ಜಿಲ್ಲಾ ಕಸಾಪ ದ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ರಾಜೇಂದ್ರ ಮಾಡಬೂಳ, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ ವೇದಿಕೆ ಮೇಲಿದ್ದರು.