ದೇಶ ಕಷ್ಟದಲ್ಲಿದ್ದಾಗ ಮೋದಿ ವಿದೇಶ ಪ್ರಯಾಣ : ಪ್ರಿಯಾಂಕ್ ಖರ್ಗೆ ಆಕ್ರೋಶ
► ʼಆರ್ಥಿಕ ಸ್ಥಿತಿಗತಿ ಬಗ್ಗೆ ಸಂಸತ್ತಿನಲ್ಲೇ ಹೇಳಬೇಕಿತ್ತುʼ ► ʼಚಿನ್ನ ಖರೀದಿಸಬೇಡಿʼ ಎನ್ನುವ ಮೋದಿ NEET ಬಗ್ಗೆ ಮಾತಾಡಲ್ಲ: ಈಶ್ವರ್ ಖಂಡ್ರೆ
ಕಲಬುರಗಿ : ದೇಶ ಕಷ್ಟದ ಸ್ಥಿತಿಯಲ್ಲಿದ್ದಾಗ ಮಾತ್ರ ಪ್ರಧಾನಿ ಮೋದಿ ಅವರು ವಿದೇಶಕ್ಕೆ ಹೋಗುತ್ತಾರೆ. ಆರ್ಥಿಕ ಸ್ಥಿತಿಗತಿ, ಪೆಟ್ರೋಲಿಯಂ ಬೆಲೆ ಏರಿಕೆ ಬಗ್ಗೆ ಸಂಸತ್ತಿನಲ್ಲೇ ಹೇಳಬೇಕಿತ್ತು. ಆದರೆ ಇವರು ನೆದರ್ ಲ್ಯಾಂಡ್ಸ್ ಗೆ ಯಾಕೆ ಹೋಗಬೇಕಿತ್ತು? ಎಂದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ತಾಪುರ ಮತಕ್ಷೇತ್ರದ ಕಾಳಗಿ ತಾಲೂಕಿನ ಮಾಡಬೂಳ ಗ್ರಾಮದ ಬಳಿ ನಿರ್ಮಾಣವಾಗಿರುವ ನೂತನ ಮೃಗಾಲಯ ಉದ್ಘಾಟನೆ ನೆರವೇರಿಸಿದ ನಂತರದ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೆಟ್ರೋ ಹತ್ತಿರುವ ಬಗ್ಗೆ ಮಾದ್ಯಮಗಳು ಪದೇ ಪದೇ ಸುದ್ದಿ ಬಿತ್ತರಿಸುತ್ತಿವೆ. ಆದರೆ, ಈ ಪರಿಸ್ಥಿತಿಗೆ ಯಾರು ಕಾರಣ ಎಂದು ಯಾಕೆ ಕೇಳುತ್ತಿಲ್ಲ ಎಂದು ಟೀಕಿಸಿದರು.
ನೀಟ್ ಅಕ್ರಮ ಬಗ್ಗೆ ಮೋದಿ ಯಾಕೆ ಮಾತನಾಡುವುದಿಲ್ಲ : ಈಶ್ವರ್ ಖಂಡ್ರೆ
ಬೆಲೆ ಏರಿಕೆ ವಿಷಯ ಮರೆಮಾಚಲು ಮೋದಿ ಚಿನ್ನ ಖರೀದಿ ಮಾಡಬೇಡಿ ಎಂದು ಜನರಿಗೆ ಕರೆ ಕೊಡುತ್ತಾರೆ. ನೀಟ್ ಅಕ್ರಮ ಬಗ್ಗೆ ಮೋದಿ ಯಾಕೆ ಮಾತನಾಡುವುದಿಲ್ಲ. 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಇದಕ್ಕೆ ಯಾರು ಕಾರಣ? ಸಚಿವ ಧರ್ಮೆಂದ್ರ ಪ್ರಧಾನ್ ಅವರನ್ನು ಇನ್ನೂ ಸಚಿವರಾಗಿ ಮುಂದುವರೆಸಿದ್ದಾರೆ ಯಾಕೆ? ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಂ.ವೈ.ಪಾಟೀಲ್, ಅಲ್ಲಮಪ್ರಭು ಪಾಟೀಲ, ಎಂಎಲ್ಸಿ ಜಗದೇವ ಗುತ್ತೇದಾರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.