ಚಿಂತನ-ಮಂಥನ : ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಯಕ್ಷಗಾನ ಮಹಿಳಾ ಕಲಾವಿದರುಗಳ ಸಮಾವೇಶ

ಯಕ್ಷಗಾನದ ಮಹಿಳಾ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ಇಡ್ಯಾ ಶಕುಂತಲಾ ರಮಾನಂದ ಭಟ್

Update: 2026-08-12 13:03 IST

ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಆ.9 ರಂದು "ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ....!" ಎಂಬ ಶೀರ್ಷಿಕೆಯ ಸರಣಿ ಕಾರ್ಯಕ್ರಮ- ಯಕ್ಷಗಾನ ಮಹಿಳಾ ಕಲಾವಿದರುಗಳ ಸಮಾವೇಶ ನಡೆಯಿತು.

ವಿಶೇಷ ಚಿಂತನ-ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಕುಂತಳಾ ರಮಾನಂದ ಭಟ್ ರವರು "ಯಕ್ಷಗಾನ ಮಹಿಳಾ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ. ಸಿರಿಬಾಗಿಲು ಪ್ರತಿಷ್ಠಾನದ ಇಂತಹ ಗೋಷ್ಠಿಯಿಂದ ಮತ್ತಷ್ಟು ತೊಡಗಿಸಿಕ್ಕೊಳ್ಳುವಂತಾಗಲು ಸ್ಪೂರ್ತಿ ದೊರಕಿದಂತಾಯಿತು" ಎಂದರು.

ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಸರಗೋಡಿನ ಹಿರಿಯ ಕಲಾವಿದೆ ವಿಶ್ರಾಂತ ಪ್ರಾಧ್ಯಾಪಕಿ ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿಯವರು "ಇಂದು ಮಹಿಳೆಯರು ಸಮಾಜದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮುಖ್ಯ ವಾಹಿನಿಯಲ್ಲಿ ಕಾಣಿಸುತ್ತಿದ್ದಾರೆ. ಅವರಿಗೆ ಬೆಂಬಲವಾಗಿ ಇಂತಹ ವಿಚಾರ ಸಂಕಿರಣ ನಡೆದಾಗ ಆತ್ಮಸ್ಥೈರ್ಯ ಹೆಚ್ಚುತ್ತದೆ "ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟ ಪೂರ್ವ ಸದಸ್ಯರಾದ ನಿರ್ಮಲ ಹೆಗಡೆ ಶಿರಸಿ, ಜಯಲಕ್ಷ್ಮಿ ಆರ್. ಹೊಳ್ಳ ಕೈಯಾರು ಉಪಸ್ಥಿತರಿದ್ದರು.

ನಂತರ ವಿಶೇಷ ಚಿಂತನ ಮಂಥನ ಕಾರ್ಯಕ್ರಮದಲ್ಲಿ "ಮಹಿಳೆಯರು ಮತ್ತು ಯಕ್ಷಗಾನದ ಭವಿಷ್ಯ, ಯಕ್ಷಗಾನದಲ್ಲಿ ಮಹಿಳೆಯರು: ಅವಕಾಶ, ಸವಾಲು ಮತ್ತು ನಾಯಕತ್ವ, ಮಹಿಳಾ ಶಕ್ತಿ ಮತ್ತು ಯಕ್ಷಗಾನದ ಮುಂದಿನ ಪೀಳಿಗೆ, ಯಕ್ಷಗಾನದ ಬೆಳವಣಿಗೆಯಲ್ಲಿ ಮಹಿಳೆಯರ ಪೂರಕ ಪಾತ್ರ, ಭವಿಷ್ಯದ ಯಕ್ಷಗಾನ: ಮಹಿಳೆಯರ ದೃಷ್ಟಿ ಮತ್ತು ದಿಕ್ಕು" ಮುಂತಾದ ವಿಷಯಗಳಲ್ಲಿ ಜಯಂತಿ ಎಸ್. ಹೊಳ್ಳ ಕೃಷ್ಣಾಪುರ, ಲಲಿತಾ ಭಟ್ ಕುಳಾಯಿ, ನಿರ್ಮಲ ಹೆಗಡೆ ಶಿರಸಿ, ಪದ್ಮ ಆಚಾರ್ ಪುತ್ತೂರು, ವೃಂದಾ ಕೊನ್ನಾರ್ ಮುಂತಾದವರು ವಿಷಯ ಮಂಡಿಸಿದರು. ಡಾ. ಆರತಿ ಪಟ್ರಮೆ ತುಮಕೂರು ಸಂವಾದದ ಸಮಗ್ರ ಅವಲೋಕನ ನಡೆಸಿದರು.

ಉಪಾನ್ಯಾಸಕಿ ಸಾಯಿಸುಮಾ ನಾವಡ ಕಾರ್ಯಕ್ರಮ ನಿರೂಪಿಸಿದರು. ಸುಮಿತ್ರಾ ಆರ್. ಮಯ್ಯ ಅತಿಥಿಗಳನ್ನು ಸ್ವಾಗತಿಸಿದರು. ಯುವ ಭಾಗವತೆ ಹೇಮಸ್ವಾತಿ ಕುರಿಯಾಜೆ ಪ್ರಾರ್ಥಿಸಿದರು.

ಮಧ್ಯಾಹ್ನ ನಂತರ ನಡೆದ ಸಮರೋಪ ಸಮಾರಂಭದಲ್ಲಿ ಯಕ್ಷಗಾನದ ಹಿರಿಯ ಮಹಿಳಾ ಕಲಾವಿದೆ ಪೂರ್ಣಿಮಾ ಯತೀಶ್ ರೈ ಸುರತ್ಕಲ್ ಹಾಗೂ ಕೃತಿ ಪುರಪ್ಪೆಮನೆ ಸಾಗರ ಭಾಗವಹಿಸಿ ಮಾತನಾಡಿದರು. ನೂರಕ್ಕೂ ಹೆಚ್ಚಿನ ಮಹಿಳಾ ಕಲಾವಿದರು ಈ ಕಾರ್ಯಕ್ರಮದ ಸಂವಾದ ದಲ್ಲಿ ಭಾಗವಹಿಸಿದರು. ಕೊನೆಗೆ ಜಯಲಕ್ಷ್ಮಿ ಆರ್ ಹೊಳ್ಳ ಧನ್ಯವಾದ ವಿತ್ತರು.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News