ಕನಕಗಿರಿ | ಅಕ್ರಮ ಚಟುವಟಿಕೆ ಹತ್ತಿಕ್ಕಲು ಒತ್ತಾಯಿಸಿ ಧರಣಿ: 12 ಮಂದಿ ಸ್ವಯಂಪ್ರೇರಿತ ಪ್ರಕರಣ ದಾಖಲು
ಕನಕಗಿರಿ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕುವಂತೆ ಒತ್ತಾಯಿಸಿ ಸೋಮವಾರ ವಾಲ್ಮೀಕಿ ವೃತ್ತದಲ್ಲಿ ವಾಹನ ಸಂಚಾರ ತಡೆದು ಧರಣಿ ನಡೆಸಿದ್ದ ರಾಜ್ಯ ದಲಿತ ಸಂಘರ್ಷ ಸಮಿತಿಯ 12 ಮಂದಿಯ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ್ದಲ್ಲದೇ, ಪ್ರತಿಭಟನೆ ನಡೆಸದಂತೆ ಮನವಿ ಮಾಡಿದರೂ ಏಕಾಏಕಿ ರಸ್ತೆ ತಡೆದಿದ್ದಾರೆ. ಇದರಿಂದ ವಾಹನಗಳ ಸಂಚಾರ, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ. ಅಕ್ರಮ ಚಟುವಟಿಕೆಗಳನ್ನು ತಡೆಯಲು ಮುಂದಾಗುತ್ತಿಲ್ಲ. ಸತ್ತಾನೋ ಸತ್ತಾನೋ ತಹಶೀಲ್ದಾರ್ ಸತ್ತಾನೋ ಎಂದು ಘೋಷಣೆ ಮೂಲಕ ಪ್ರತಿಭಟನೆ ಮಾಡಿದ್ದರಿಂದ ಸಮಿತಿಯ ತಾಲೂಕು ಅಧ್ಯಕ್ಷ ಕನಕಪ್ಪ ಮ್ಯಾಗಡೆ, ಪ್ರಮುಖರಾದ ಮೈಲಪ್ಪ, ಕರಿಯಪ್ಪ, ಹುಲಗಪ್ಪ ಪೂಜಾರ, ಶರಣಪ್ಪ ಕ್ಯಾಡೇವು, ಅಲ್ಲಾಸಾಬ್, ಮರಿ ಹನುಮಂತ, ನಿಂಗಪ್ಪ ನಡಲಮನಿ, ಹನುಮೇಶ ದಾಸರ, ಸೂರ್ಯ ಕಂದಕೂರು, ದುರುಗೇಶ, ರವಿ ಬೇವೂರಪ್ಪ ಸೇರಿ ಇತರರ ಮೇಲೆ ಎಎಸ್ಸೈ ಅಬ್ದುಲ್ ರಝಾಕ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.