ಮೇ 30ರೊಳಗೆ ರಾಜ್ಯ ಸಂಪುಟ ಪುನರ್ ರಚನೆ: ರಾಯರೆಡ್ಡಿ
ಕೊಪ್ಪಳ: ಈ ತಿಂಗಳ 30ರ ಒಳಗಾಗಿ ಸಂಪುಟ ಪುನರ್ ರಚನೆ ಆಗುತ್ತದೆ, ಇಲ್ಲವೇ ವಿಸ್ತರಣೆ ಆಗುತ್ತದೆ ಎಂದು ಶಾಸಕ ಮತ್ತು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಎರಡು ವರ್ಷ ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ. ಒಂದು ವೇಳೆ ಪಕ್ಷದ ವರಿಷ್ಠರು ಬದಲಾವಣೆ ಬಯಸಿದರೆ ಸಿದ್ದರಾಮಯ್ಯರ ಮಟ್ಟದ ಅನುಭವಿಯಾಗಿರುವ ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಬೇಕೆಂಬುದು ನನ್ನ ಅಭಿಪ್ರಾಯವಾಗಿದೆ. ಆದರೆ ಮುಖ್ಯಮಂತ್ರಿ ಬದಲಾವಣೆ ಮಾಡುವುದು ಸರಿಯಲ್ಲ ಎಂದರು.
ಸಂಪುಟ ಪುನರ್ ರಚನೆಯಾಗಬೇಕು. ಏಕೆಂದರೆ ಮೂರು ವರ್ಷ ಕಳೆದಿರುವುದರಿಂದ ಹೊಸ ಮುಖಗಳನ್ನು ತಂದರೆ ಉತ್ತಮ ಆಡಳಿತ ಕೊಡಲು ಸಾಧ್ಯ. ಉತ್ತಮ ಆಡಳಿತ ಕೊಟ್ಟರೆ ಮುಂದಿನ ಚುನಾವಣೆಯಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ತರಲು ಅನುಕೂಲ ಆಗುತ್ತದೆ ಎಂದು ರಾಯರೆಡ್ಡಿ ಹೇಳಿದರು.
ಪ್ರಧಾನಿ ರಾಜೀನಾಮೆ ನೀಡಲಿ
ಪೆಟ್ರೋಲ್ ಡೀಸೆಲ್ ನ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ, ಈ ಬೆಲೆ ಏರಿಕೆ ಇಷ್ಟಕ್ಕೆ ನಿಲ್ಲುವುದಿಲ್ಲ ಇನ್ನೂ ಹೆಚ್ಚಾಗುತ್ತೇ 115 ರೂಪಾಯಿ ದಾಟುತ್ತದೆ. ಇದಕ್ಕೆ ಪ್ರಧಾನಿಯವರ ಆರ್ಥಿಕ ನೀತಿಗಳೇ ಕಾರಣ. ಆದ್ದರಿಂದ ಸಿದ್ದರಾಮಯ್ಯ ಹೇಳಿದಹಾಗೆ ಪ್ರಧಾನಿ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ದಿ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಕಚ್ಚಾತೈಲದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಅಂದ್ರೆ ಪ್ರತಿ ಬ್ಯಾರಲ್ ಗೆ 145 ಡಾಲರ್ ಇತ್ತು. ಆ ವೇಳೆ ನಮ್ಮ ದೇಶದಲ್ಲಿ ಪೆಟ್ರೋಲ್ ಬೆಲೆ 53 ರೂ. ಇತ್ತು, ಆದ್ರೆ ಇದೀಗ ಕಚ್ಚಾ ತೈಲದ ಬೆಲೆ 119 ಡಾಲರ್ ಇದೆ. ಇದಕ್ಕೆ ಕಾರಣ ಪ್ರಧಾನಿಯವರು ಟ್ರಂಪ್ ಗೆ ಹೆದರಿ ರಷ್ಯಾದಿಂದ ತೈಲ ಖರೀದಿ ಮಾಡದಿರುವುದು ಎಂದು ಹೇಳಿದರು.
ರೂಪಾಯಿ ಮೌಲ್ಯ ಕುಸಿದಿದೆ, ರಪ್ತು ಕಡಿಮೆ ಆಗುತ್ತಿದೆ ಆಮದು ಹೆಚ್ಚಾಗುತ್ತಿದೆ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಬೇಡಿಕೆ ಕುಸಿಯುತ್ತಿದೆ ಇದನ್ನೆಲ್ಲ ಸರಿ ಪಡಿಸಬೇಕೆಂದರೆ ಪ್ರಧಾನಿ ರಾಜೀನಾಮೆ ನೀಡಿ ಆರ್ಥಿಕ ತಜ್ಞ ರನ್ನು ಪ್ರಧಾನಿ ಮಾಡಬೇಕು ಎಂದು ಆಗ್ರಹಿಸಿದರು.