ಕನಕಗಿರಿಯ ವಿವಿಧೆಡೆ ಮೊಹರಂ ಆಚರಣೆ
ಕನಕಗಿರಿ : ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಮೊಹರಂ ಹಬ್ಬವನ್ನು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶಾಂತಿಯುತ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.
ಗುರುವಾರ ರಾತ್ರಿ ನಡೆದ ಖತ್ತಲ್ರಾತ್ರಿ ಆಚರಣೆಯಲ್ಲಿ ಭಕ್ತರು ಇಡೀ ರಾತ್ರಿ ಅಲಾಯಿ ಕುಣಿಯ ಮುಂದೆ ಹಲಗೆ ಸೇರಿದಂತೆ ವಿವಿಧ ವಾದ್ಯಗಳನ್ನು ನುಡಿಸಿ ಸಂಭ್ರಮಿಸಿದರು. ಶುಕ್ರವಾರ ಸಂಜೆ ಪೀರರ ದೇವರುಗಳು ಪರಸ್ಪರ ಎದುರಾಗುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜಬೀದಿಯಲ್ಲಿ ಜನಸಾಗರವೇ ಹರಿದುಬಂದಿತ್ತು.
ಬೆಳಗಿನ ಜಾವ ಹೊನ್ನುರುಬಾಷ, ಹಟೇಲಬಾಷ ಹಾಗೂ ಹಸೇನಬಾಷ ದೇವರುಗಳು ಹರಕೆ ಹೊತ್ತ ಮನೆಗಳಿಗೆ ಭೇಟಿ ನೀಡಿದ ವೇಳೆ ಭಕ್ತರು ಮುಜಾವರರ ಪಾದಗಳಿಗೆ ನೀರು ಹಾಕಿ ನಮಸ್ಕರಿಸಿ, ಹೂವಿನ ಹಾರ, ನೋಟಿನ ಹಾರ, ಸಕ್ಕರೆ ಸೇರಿದಂತೆ ವಿವಿಧ ಕಾಣಿಕೆಗಳನ್ನು ಸಮರ್ಪಿಸಿ ಭಕ್ತಿಭಾವ ಮೆರೆದರು.
ಪ್ರತಿ ವರ್ಷದ ಸಂಪ್ರದಾಯದಂತೆ ಹೊನ್ನುರುಬಾಷ ದೇವರು ಉಪ ತಹಶೀಲ್ದಾರ್ ಕಚೇರಿಗೆ ಹಾಗೂ ಹಸೇನಬಾಷ ದೇವರು ಕನಕಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಹೆಜ್ಜೆ ಕುಣಿತ, ಅಲಾಯಿ ಕುಣಿತ, ಭಜಂತ್ರಿ, ಯುವಕರ ನೃತ್ಯ, ಬಾಣ ಮತ್ತು ಬಿರುಸು ಪ್ರದರ್ಶನಗಳು ವಿದಾಯ ಮೆರವಣಿಗೆಗೆ ವಿಶೇಷ ಮೆರುಗು ತಂದವು.
ಬೆಂಗಳೂರು, ಹುಬ್ಬಳ್ಳಿ, ಬಳ್ಳಾರಿ, ಸಿಂಧನೂರು, ಕೊಪ್ಪಳ, ಗದಗ, ಗಂಗಾವತಿ, ಬಾಗಲಕೋಟೆ ಹಾಗೂ ಹೊಸಪೇಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.