×
Ad

ಮದ್ದೂರು | ಬೈಕಿನಲ್ಲಿ ತೆರಳುತ್ತಿದ್ದ ಯುವಕನನ್ನು ಅಡ್ಡಗಟ್ಟಿ ಕೊಲೆ

Update: 2026-05-20 14:46 IST

ಮಂಡ್ಯ: ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕನೋರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆಗೈದ ಘಟನೆ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಮದ್ದೂರು ತಾಲೂಕಿನ ಚುಂಚಗಳ್ಳಿ ಗ್ರಾಮದ ಸುನೀಲ್ (29) ಕೊಲೆಯಾದ ಯುವಕ.

ಘಟನೆ ವಿವರ: ಸುನೀಲ್ ತನ್ನ ಸ್ನೇಹಿತರಾದ ಸತೀಶ್, ಸಿದ್ದರಾಜು ಎಂಬವರೊಂದಿಗೆ ಮಂಗಳವಾರ ರಾತ್ರಿ 9:30ರ ಸುಮಾರಿಗೆ ಕೆ.ಹೊನ್ನಲಗೆರೆಯ ದೀಪ ಬಾರ್ ಗೆ ತೆರಳಿದ್ದರು. ಅಲ್ಲಿ ಮದ್ಯಪಾನ ಮಾಡುತ್ತಿದ್ದ ವೇಳೆ ತಂಡವೊಂದು ಬಾರ್ ಕ್ಯಾಶಿಯರ್ ಜೊತೆ ಮಾತಿನ ಚಕಮಕಿ ನಡೆಸಿದೆ. ಈ ವೇಳೆ ಸುನೀಲ್ ಮತ್ತು ಸ್ನೇಹಿತರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ನಂತರ ಸುನೀಲ್ ಮತ್ತು ಸ್ನೇಹಿತರು ಒಂದೇ ಬೈಕಿನಲ್ಲಿ 10:30ರ ವೇಳೆ ಚುಂಚಗನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಕೆ.ಹೊನ್ನಲಗೆರೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದ ತಲುಪಿದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಇವರ ಬೈಕನ್ನು ಅಡ್ಡಗಟ್ಟಿ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಸುನೀಲ್ ಕುತ್ತಿಗೆ ಭಾಗಕ್ಕೆ ಮಾರಕಾಯುಧದಿಂದ ದಾಳಿ ನಡೆಸಿ ಪರಾರಿಯಾಗಿದೆ ಎನ್ನಲಾಗಿದೆ.

ವಿಷಯ ತಿಳಿದ ಮದ್ದೂರು ಪೋಲೀಸ್ ಠಾಣೆಯ ವೃತ್ತ ನಿರೀಕ್ಷಕ ನವೀನ್ ಹಾಗೂ ಸಿಬ್ಬಂದಿ ಗಾಯಾಳು ಸುನೀಲ್ ನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಸುನೀಲ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಿಮ್ಸ್ ಆಸ್ಪತ್ರೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿ.ಜೆ.ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದಾರೆ.

ಈ ಸಂಬಂಧ ಮದ್ದೂರು ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News