ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರ | ಬೂತ್ ಸಂಖ್ಯೆ 161ರ ಬಿಎಲ್ಒ ಲಕ್ಷ್ಮಿಕಾಂತ್ ರಾವ್ ಕಾರ್ಯವೈಖರಿ ವಿರುದ್ಧ ಅಸಮಾಧಾನ
ಮಂಗಳೂರು, ಸೆ.8: ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬೂತ್ ಸಂಖ್ಯೆ 161ರಲ್ಲಿ ಬಿಎಲ್ಒ ಆಗಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮಿಕಾಂತ್ ರಾವ್ರ ಕಾರ್ಯವೈಖರಿಯ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಸ್ಐಆರ್ ಎನ್ಮುರೇಶನ್ ಪ್ರಕ್ರಿಯೆ ನಡೆಯುವ ಸಂದರ್ಭ ಈ ಭಾಗದ ಬಿಎಲ್ಒ ಆಗಿರುವ ಲಕ್ಷ್ಮಿಕಾಂತ್ ರಾವ್ಗೆ ಮತದಾರರ ವಿವರಗಳಲ್ಲಿ ಕಂಡುಬಂದಿದ್ದ ಹೊಂದಾಣಿಕೆ ಸಮಸ್ಯೆಗಳನ್ನು ಸರಿಪಡಿಸಲು ಸಾಕಷ್ಟು ಸಮಯವಕಾಶ ಇದ್ದರೂ ಕೂಡ ಸೂಕ್ತ ಕ್ರಮ ಕೈಗೊಳ್ಳದೆ ಕಾಲಹರಣ ಮಾಡಿದ್ದಾರೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ.
ಎನ್ಮುರೇಶನ್ ಫಾರ್ಮ್ ಪ್ರಕ್ರಿಯೆಯ ನಂತರ ಹೆಸರು ತಾಳೆ ಆಗಿರುವ ಮತದಾರರ ಪಟ್ಟಿ ಬಿಎಲ್ಒಗಳಿಗೆ ಲಭ್ಯವಾಗಿತ್ತು. ಇತರ ವಾರ್ಡ್ಗಳ ಅನೇಕ ಬೂತ್ಗಳಲ್ಲಿ ಬಿಎಲ್ಒಗಳು ಮತದಾರರಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಿ, ಅಗತ್ಯ ದಾಖಲೆಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಕಾಲಕ್ಕೆ ಮನವರಿಕೆ ಮಾಡಿಕೊಟ್ಟ ಕಾರಣ ಹಲವಾರು ಮತದಾರರು ಸಮಯಕ್ಕೆ ಸರಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯವಾಗಿದೆ. ಆದರೆ ಬೂತ್ ಸಂಖ್ಯೆ 161ರಲ್ಲಿ ಸುಮಾರು 290ಕ್ಕೂ ಅಧಿಕ ಮತದಾರರು ನೋಟಿಸ್ ಪಡೆಯುವ ಪರಿಸ್ಥಿತಿ ಉಂಟಾಗಿದೆ. ಆ ಪೈಕಿ ಹಲವರು ಗಲ್ಫ್ ರಾಷ್ಟ್ರಗಳಲ್ಲಿ ಮತ್ತು ಕೆಲವರು ಹೊರ ಜಿಲ್ಲೆ/ರಾಜ್ಯಗಳಲ್ಲಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಬಿಎಲ್ಒ ನಿರ್ಲಕ್ಷ್ಯದಿಂದ ನೋಟಿಸ್ ಸ್ವೀಕರಿಸುವ ಸಂದರ್ಭ ಮತದಾರರು ಸ್ವತಃ ಹಾಜರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅನೇಕರು ತೊಂದರೆಗೊಳಗಾಗಿದ್ದಾರೆ. ಅರ್ಹ ಮತದಾರರಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ಮತ್ತು ಮಾರ್ಗದರ್ಶನ ದೊರೆತಿದ್ದರೆ ಈ ಸಮಸ್ಯೆ ಸೃಷ್ಟಿಯಾಗುವುದನ್ನು ತಪ್ಪಿಸಬಹುದಿತ್ತು ಎಂದು ಸಾರ್ವಜನಿಕರ ಅಭಿಪ್ರಾಯ ಪಟ್ಟಿದ್ದಾರೆ.
ಎನ್ಮುರೇಶನ್ ಫಾರ್ಮ್ ವಿತರಣೆ ವೇಳೆ ಬಿಎಲ್ಒ ಲಕ್ಷ್ಮಿಕಾಂತ್ರ ಕಾರ್ಯವೈಖರಿಯ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿತ್ತು. ಆದರೂ ಸಂಬಂಧಪಟ್ಟ ಅಧಿಕಾರಿಗಳು ಬಿಎಲ್ಒ ವಿರುದ್ಧ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದೀಗ ಮತ್ತೆ ಹೊಂದಾಣಿಕೆಯಾಗದ ಸಮಸ್ಯೆಯಿಂದ ನೂರಾರು ಮತದಾರರು ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.