ʼಕರ್ನಾಟಕ ಬಂದ್ʼ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ: ವಾಟಾಳ್ ನಾಗರಾಜ್

Update: 2026-08-02 20:17 IST

ಮೈಸೂರು : ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೆಂಬ ಸಿಡಬ್ಲ್ಯೂಎಂಎ ಆದೇಶವನ್ನು ಖಂಡಸಿ ಹಾಗೂ ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಆಗಸ್ಟ್ 13 ರಂದು ಕರ್ನಾಟಕ ಬಂದ್ ಗೆ ಕರೆಯನ್ನು ಕೊಟ್ಟಿದ್ದೇವೆ. ಸರಕಾರ ಬಂದ್ ಮಾಡುವುದು ಬೇಡ ಎಂದು ಮನವಿ ಮಾಡುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಬಂದ್ ವಾಪಸ್ ಪಡೆಯುವ ಮಾತೇ ಇಲ್ಲ ಎಂದು ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ರವಿವಾರ ಹಾರ್ಡಿಂಜ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕರ್ನಾಟಕ ಬಂದ್ ಕೇವಲ ಕಾವೇರಿ ನೀರು ಹಂಚಿಕೆ ವಿಚಾರ ಒಂದಕ್ಕೆ ಅಲ್ಲ. ಮೇಕೆದಾಟು, ಕಳಸ ಬಂಡೂರಿ ಯೋಜನೆ, ಗಡಿನಾಡಿನ ಸಮಸ್ಯೆ, ಬೆಳಗಾವಿಯಲ್ಲಿ ಎಂಇಎಸ್ ನಿಷೇಧ, ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ, ಪರ ಭಾಷಿಗರ ದಬ್ಬಾಳಿಕೆ ಸೇರಿದಂತೆ ಹತ್ತು ಹಲವು ವಿಚಾರಗಳನ್ನು ಮುಂದಿಟ್ಟು ಬಂದ್ ಗೆ ಕರೆ ನೀಡಲಾಗಿದೆ. ಈಗಾಗಲೇ ರಾಜ್ಯದಲ್ಲಿರುವ ಎಲ್ಲ ಕನ್ನಡಪರ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ. ಬಂದ್ ವಾಪಸ್ ತೆಗೆದುಕೊಳ್ಳಬೇಕು ಎಂದು ಸರಕಾರ ಹೇಳುವುದು ಸಹಜ. ಆದರೆ, ನಾವು ಬಂದ್ ವಾಪಸ್ ಪಡೆಯೋ ಮಾತೇ ಇಲ್ಲ. ಆಗಸ್ಟ್ 13 ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರಗೆ ಕರ್ನಾಟಕ ಬಂದ್ ಇರುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದರು.

ಕರ್ನಾಟಕ ಬಂದ್ ಮಾಡುವುದರಿಂದ ಸಾರ್ವಜನಿಕರಿಗೆ ಏನೂ ತೊಂದರೆ ಆಗಲ್ಲ. ನಾವು ಹೋರಾಟ ಮಾಡುತ್ತಿರುವುದು ಕನ್ನಡಿಗರಿಗಾಗಿ. ನಮಗೇ ನೀರಿಲ್ಲ ಅಂದ ಮೇಲೆ ತಮಿಳುನಾಡಿಗೆ ಹೇಗೆ ಬಿಡಲು ಸಾಧ್ಯ.? ಯಾವುದೇ ಕಾರಣಕ್ಕೂ ನೀರು ಬಿಡ ಕೂಡದು. ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶ ಪಾಲಿಸುವ ಅಗತ್ಯ ಇಲ್ಲ. ಒಂದು ವೇಳೆ ಹೆಚ್ಚು ಮಳೆ ಬಿದ್ದು ನಮ್ಮ ಜಲಾಶಯಗಳು ತುಂಬಿದ ನಂತರ ಹೆಚ್ಚುವರಿ ನೀರು ಬಿಡಲಿ. ನಮ್ಮ ಜಲಾಶಯಗಳೇ ಇನ್ನೂ ತುಂ‌ಬಿಲ್ಲ. ನಮಗೆ ಕುಡಿಯಲಿಕ್ಕೆ ನೀರಿಲ್ಲ. ತಮಿಳುನಾಡಿಗೆ ವ್ಯವಸಾಯ ಮಾಡುವುದಕ್ಕೆ ನೀರು ಬಿಡಬೇಕಂತೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಮೈಸೂರಿನ ಕನ್ನಡಪರ ಸಂಘಟನೆಗಳ ಮುಖಂಡರಾದ ತೇಜಸ್ ಲೋಕೇಶ್ ಗೌಡ, ಮೂಗೂರು ನಂಜುಂಡಸ್ವಾಮಿ, ಪಾರ್ಥಸಾರಥಿ, ಗೋಪಿನಾಥ್, ಮುನ್ನ, ರವೀಶ್,ರಾಧಾಕೃಷ್ಣ, ಮಂಜುಳ ಮತ್ತು ಭಾಗ್ಯಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News